ಸಿಡ್ನಿ ಪ್ರಕರಣ: ಇನ್ಫೋಸಿಸ್ ಟೆಕ್ಕಿ ಕುಟುಂಬ ಫುಲ್ ಖುಷ್
ಹೈದರಾಬಾದ್, ಡಿ.16: ಒಪೆರಾ ಹೌಸ್ ನ ಮಾರ್ಟಿನ್ ಪ್ಲೇಸಿನ ಕೆಫೆಯಲ್ಲಿ ಉಗ್ರರ ಒತ್ತೆಯಾಳಾಗಿದ್ದ ಇನ್ಫೋಸಿಸ್ ನ ಉದ್ಯೋಗಿ ವಿಶ್ವಕಾಂತ್ ಅಂಕಿ ರೆಡ್ಡಿ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಇರಾಕಿ ಉಗ್ರರ ಕಣ್ತಪ್ಪಿಸಿ Lindt Chocolat Cafeಯಿಂದ ಮೂವರು ಒತ್ತೆಯಾಳುಗಳು ಹೊರ ಬಂದಿರುವ ಸುದ್ದಿ ಬಂದ ಬೆನ್ನಲ್ಲೇ ಇನ್ಫೋಸಿಸ್ ಸಂಸ್ಥೆಯ ಸಾಫ್ಟ್ ವೇರ್ ಇಂಜಿನಿಯರ್ ವಿಶ್ವಕಾಂತ್ ರೆಡ್ಡಿ ಉಗ್ರರ ವಶದಲ್ಲಿರುವ ಬಗ್ಗೆ ಮಾಹಿತಿ ಬಂದಿತ್ತು. ಈ ವಿಷಯ ಕೇಳಿ ಗುಂಟೂರು ಮೂಲದ ಅಂಕಿ ರೆಡ್ಡಿ ಕುಟುಂಬ ಸಹಜವಾಗಿ ಕಂಗಾಲಾಗಿತ್ತು.
'ನಮ್ಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೈದರಾಬಾದ್ ಮೂಲದ ವಿಶ್ವಕಾಂತ್ ರೆಡ್ಡಿ ಅವರು ಉಗ್ರರ ವಶದಲ್ಲಿದ್ದಾರೆ. ಸಂಸ್ಥೆಯ ಇತರೆ ಉದ್ಯೋಗಿಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಭಾರತೀಯ ರಾಯಭಾರ ಕಚೇರಿಗೆ ಮಾಹಿತಿಗಾಗಿ ಕೋರಲಾಗಿದೆ ಎಂದು ಇನ್ಫೋಸಿಸ್ ಪ್ರಕಟಿಸಿತ್ತು.
ಆದರೆ, ಉಗ್ರರ ಕಪಿಮುಷ್ಟಿಯಿಂದ ವಿಶ್ವಕಾಂತ್ ಹೊರಕ್ಕೆ ಓಡಿ ಬರುತ್ತಿರುವ ದೃಶ್ಯ ಟಿವಿಯಲ್ಲಿ ನೋಡುತ್ತಿದ್ದಂತೆ ವಿಶ್ವಕಾಂತ್ ಅವರ ತಾಯಿ ಸುಲೋಚನಾ ಅವರ ಕಣ್ಣಾಲಿಗಳು ತುಂಬಿ ಬಂದಿತು. ಒತ್ತೆಯಾಳು ಪ್ರಕರಣ ಬಗ್ಗೆ ಸುದ್ದಿ ಬರುತ್ತಿದ್ದಂತೆ ಗುಂಟೂರಿನ ಪಲ್ಲೆಗ್ರಾಮದ ಅಂಕಿರೆಡ್ಡಿ ಈಶ್ವರರೆಡ್ಡಿ(ವಿಶ್ವಕಾಂತ್ ಅವರ ತಂದೆ) ಮನೆಗೆ ಫೋನ್ ಕರೆಗಳು ಬರತೊಡಗಿದವು. ಆಪ್ತೇಷ್ಟರು ಮನೆಗೆ ಧಾವಿಸಿ ಬಂದರು. ಈ ಬಗ್ಗೆ ಈಶ್ವರರೆಡ್ಡಿ ಅವರು ಹೇಳಿದ್ದು ಹೀಗೆ...
ಸೊಸೆಯಿಂದ ಮೊದಲಿಗೆ ಎಸ್ ಎಂಎಸ್ ಬಂತು: ರೆಡ್ಡಿ
ಮೊದಲಿಗೆ ನಮಗೆ ನಮ್ಮ ಸೊಸೆಯಿಂದ ಎಸ್ ಎಂಎಸ್ ಸಂದೇಶ ಬಂತು.. ಕೆಲ ನಿಮಿಷದಲ್ಲೇ ಇನ್ಫೋಸಿಸ್ ಸಂಸ್ಥೆಯಿಂದ ಕರೆ ಬಂತು ಸಮಯ ಸುಮಾರು 9.15 ಇರ್ಬೇಕು, ತೆಲುಗಿನಲ್ಲಿ ಮಾತನಾಡಿ ನಿಮ್ಮ ಮಗ ಈಗ ಉಗ್ರರ ವಶದಲ್ಲಿದ್ದಾರೆ. ಗಾಬರಿಯಾಗಬೇಡಿ ಎಂದರು.
