18 ಮಹಿಳೆಯರ ಕೊಲೆ ಮಾಡಿದ್ದ ಸೀರಿಯಲ್ ಕಿಲ್ಲರ್ ಬಂಧನ; ಕೊಲೆಗೆ ಕಾರಣವೇನು?
ಹೈದರಾಬಾದ್, ಜನವರಿ 27: ಮದುವೆಯಾದ ಕೆಲವೇ ತಿಂಗಳಲ್ಲಿ ತನ್ನ ಹೆಂಡತಿ ಪರ ಪುರುಷನೊಂದಿಗೆ ಓಡಿಹೋಗಿದ್ದನ್ನೇ ದ್ವೇಷವಾಗಿಸಿಕೊಂಡು ಈವರೆಗೂ ಸುಮಾರು ಹದಿನೆಂಟು ಮಹಿಳೆಯರನ್ನು ಕೊಲೆ ಮಾಡಿದ ಸೀರಿಯಲ್ ಕಿಲ್ಲರ್ ನನ್ನು ಹೈದರಾಬಾದ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
45 ವರ್ಷದ ಮೈನಾ ರಾಮುಲು ಬಂಧಿತ ವ್ಯಕ್ತಿ. ಈಚೆಗೆ ಇಬ್ಬರು ಮಹಿಳೆಯರ ಕೊಲೆ ಪ್ರಕರಣದ ಜಾಡು ಹಿಡಿದಿದ್ದ ಪೊಲೀಸರಿಗೆ ಈತನೇ ಈ ಮಹಿಳೆಯರ ಕೊಲೆಗೂ ಕಾರಣ ಎಂಬುದು ತಿಳಿದುಬಂದಿದೆ. ಮಂಗಳವಾರ ರಾಮುಲುನನ್ನು ಬಂಧಿಸಿದ್ದಾರೆ.
ಮೂಢನಂಬಿಕೆಗೆ ಇಬ್ಬರು ಹೆಣ್ಣುಮಕ್ಕಳನ್ನು ಬಲಿಕೊಟ್ಟ ಮಾಜಿ ಪ್ರಾಂಶುಪಾಲ ತಂದೆ, ಗೋಲ್ಡ್ ಮೆಡಲಿಸ್ಟ್ ತಾಯಿ
ಮಾನಸಿಕ ಅಸ್ವಸ್ಥತೆಯಿದ್ದ ರಾಮುಲುನನ್ನು ಈ ಮುನ್ನ 21 ಪ್ರಕರಣಗಳಿಗೆ ಸಂಬಂಧಿಸಿದಂತೆ ಜೈಲಿಗೆ ಹಾಕಲಾಗಿತ್ತು. ಹದಿನಾರು ಮಹಿಳೆಯರ ಕೊಲೆಗಳು, ನಾಲ್ಕು ಆಸ್ತಿಪಾಸ್ತಿ ಸಂಬಂಧಿ ಪ್ರಕರಣ ಹಾಗೂ ಪೊಲೀಸ್ ಕಸ್ಟಡಿಯಿಂದ ಪರಾರಿಯಾದ ಪ್ರಕರಣಗಳು ಈತನ ಮೇಲಿದ್ದವು. ಮೋಸ್ಟ್ ವಾಂಟೆಡ್ ಕೈದಿಯಾಗಿದ್ದ ಈತನನ್ನು ಬಂಧಿಸಿ ಜೀವಾವಧಿ ಶಿಕ್ಷೆಯನ್ನು ನೀಡಲಾಗಿತ್ತು. ನಂತರ ಈತನನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಸೇರಿಸಿದ್ದು, ಅಲ್ಲಿಂದಲೂ ಪರಾರಿಯಾಗಿದ್ದ. ಮತ್ತೆ ರಾಮುಲುನನ್ನು ಬಂಧಿಸಲಾಗಿತ್ತು. ಆನಂತರ ತೆಲಂಗಾಣ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ಮನವಿ ಮೇರೆಗೆ ಕಳೆದ ಜುಲೈನಲ್ಲಿ ಈತನ ಬಿಡುಗಡೆಯಾಗಿತ್ತು.
ಈಚೆಗೆ ಕಾವಲ ಅನಂತಯ್ಯ ಎಂಬುವವರು ತಮ್ಮ ಹೆಂಡತಿ ವೆಂಕಟಮ್ಮ ಅವರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದರು. ಈ ಪ್ರಕರಣವನ್ನು ಹೈದರಾಬಾದ್ ಉತ್ತರ ವಲಯ ಪೊಲೀಸ್ ಪಡೆ ಕೈಗೆತ್ತಿಕೊಂಡಿದ್ದು, ಜನವರಿ 4ರಂದು ವೆಂಕಟಮ್ಮ ಅವರ ಮೃತದೇಹ ಅಂಕುಶಪುರದ ರೈಲ್ವೆ ಟ್ರ್ಯಾಕ್ ಬಳಿ ಪತ್ತೆಯಾಗಿತ್ತು. ಸುಮಾರು 500 ಸಿಸಿ ಟಿವಿ ಫುಟೇಜ್ ಗಳನ್ನು ಪರಿಶೀಲಿಸಿದ ಹೈದರಾಬಾದ್ ನಗರ ಪೊಲೀಸ್ ಪಡೆ ಹಾಗೂ ರಾಚಕೊಂಡ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಅಷ್ಟಕ್ಕೂ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಈತ ಕೊಲೆ ಮಾಡುತ್ತಿದ್ದುದೇಕೆ?
ಕಲ್ಲು ಕುಟ್ಟುವ ಕೆಲಸ ಮಾಡುತ್ತಿದ್ದ ರಾಮುಲುಗೆ ಪೋಷಕರು 21 ವಯಸ್ಸಿಗೇ ಮದುವೆ ಮಾಡಿದ್ದರು. ಕೆಲವೇ ದಿನಗಳಲ್ಲಿ ಪರಪುರುಷನೊಂದಿಗೆ ಈತನ ಹೆಂಡತಿ ಓಡಿಹೋಗಿದ್ದಳು. ಆಗಿನಿಂದ ಮಹಿಳೆಯರನ್ನು ಕಂಡರೆ ಈತನಲ್ಲಿ ದ್ವೇಷ ಹುಟ್ಟಿಕೊಂಡಿತ್ತು. ನಂತರ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಕೊಲೆ ಮಾಡಲು ಆರಂಭಿಸಿದ. ಇದುವರೆಗೂ 18 ಮಹಿಳೆಯರನ್ನು ಕೊಲೆ ಮಾಡಿದ್ದಾನೆ. ಹಣದ ಆಮಿಷ ಒಡ್ಡಿ ಅವರನ್ನು ಕರೆಸಿಕೊಂಡು ಕೊಲೆ ಮಾಡುತ್ತಿದ್ದ ಎಂದು ಮಾಹಿತಿ ನೀಡುತ್ತಾರೆ ಪೊಲೀಸರು.
Recommended Video
ಮಹಿಳೆಯರನ್ನು ಹಣದ ಆಮಿಷ ಒಡ್ಡಿ ಕರೆಸಿಕೊಂಡು ಅವರೊಂದಿಗೆ ಮದ್ಯ ಸೇವಿಸಿ ನಂತರ ಅವರನ್ನು ಬರ್ಬರವಾಗಿ ಕೊಲೆ ಮಾಡಿ ಅವರ ಬಳಿ ಇದ್ದ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದ ಎನ್ನಲಾಗಿದೆ.