ನಡೆಯದ ಸಂಧಾನ: ಸಚಿವ ಸ್ಥಾನಕ್ಕೆ ಟಿಡಿಪಿ ಸಂಸದರು ರಾಜೀನಾಮೆ
ನವದೆಹಲಿ, ಮಾರ್ಚ್ 8: ತಮ್ಮ ಸಚಿವ ಸ್ಥಾನಕ್ಕೆ ಟಿಡಿಪಿ ಸಂಸದರಾದ ಅಶೋಕ್ ಗಜಪತಿ ರಾಜು ಮತ್ತು ವೈಎಸ್ ಚೌಧರಿ ರಾಜೀನಾಮೆ ನೀಡಿದ್ದಾರೆ. ಇಂದು ಸಂಜೆ 6.15ರ ಸುಮಾರಿಗೆ ಪ್ರಧಾನಿ ನಿವಾಸಕ್ಕೆ ತೆರಳಿದ ಸಚಿವರು ಪ್ರಧಾನಿಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
"ನಾವು ಎನ್.ಡಿ.ಎ ಮೈತ್ರಿಕೂಟದಿಂದ ಹೊರಕ್ಕೆ ಬರುವುದಿಲ್ಲ. ಆದರೆ ಯಾವುದೇ ಸಚಿವ ಸ್ಥಾನಗಳನ್ನು ತೆಗೆದುಕೊಳ್ಳುವುದಿಲ್ಲ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ನಾನು ಭಾವಿಸುತ್ತೇನೆ," ಎಂಬುದಾಗಿ ರಾಜೀನಾಮೆ ಸಲ್ಲಿಸಿದ ನಂತರ ಅಶೋಕ್ ಗಜಪತಿ ರಾಜು ಜೊತೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವೈ.ಎಸ್.ಚೌಧರಿ ಹೇಳಿದ್ದಾರೆ.
ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜತೆ ಕರೆ ಮಾಡಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರು ರಾಜೀನಾಮೆ ನೀಡುವ ಸಂಬಂಧ ನಾಯ್ಡು ಪ್ರಧಾನಿಗೆ ವಿವರಿಸಿದ್ದಾರೆ ಎಂದು ಟಿಡಿಪಿ ಮೂಲಗಳು ಹೇಳಿವೆ.
ಪ್ರಧಾನಿ ಕರೆ ಮಾಡಿಯೂ ಚಂದ್ರಬಾಬು ನಾಯ್ಡು ರಾಜೀನಾಮೆ ನೀಡಿದ್ದು ಸಂಧಾನ ವಿಫಲವಿರುವುದನ್ನು ಸೂಚಿಸುತ್ತಿದೆ.
Aviation Minister and TDP MP Ashok Gajapathi Raju's resignation letter to PM Narendra Modi pic.twitter.com/DXFbagSzWs
— ANI (@ANI) March 8, 2018
ಬುಧವಾರ ಸಂಜೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಪತ್ರಿಕಾಗೋಷ್ಠಿ ನಡೆಸಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಇದಾದ ಬೆನ್ನಿಗೆ ಕೆರಳಿದ್ದ ಚಂದ್ರಬಾಬು ನಾಯ್ಡು ಟಿಡಿಪಿ ಎನ್.ಡಿ.ಎ ಮೈತ್ರಿಕೂಟದಿಂದ ಹೊರ ನಡೆಯುವ ಗಂಭೀರ ಬೆದರಿಕೆ ಹಾಕಿದ್ದರು.
ಇದರ ಮೊದಲ ಯತ್ನವಾಗಿ ಇಬ್ಬರು ಟಿಡಿಪಿ ಸಂಸದರು ಕೇಂದ್ರ ಸಂಪುಟಕ್ಕೆ ಇಂದು ರಾಜೀನಾಮೆ ನೀಡಿದ್ದಾರೆ. ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ವೈಎಸ್ ಚೌಧರಿ ರಾಜೀನಾಮೆ ನೀಡಿದ್ದಾರೆ.
Union Minister and TDP MP YS Choudhary's resignation letter to PM Narendra Modi pic.twitter.com/qDeS2yHOfA
— ANI (@ANI) March 8, 2018
ಇನ್ನು ಇಂದು ಬೆಳಿಗ್ಗೆ ಆಂಧ್ರ ಪ್ರದೇಶದ ಟಿಡಿಪಿ ಸಂಪುಟದಲ್ಲಿದ್ದ ಬಿಜೆಪಿ ಶಾಸಕರಾದ ಡಾ. ಕಾಮಿನೇನಿ ಶ್ರೀನಿವಾಸ್ ಮತ್ತು ಪೈದಿಕೊಂಡಲ ಮಾಣಿಕ್ಯಲ ರಾವ್ ರಾಜೀನಾಮೆ ನೀಡಿದ್ದರು.
ಇನ್ನೊಂದು ಕಡೆ ವೈಎಸ್ಆರ್ ಮತ್ತು ಟಿಡಿಪಿ ಸಂಸದರು ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೋರಿ ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ.