ನಟಿ ಶ್ರಾವಣಿ ಆತ್ಮಹತ್ಯೆ ಕೇಸ್: ನಿರ್ಮಾಪಕ ಅಶೋಕ್ ರೆಡ್ಡಿ ಪೊಲೀಸರಿಗೆ ಶರಣು
ಹೈದರಾಬಾದ್, ಸೆ. 16: ತೆಲುಗು ಕಿರುತೆರೆ ಲೋಕದ ಜನಪ್ರಿಯ ನಟಿ ಶ್ರಾವಣಿ ಕೊಂಡಪಲ್ಲಿ ಆತ್ಮಹತ್ಯೆ ಪ್ರಕರಣದ ಆರೋಪಿ ಆರ್ ಎಕ್ಸ್ 100 ಚಿತ್ರ ನಿರ್ಮಾಪಕ ಅಶೋಕ್ ರೆಡ್ಡಿ ಅವರು ಇಂದು ಹೈದರಾಬಾದ್ ಪೊಲೀಸರ ಮುಂದೆ ಶರಣಾಗಿದ್ದಾರೆ.
ಮನಸು ಮಮತಾ, ಮೌನರಾಗಂ ಮುಂತಾದ ಸೀರಿಯಲ್ ಗಳ ಮೂಲಕ ಜನಪ್ರಿಯತೆ ಗಳಿಸಿದ್ದ ನಟಿ ಶ್ರಾವಂತಿ ಸಾವಿಗೆ ಗೆಳೆಯ ದೇವರಾಜು ರೆಡ್ಡಿಯೇ ಕಾರಣ ಎಂದು ಶ್ರಾವಂತಿ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತಂತೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಟಿಕ್ ಟಾಕ್ ಗೆಳೆಯನ ಕಿರುಕುಳ, ನಟಿ ಆತ್ಮಹತ್ಯೆಗೆ ಶರಣು
ಈ ಆತ್ಮಹತ್ಯೆ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಅಶೋಕ್ ರೆಡ್ಡಿ ಇಂದು ಪಂಜಾಗುಟ್ಟ ಠಾಣೆ ಎಸಿಪಿ ತಿರುಪತಣ್ಣ ಅವರ ಎದುರು ಹಾಜರಾಗಿ, ಶರಣಾಗಿದ್ದಾರೆ. 26 ವರ್ಷದ ಶ್ರಾವಣಿ ಆತ್ಮಹತ್ಯೆಗೆ ದೇವರಾಜ್ ರೆಡ್ಡಿ ಮತ್ತು ಸಾಯಿ ಕೃಷ್ಣಾರೆಡ್ಡಿ ಹಾಗೂ ಅಶೋಕ್ ರೆಡ್ಡಿ ಆರೋಪಿಗಳು ಎಂದು ಹೆಸರಿಸಲಾಗಿದೆ.
ಸೆಪ್ಟೆಂಬರ್ 8 ರಂದು ಹೈದರಾಬಾದ್ ನ ಮಧುರಾ ನಗರದಲ್ಲಿರುವ ಶ್ರಾವಣಿ ಕೊಂಡಪಲ್ಲಿ ತಮ್ಮ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಎ1 ದೇವರಾಜ ರೆಡ್ಡಿ, ಎ2 ಸಾಯಿ ಕೃಷ್ಣರೆಡ್ಡಿ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಈಗ ಆರ್ ಎಕ್ಸ್ 100 ಚಿತ್ರದ ನಿರ್ಮಾಪಕ ಅಶೋಕ್ ರೆಡ್ಡಿ ಬಂಧನವಾಗಿದೆ. ಬಂಧಿತ ಆರೋಪಿಗಳು ಉಸ್ಮಾನಿಯಾ ಆಸ್ಪತ್ರೆಯಲ್ಲಿ ಕೊವಿಡ್ 19 ಪರೀಕ್ಷೆಗೆ ಒಳಪಡಲಿದ್ದು, ನಂತರ ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ.
