'ತಾಲಿಬಾನ್ ಅಫ್ಘಾನ್ ವಶಪಡಿಸಿಕೊಂಡಿದ್ದರಿಂದ ಭಾರತಕ್ಕೆ ಯಾವುದೇ ಗಂಭೀರ ಅಪಾಯವಿಲ್ಲ': ಒಮರ್ ಅಬ್ದುಲ್ಲಾ
ಹೈದರಾಬಾದ್, ಆ.16: ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಸೋಮವಾರ ''ಭಾರತದ ಗಡಿಗಳನ್ನು ಚೆನ್ನಾಗಿ ರಕ್ಷಿಸಿರುವುದರಿಂದ ಅಫ್ಘಾನಿಸ್ತಾನವನ್ನು ತಾಲಿಬಾನ್ ಸ್ವಾಧೀನಪಡಿಸಿಕೊಳ್ಳುವುದರಿಂದ ಭಾರತಕ್ಕೆ ಯಾವುದೇ ಗಂಭೀರ ಅಪಾಯವಿಲ್ಲ,'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಹೈದರಾಬಾದ್ನ ರುದ್ರಾರಂನಲ್ಲಿರುವ ಗೀತಂ ವಿಶ್ವವಿದ್ಯಾಲಯದ ಕೌಟಿಲ್ಯ ಸ್ಕೂಲ್ ಆಫ್ ಪಬ್ಲಿಕ್ ಪಾಲಿಸಿಯ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಭಾಗವಹಿಸಿದ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಕಳೆದ ಕೆಲವು ವರ್ಷಗಳಲ್ಲಿ ಭಾರತವು ಒಳನುಸುಳುವಿಕೆಯನ್ನು ಸಮರ್ಥವಾಗಿ ನಿಲ್ಲಿಸಿದೆ ಎಂದು ಹೇಳಿದರು.
ಯುದ್ಧ ಮುಗಿದಿದೆ ಎಂದ ತಾಲಿಬಾನ್: ಉಗ್ರರ ನೀತಿ ಜಾರಿ ಬಂದಾಗ ಏನಾದೀತು ಅಫ್ಘನ್ ಸ್ಥಿತಿ?
"ಭಾರತದ ಗಡಿಗಳು ಬಲಿಷ್ಠವಾಗಿದೆ. ಹಾಗಾಗಿ ಭಾರತದ ಭಾಗದಲ್ಲಿ ಗಡಿಯುದ್ದಕ್ಕೂ ತಾಲಿಬಾನ್ ಸ್ವಾಧೀನದ ಯಾವುದೇ ಪರಿಣಾಮವನ್ನು ನಾನು ಕಾಣುತ್ತಿಲ್ಲ," ಎಂದು ಒಮರ್ ಅಬ್ದುಲ್ಲಾ ತಿಳಿಸಿದರು.
ಗೀತಂ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಒಬ್ಬ ವಿದ್ಯಾರ್ಥಿಯು ನೀವು ಪ್ರಧಾನಿಯಾಗಿದ್ದಲ್ಲಿ ಅಭಿವೃದ್ಧಿಗೆ ಹೇಗೆ ಪ್ರತಿಕ್ರಿಯಿಸುತ್ತೀರಿ ಎಂದು ಪ್ರಶ್ನಿಸಿದ್ದು, ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ, ಮಾನವೀಯತೆಯ ಆಧಾರದ ಮೇಲೆ ಭಾರತದಲ್ಲಿ ಸಾಧ್ಯವಾದಷ್ಟು ನಿರಾಶ್ರಿತರಿಗೆ ಆಶ್ರಯ ನೀಡಲು ಪ್ರಯತ್ನಿಸುವುದಾಗಿ ಹೇಳಿದರು. ಹಾಗೆಯೇ ಹಗುರವಾದ ಧಾಟಿಯಲ್ಲಿ ಒಮರ್ ಅಬ್ದುಲ್ಲಾ, ''ನಾನು ಎಂದಿಗೂ ಪ್ರಧಾನ ಮಂತ್ರಿಯಾಗುವ ಅವಕಾಶವನ್ನು ಪಡೆಯುವುದಿಲ್ಲ ಅಥವಾ ಅಂತಹ ಕನಸುಗಳನ್ನು ಹೊಂದಿಲ್ಲ," ಎಂದು ಸ್ಪಷ್ಟನೆ ನೀಡಿದರು.
ಭಾರತ ಮತ್ತು ಪಾಕಿಸ್ತಾನ ಸಂಬಂಧಗಳ ಕುರಿತು ವಿದ್ಯಾರ್ಥಿಯೋರ್ವ ಕೇಳಿ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಒಮರ್, ಭಾರತ ಮತ್ತು ಪಾಕಿಸ್ತಾನ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಕಾಶ್ಮೀರವು ಒಂದು ದೊಡ್ಡ ಅಡಚಣೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಗೆಯೇ, "ನೇಪಾಳದೊಂದಿಗೆ ನಮ್ಮ ಸಂಬಂಧವನ್ನು ಪರಿಶೀಲಿಸಿದಾಗ ನಾವು ಏರಿಳಿತದಲ್ಲಿದ್ದೇವೆ. ಕಾಶ್ಮೀರ ಸಮಸ್ಯೆ ಇತ್ಯರ್ಥವಾದರೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ," ಎಂದು ಕೂಡಾ ಇದೇ ಸಂದರ್ಭದಲ್ಲಿಯೇ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಅಭಿಪ್ರಾಯಿಸಿದರು.
