ಲಾಕ್ಡೌನ್ಗೆ ನಿರ್ಲಕ್ಷ್ಯ: ತೆಲಂಗಾಣ ಸರ್ಕಾರದಿಂದ ಕಂಡಲ್ಲಿ ಗುಂಡು ಆದೇಶ
ಹೈದರಾಬಾದ್, ಮಾರ್ಚ್ 25: ದೇಶಾದ್ಯಂತ ಏಪ್ರಿಲ್ 14ರವರೆಗೂ ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ತೆಲಂಗಾಣದಲ್ಲಿ ಮಾತ್ರ ನಮಗೇನು ಸಂಬಂಧವೇ ಇಲ್ಲ ಎನ್ನುವಂತೆ ಜನರು ವರ್ತಿಸುತ್ತಿರುವ ಕಾರಣ ತೆಲಂಗಾಣ ಸರ್ಕಾರ ಕಂಡಲ್ಲಿ ಗುಂಡು ಆದೇಶ ಜಾರಿಮಾಡಿದೆ.
ಈ ಬಗ್ಗೆ ಪತ್ರಿಕ್ರಿಯಿಸಿದ ಮುಖ್ಯಮಂತ್ರಿ ಕೆಸಿ ಚಂದ್ರಶೇಖರ್ ರಾವ್, ಮನೆಯಿಂದ ಹೊರಬರಬೇಡಿ ಎಂದು ನಾನು ಮನವಿ ಮಾಡುತ್ತೇನೆ. ಆದರೂ ಮನೆಯಿಂದ ಹೊರ ಬರುವುದನ್ನು ನಿಲ್ಲಿಸದಿದ್ದರೆ ಕಂಡಲ್ಲಿ ಗುಂಡು ಹೊಡೆಯಲು ಆದೇಶಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
Live Updates: ಭಾರತದಲ್ಲಿ ಇಬ್ಬರು ಕೊರೊನಾ ಸೋಂಕಿತರು ಗುಣಮುಖ
ಜನರು ಕರ್ಫ್ಯೂ ಉಲ್ಲಂಘಿಸಿದರೆ ಕಂಡಲ್ಲಿ ಗುಂಡು ಹೊಡೆಯಲು ಆದೇಶ ನೀಡಲಾಗುವುದು ಎಂದು ತೆಲಂಗಾಣ ಸರ್ಕಾರ ಜನರಿಗೆ ಖಡಕ್ ಎಚ್ಚರಿಕೆ ನೀಡಿದೆ. ಜನರು ಸುಮ್ಮನೆ ಅಡ್ಡಾಡಲು ಅನುಮತಿ ಇಲ್ಲ, ಎಲ್ಲರೂ ಮನೆಯಲ್ಲಿಯೇ ಇರಬೇಕು ಒಂದೊಮ್ಮೆ ಹೊರಬಂದಿದ್ದೇ ಆದಲ್ಲಿ ಕಂಡಲ್ಲಿ ಗುಂಡು ಹಾರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ವಿದೇಶದಿಂದ ಬಂದವರು ಕಡ್ಡಾಯವಾಗಿ 14 ದಿನಗಳ ಕಾಲ ಮನೆಯಲ್ಲಿರಬೇಕು. ಈ ಆದೇಶವನ್ನು ಉಲ್ಲಂಘಿಸಿದರೆ ಪಾಸ್ಪೋರ್ಟ್ ವಶಕ್ಕೆ ಪಡೆದು ರದ್ದು ಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ತೆಲಂಗಾಣದಲ್ಲಿ ಮಂಗಳವಾರ ಒಟ್ಟು 6 ಪ್ರಕರಣಗಳು ಬೆಳಕಿಗೆ ಬಂದಿದ್ದು, ಒಟ್ಟು 39 ಕೊರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ.
ಒಂದು ವೇಳೆ ಪೊಲೀಸರಿಗೆ ಪರಿಸ್ಥಿತಿಯನ್ನು ನಿಯಂತ್ರಿಸಲು ಆಗದೇ ಇದ್ದರೆ ಕಂಡಲ್ಲಿ ಗುಂಡು ಹೊಡೆಯಲು ಆದೇಶವನ್ನು ನೀಡುತ್ತೇನೆ. ಕಾನೂನು ಸುವ್ಯವಸ್ಥೆಗೆ ಸೇನೆಯನ್ನು ರಾಜ್ಯಕ್ಕೆ ತರಲು ನನಗೆ ಇಷ್ಟವಿಲ್ಲ. ಈ ರೀತಿಯ ಪರಿಸ್ಥಿತಿಗೆ ಹೋಗದೇ ಇರಲಿ ಎಂದು ಆಶಿಸೋಣ ಎಂದು ಅವರು ತಿಳಿಸಿದರು.