ಟಿಕ್ ಟಾಕ್ ವಿಡಿಯೋ ಗೆಳೆತನ ಆತ್ಮಹತ್ಯೆ
ಟಿಕ್ ಟಾಕ್ ವಿಡಿಯೋಗಳ ಮೂಲಕ ದೇವರಾಜು ರೆಡ್ಡಿ ಅಲಿಯಾಸ್ ಸನ್ನಿ ಎಂಬಾತನ ಪರಿಚಯ ಮಾಡಿಕೊಂಡ ಶ್ರಾವಣಿ ಕಿರುಕುಳದಿಂದಲೇ ಆತ್ಮಹತ್ಯೆ ನಿರ್ಧಾರ ಮಾಡಿದ್ದಾಳೆ ಎಂಬ ಆರೋಪವಿದೆ. ಕಾಕಿನಾಡದ ಗೊಲ್ಲಪ್ರೊಲು ಮೂಲದ ದೇವರಾಜು ರೆಡ್ಡಿ ಕೆಲ ವರ್ಷಗಳಿಂದ ಶ್ರಾವಂತಿ ಜೊತೆ ಗೆಳೆತನ ಬೆಳೆಸಿಕೊಂಡಿದ್ದ. ನನಗೆ ಯಾರೂ ಇಲ್ಲ ನಾನು ಅನಾಥ ಎಂದು ಹೇಳಿ ಆಕೆಯನ್ನು ಮರಳು ಮಾಡಿದ್ದ. ಕಳೆದ ಕೆಲ ತಿಂಗಳುಗಳಿಂದ ಶ್ರಾವಣಿಗೆ ಕಿರುಕುಳ ನೀಡತೊಡಗಿದ್ದ. ಈ ಬಗ್ಗೆ ಯಾರಲ್ಲೂ ಆಕೆ ಹೇಳಿಕೊಂಡಿರಲಿಲ್ಲ. ನೋವು ತಡೆದುಕೊಳ್ಳಲಾಗದೆ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ. ಎಸ್ ಆರ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ದೇವರಾಜು ರೆಡ್ಡಿ ಬೆದರಿಕೆ ಬಗ್ಗೆ ದೂರು
ದೇವರಾಜು ರೆಡ್ಡಿ ಬೆದರಿಕೆ ಬಗ್ಗೆ ಜೂನ್ 22ರಂದು ಶ್ರಾವಣಿ ಪೊಲೀಸರಿಗೆ ದೂರು ನೀಡಿದ್ದಳು. ಆದರೆ, ದೂರಿನಲ್ಲಿ ಮಾನಸಿಕ ಕಿರುಕುಳ ಎಂದಷ್ಟೆ ಉಲ್ಲೇಖಿಸಿದ್ದಳು, ಮದುವೆಯಾಗುವುದಾಗಿ ಮೋಸ ಮಾಡಿದ್ದನ್ನು ಹೇಳಿದ್ದಳು ಆದರೆ, ಆತ ಯಾವ ರೀತಿ ಬೆದರಿಕೆ ಒಡ್ಡಿದ್ದ ಎಂಬುದನ್ನು ತಿಳಿಸಿರಲಿಲ್ಲ. ಇಬ್ಬರ ಖಾಸಗಿ ಫೋಟೊ, ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಹಾಕುತ್ತೇನೆ ಎಂದು ಬೆದರಿಸಿದ್ದರ ಬಗ್ಗೆ ದೂರಿನಲ್ಲಿ ಉಲ್ಲೇಖಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
1 ಲಕ್ಷ ರು ಕೊಡು ಎಂದು ಪೀಡಿಸಿದ್ದ
ಫೋಟೋ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಾಕಬಾರದು ಎಂದರೆ 1 ಲಕ್ಷ ರು ಕೊಡು ಎಂದು ಪೀಡಿಸುತ್ತಿದ್ದ. ಹಣ ನೀಡಿದರೆ, ಎಲ್ಲವನ್ನು ಡಿಲೀಟ್ ಮಾಡುವ ಭರವಸೆ ನೀಡಿದ್ದ. ಇದನ್ನು ನಂಬಿದ್ದ ಶ್ರಾವಣಿ ಗೂಗಲ್ ಪೇ ಮೂಲಕ 1 ಲಕ್ಷ ರು ನೀಡಿದ್ದಳು. ಆದರೆ, ಹಣ ಬಂದ ಬಳಿಕ ಫೋಟೋ, ವಿಡಿಯೋ ಡಿಲೀಟ್ ಮಾಡಲಿಲ್ಲ ಬದಲಿಗೆ ಇನ್ನಷ್ಟು ಹಣ ನೀಡುವಂತೆ ಹೆಚ್ಚು ಹೆಚ್ಚು ಪೀಡಿಸತೊಡಗಿದ್ದ. ಈ ವಿಷಯವಾಗಿ ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾಗಿ ಶ್ರಾವಣಿ ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.