ಫೋನ್ ಮಾಡಿ ಮಾತನಾಡಿದಾಗ ಸಮಾಧಾನವಾಯ್ತು
ನಂತರ ನಾನು ಅಸೆಂಬ್ಲಿ ಸ್ಪೀಕರ್ ಕೊಡೆಲಾ ಶಿವಪ್ರಸಾದ್ ರಾವ್ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದೆ. ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ನಮ್ಮ ಸೊಸೆ ಶಿಲ್ಪ ಹಾಗೂ ಮೊಮ್ಮಗಳು ಅಕ್ಷಯ ಜೊತೆ ಮಾತನಾಡಿದೆ. ಕೆಲ ಹೊತ್ತಿನಲ್ಲಿ ವಿಶ್ವ ಓಡಿ ಹೊರಗಡೆ ಬಂದ ದೃಶ್ಯ ನೋಡಿದ ಮೇಲೆ ನಮಗೆ ಹೋದ ಜೀವ ಬಂದಂತೆ ಆಯಿತು. ನಂತರ ಮಗನಿಗೆ ವೈದ್ಯಕೀಯ ನೆರವು ಅಗತ್ಯವಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿರುವ ಮಾಹಿತಿ ಬಂತು. ಅದರೆ, ಆತಂಕಕ್ಕೆ ಕಾರಣವಿಲ್ಲ ಎಂದು ಸೊಸೆ ಧೈರ್ಯ ಹೇಳಿದಳು ಎಂದು ಈಶ್ವರರೆಡ್ಡಿ ಹೇಳಿದರು.
ನನ್ನ ಮಗನಿಗೆ ಏನು ಆಗುವುದಿಲ್ಲ ಎಂಬ ನಂಬಿಕೆಯಿತ್ತು
ನನ್ನ ಮಗನಿಗೆ ಏನು ಆಗುವುದಿಲ್ಲ ಎಂಬ ನಂಬಿಕೆಯಿತ್ತು ಹೀಗಾಗಿ ನಾನು ಹೆಚ್ಚು ಗಾಬರಿಯಾಗದೆ ವಿಶ್ವನ ತಾಯಿಯನ್ನು ಸಂತೈಸುತ್ತಿದ್ದೆ. ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದೆ. ಮಾಧ್ಯಮಗಳ ಸಹಕಾರ, ಆಸ್ಟ್ರೇಲಿಯ ಪೊಲೀಸರ ಸಾಹಸಕ್ಕೆ ನಾವು ಚಿರಋಣಿ. ನನ್ನ ಮಗ ಧೈರ್ಯವಂತ ಎಂದು ಈಶ್ವರರೆಡ್ಡಿ ಹೇಳಿದ್ದಾರೆ.
ಪ್ರತಿಭಾವಂತ ಟೆಕ್ಕಿ ವಿಶ್ವಕಾಂತ್ ಈಶ್ವರ್ ರೆಡ್ಡಿ
ಆಂಧ್ರಪದೇಶದ ಗುಂಟೂರಿನ ಕೊರುಕುಂಡ ಸೈನಿಕ ಶಾಲೆ, ಸಿದ್ಧಾರ್ಥ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡಿರುವ ವಿಶ್ವಕಾಂತ್ ನಂತರ ಬಿಟ್ಸ್ ಪಿಲಾನಿಯಿಂದ ಪದವಿ ಪಡೆದುಕೊಂಡಿದ್ದರು. ಹೈದರಾಬಾದಿನ ಐಟಿ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸಿದ ಮೇಲೆ ಇನ್ಫೋಸಿಸ್ ಸಂಸ್ಥೆ ಸೇರಿದ್ದರು.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ವೆಸ್ಟ್ ಪ್ಯಾಕ್ ಬ್ಯಾಂಕ್ ಯೋಜನೆಯ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಹೊಮ್ ಕ್ವೇಸ್ಟ್ ವಿಸ್ತಾದಲ್ಲಿ ನೆಲೆಸಿರುವ ವಿಶ್ವಕಾಂತ್ ಗೆ ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಪೌರತ್ವ ಲಭಿಸಿತ್ತು. ಮದುವೆಯಾಗಿ ಏಳು ವರ್ಷವಾಗಿದ್ದು, ಪತ್ನಿ ಶಿಲ್ಪ, ಮಗಳು ಅಕ್ಷಯ.
ವಿಪ್ರೋ ಕಾಂಗ್ನಿಜೆಂಟ್ ಉದ್ಯೋಗಿಗಳು ಸೇಫ್
ಇನ್ಫೋಸಿಸ್ ನಂತೆ ಆಸ್ಟ್ರೇಲಿಯಾದಲ್ಲಿ ತನ್ನ ಕಚೇರಿಗಳನ್ನು ಹೊಂದಿರುವ ವಿಪ್ರೋ ಸಂಸ್ಥೆ ಸಿಡ್ನಿ ಉಗ್ರರ ದಾಳಿ ಪ್ರಕರಣದ ನಂತರ ಪ್ರಕಟಣೆ ಹೊರಡಿಸಿ ತನ್ನ ಎಲ್ಲಾ ಉದ್ಯೋಗಿಗಳು ಸುರಕ್ಷಿತವಾಗಿದ್ದಾರೆ, ವಾಣಿಜ್ಯ ವಹಿವಾಟು ಎಂದಿನಂತೆ ನಡೆಯಲಿದೆ ಎಂದಿದೆ. ಆಸ್ಟ್ರೇಲಿಯಾದಲ್ಲಿ ಸುಮಾರು 200 ಕ್ಕೂ ಅಧಿಕ ಉದ್ಯೋಗಿಗಳನ್ನು ಹೊಂದಿರುವ ಕಾಂಗ್ನಿಜೆಂಟ್ ಸಂಸ್ಥೆ ಕೂಡಾ ತನ್ನ ಉದ್ಯೋಗಿಗಳು ಸುರಕ್ಷಿತವಾಗಿದ್ದಾರೆ ಎಂದು ಘೋಷಿಸಿದೆ.