ಕಣ್ಮರೆಯಾಗಿದ್ದ ಬೇಲೂರು ಟೆಕ್ಕಿ ಹೈದರಾಬಾದಿನಲ್ಲಿ ಪತ್ತೆ
ಹೈದರಾಬಾದ್, ಫೆಬ್ರವರಿ,10: ಎರಡು ದಿನಗಳಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ ಅನುಶ್ರೀ ಅವರು ಹೈದರಾಬಾದಿನ ಪಠಾಣ್ ಚೆರುವಿನಲ್ಲಿ ಪತ್ತೆಯಾಗಿದ್ದು, ಇವರನ್ನು ಚಿಕಿತ್ಸೆ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಹೈದರಾಬಾದಿನ ಪಠಾಣ್ ಚೆರುವಿನಲ್ಲಿ ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾದ ಅನುಶ್ರೀ ನೋಡಲು ತಂದೆ ಎಚ್ ಟಿ ಪ್ರಭಾಕರ್ ಹಾಗೂ ಸಹೋದರಿ ಅಶ್ವಿನಿ ಪಠಾಣ್ ಚೆರುವಿನ ಆಸ್ಪತ್ರೆಗೆ ತೆರಳಲಿದ್ದು, ಈಕೆಯ ನಾಪತ್ತೆಯ ಕಾರಣ ಇನ್ನೂ ಲಭ್ಯವಾಗಬೇಕಿದೆ.[ಬೇಲೂರಿನ ಮಹಿಳಾ ಟೆಕ್ಕಿ ಹೈದರಾಬಾದಿನಲ್ಲಿ ಕಣ್ಮರೆ]
ಅನುಶ್ರೀ ಅವರು ಗಚ್ಚಿ ಬೌಲಿ ಸಮೀಪದ ಪಿಜಿಯೊಂದರಲ್ಲಿ ತಂಗಿದ್ದರು. ಪಿಜಿಯಲ್ಲಿದ್ದ ಸಿಸಿಟಿವಿ ಕ್ಯಾಮರ ಸಹಾಯದಿಂದ ಅವರು ಪಿಜಿಯಿಂದ ಹೊರಗೆ ಹೋಗಿರುವುದು ತಿಳಿದು ಬಂದಿದೆ. ಆದರೆ ಎಲ್ಲಿಗೆ ಹೋಗಿದ್ದರು ಎಂಬ ಕಾರಣ ತಿಳಿದು ಬಂದಿಲ್ಲ. ಗಚ್ಚಿ ಬೌಲಿ ಠಾಣಾ ಪೊಲೀಸರು ಇದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.
ಅನುಶ್ರೀ ಮೂಲತಃ ಹಾಸನ ಜಿಲ್ಲೆಯ ಬೇಲೂರಿನ ತಾಲೂಕಿನ ಹಳೇಬೀಡಿನ ಬ್ರಾಹ್ಮಣ ಬೀದಿಯ ನಿವಾಸಿ ಎಚ್ ಟಿ ಪ್ರಭಾಕರ್ ಅವರ ಮಗಳು. ಈಕೆ ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್)ನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.[ಟೆಕ್ಕಿಗೆ ಸಾವು ತಂದ ಹೊಸವರ್ಷ, ಮನೆಯಲ್ಲಿ ದುಃಖದ ಹೊಳೆ]
ಅನುಶ್ರೀ ಅವರು ನಾಪತ್ತೆಯಾಗುವ ಮೊದಲು ಅವರ ತಂದೆ ಪ್ರಭಾಕರ್ ಗೆ ಕರೆ ಮಾಡಿ ಅನಾರೋಗ್ಯದ ಬಗ್ಗೆ ತಿಳಿಸಿದ್ದರು. ಏಕಾಏಕಿ ಕಾಣೆಯಾಗಿದ್ದ ಈಕೆಯ ಬಗ್ಗೆ ಸ್ನೇಹಿತರು, ಸಹೋದ್ಯೋಗಿಗಳಿಗೂ ಯಾವುದೇ ನಿಖರ ಮಾಹಿತಿ ಇರಲಿಲ್ಲ.