ತ್ರಿಕೋನ ಪ್ರೇಮಕಥೆಯಾಗಿತ್ತು
ದೇವರಾಜ್, ಸಾಯಿ ಕೃಷ್ಣರೆಡ್ಡಿ ಮತ್ತು ಅಶೋಕ್ ರೆಡ್ಡಿ ಹಾಗೂ ಶ್ರಾವಣಿ ಜೊತೆಗೆ ತ್ರಿಕೋನ/ಚತುಷ್ಕೋನ ಪ್ರೇಮಕಥೆ ನಡೆದಿದ್ದು ಎಂಬ ವಿಷಯ ತಡವಾಗಿ ತಿಳಿದು ಬಂದಿದೆ. ಮೊದಲಿಗೆ ದೇವರಾಜ್, ಸಾಯಿ ಕೃಷ್ಣ ಹಾಗೂ ಶ್ರಾವಣಿ ನಡುವೆ ಇದ್ದ ಪ್ರೇಮ ಕಥೆಗೆ ನಿರ್ಮಾಪಕ ಅಶೋಕ್ ರೆಡ್ಡಿ ಎಂಟ್ರಿಯಾಗಿದೆ. ತ್ರಿಕೋನ ಪ್ರೇಮಕಥೆಗೆ ಬ್ರೇಕ್ ಹಾಕುವುದಾಗಿ ಬಂದ ಅಶೋಕ್ ಕೂಡಾ ಶ್ರಾವಣಿಯನ್ನು ಒಲಿಸಿಕೊಳ್ಳಲು ಯತ್ನಿಸಿದ್ದ. ಒಟ್ಟಾರೆ, ಮೂವರಿಂದಲೂ ದೈಹಿಕ, ಮಾನಸಿಕ ಹಿಂಸೆ ಅನುಭವಿಸಿದ್ದು ತಿಳಿದು ಬಂದಿದೆ.
Recommended Video
ಮಾಧ್ಯಮಗಳಿಗೆ ಸೋರಿಕೆಯಾದ ಆಡಿಯೊ ರೆಕಾರ್ಡ್
ಇತ್ತೀಚೆಗೆ ಮಾಧ್ಯಮಗಳಿಗೆ ಸೋರಿಕೆಯಾದ ಆಡಿಯೊ ರೆಕಾರ್ಡ್ ನಲ್ಲಿ ದೇವರಾಜ್ ಮನಸ್ಸು ಬದಲಾಯಿಸಿ ಮದುವೆಗೆ ತಯಾರಾಗುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ದೇವರಾಜ್ ವಿರುದ್ಧ ಶ್ರಾವಣಿ ಎಸ್.ಆರ್.ನಗರದಲ್ಲಿ ಈ ಹಿಂದೆ ಬೆದರಿಕೆ, ಕಿರುಕುಳ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಹಿಂತೆಗೆದುಕೊಂಡು ಮದುವೆಯಾಗಲು ಅವರು ಸಿದ್ಧರಾಗಿದ್ದಾರೆ ಎಂಬುದನ್ನು ದೇವರಾಜ್ ತಾಯಿ ಸತ್ಯವತಿ ಜೊತೆ ಶ್ರಾವಣಿ ನಡೆಸಿದ ಮಾತುಕತೆ ಸ್ಪಷ್ಟಪಡಿಸಿತ್ತು. ಆದರೆ, ಕೊನೆಕ್ಷಣದಲ್ಲಿ ಮದುವೆ ಮುರಿದು ಬೀಳಲು ಯಾರು ಕಾರಣರಾದರು ಶ್ರಾವಣಿಗೆ ಆಘಾತವಾಗಿ ಮೋಸ ಹೋದ ಕೊರಗಿನಲ್ಲಿ ಆತ್ಮಹತ್ಯೆಗೆ ಶರಣಾಗಲು ಮುಖ್ಯವಾಗಿ ಕಾರಣರಾದವರು ಯಾರು ಎಂಬುದನ್ನು ಪೊಲೀಸರು ವಿಚಾರಣೆ ಬಳಿಕ ಹೊರ ಹಾಕುವ ಸಾಧ್ಯತೆಯಿದೆ.