ತಾಲಿಬಾನ್ 'ಗುಲಾಮಗಿರಿಯ ಸಂಕೋಲೆಗಳನ್ನು ಮುರಿದಿದೆ' ಎಂದ ಪಾಕ್ ಪ್ರಧಾನಿ!
ಎಂಟು ತಿಂಗಳುಗಳ ಕಾಲ ಗೃಹಬಂಧನದಲ್ಲಿದ್ದಾಗ ಸಂವಿಧಾನದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದೀರಾ ಎಂದು ಕೂಡಾ ವಿದ್ಯಾರ್ಥಿಯೋರ್ವರು ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಅಬ್ದುಲ್ಲಾ, "ಬಂಧನವನ್ನು ಬಲವಾಗಿ ವಿರೋಧಿಸಿದರೂ ಭಾರತದ ಕಲ್ಪನೆ ಎಲ್ಲಕ್ಕಿಂತ ಮುಖ್ಯ," ಎಂದು ಹೇಳಿದರು. "ದೇಶದಲ್ಲಿ ವ್ಯಕ್ತಿಗಳು ಅಥವಾ ಕೆಲವು ರಾಜಕೀಯ ಪಕ್ಷಗಳು ಮತ್ತು ನಾಯಕರು ಇಂತಹ ಸಮಸ್ಯೆಗಳನ್ನು ಎದುರಿಸಬಹುದು," ಎಂದು ಹೇಳಿದ ಮಾಜಿ ಮುಖ್ಯಮಂತ್ರಿ, "ಸರ್ಕಾರದ ಇಂತಹ ನಿರ್ಧಾರಗಳ ವಿರುದ್ಧ ಜನರು ಧ್ವನಿ ಎತ್ತಬೇಕು," ಎಂದು ಕರೆ ನೀಡಿದರು.
"ಸಂವಿಧಾನವು 1.3 ಬಿಲಿಯನ್ ಜನರಿಗೆ, ಒಬ್ಬ ವ್ಯಕ್ತಿಗೆ ಅಲ್ಲ," ಎಂದು ಹೇಳಿದ ಒಮರ್ ಅಬ್ದುಲ್ಲಾ, ಜಮ್ಮು ಮತ್ತು ಕಾಶ್ಮೀರದ ಜನರು ವಿಭಜನೆಯಿಂದ ಸಂತೋಷವಾಗಿಲ್ಲ ಎಂದು ತಿಳಿಸಿದರು. "ಬಿಜೆಪಿ ಸರ್ಕಾರ ಕಳೆದ ಎರಡು ವರ್ಷಗಳಲ್ಲಿ ಏನು ಮಾಡಿದೆ ಎಂಬುದನ್ನು ವಿವರಿಸಬೇಕು. ಜಮ್ಮು ಮತ್ತು ಕಾಶ್ಮೀರದಲ್ಲಿ 73 ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಜನರಲ್ಲಿ ವಿಶ್ವಾಸವನ್ನು ಪುನಃಸ್ಥಾಪಿಸಲು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ನಲ್ಲಿ ಮತ್ತೊಮ್ಮೆ ಚುನಾವಣೆ ನಡೆಸಬೇಕು," ಎಂದು ಒತ್ತಾಯ ಮಾಡಿದರು.
''ಕಾಶ್ಮೀರಿ ಯುವಕರು ಏಕೆ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ" ಎಂಬ ಪ್ರಶ್ನೆಗೆ, ಅಬ್ದುಲ್ಲಾ, ''ಯಾರಾದರೂ ಸರ್ಕಾರದ ನಿರ್ಧಾರಗಳ ವಿರುದ್ಧ ಧ್ವನಿ ಎತ್ತಿದಾಗ ಸರ್ಕಾರವು ಜನರ ಸಮಸ್ಯೆಗಳನ್ನು ಆಲಿಸಬೇಕು," ಎಂದು ಹೇಳಿದರು. ಅಬ್ದುಲ್ಲಾ ಬದಲಾವಣೆಯನ್ನು ತರಲು ರಾಜಕೀಯಕ್ಕೆ ಸೇರುವಂತೆ ಸಾರ್ವಜನಿಕ ನೀತಿ (ಎಂಪಿಪಿ) ಯ ಮೊದಲ ಬ್ಯಾಚಿನ ವಿದ್ಯಾರ್ಥಿಗಳಿಗೆ ಕರೆ ನೀಡಿದರು. "ಭಾರತೀಯ ರಾಜಕಾರಣಕ್ಕೆ ಹೊಸ ಮುಖಗಳು ಮತ್ತು ಚಿಂತನೆಯ ಅಗತ್ಯವಿದೆ," ಎಂದು ತಿಳಿಸಿದರು. ಇತರ ವೃತ್ತಿಗಳಲ್ಲಿ ಸವಾಲುಗಳಿರುವಂತೆ ರಾಜಕೀಯದಲ್ಲಿ ಸವಾಲುಗಳಿವೆ ಎಂದು ಕೂಡಾ ವಿದ್ಯಾರ್ಥಿಗಳಿಗೆ ತಿಳಿಸಿದರು.
Recommended Video
(ಒನ್ಇಂಡಿಯಾ ಸುದ್ದಿ)