ಸತ್ಯಂ ಕಂಪ್ಯೂಟರ್ಸ್ ರಾಜು ಪತ್ನಿ, ಪುತ್ರರಿಗೂ ಜೈಲುಶಿಕ್ಷೆ
ಹೈದರಾಬಾದ್, ಜ.10: ಸತ್ಯಂ ಕಂಪ್ಯೂಟರ್ಸ್ ಎಂಬ ಬೃಹತ್ ಪ್ರಮಾಣದ ಹಗರಣಕ್ಕೆ ಸಂಬಂಧಿಸಿದಂತೆ ಕಂಪನಿಯ ಸಂಸ್ಥಾಪಕ ಬಿ ರಾಮಲಿಂಗರಾಜು ಬಂಧನವಾಗಿ ಯಾವುದೋ ಕಾಲವಾಗಿದೆ. ಇದೀಗ ಆತನ ಪತ್ನಿ, ಇಬ್ಬರು ಪುತ್ರರಿಗೂ ಒಂದು ವರ್ಷ ಜೈಲು ಶಿಕ್ಷೆಯಾಗಿದೆ. ಜತೆಗೆ ಇನ್ನೂ ನಾಲ್ಕು ಮಹಿಳಾ ನಿರ್ದೇಶಕರು ಸೇರಿದಂತೆ ಒಟ್ಟು 40 ನಿರ್ದೇಶಕರಿಗೂ ಜೈಲಾಗಿದೆ.
ಇದೇನಿದು ಹಗರಣ ನಡೆದು ಯಾವುದೋ ಕಾಲವಾಗಿದೆ. ಇದೀಗ Satyam Computers ರಾಜು ಪತ್ನಿಯ ಬಂಧನವಾಗಿದೆ. ಅದೂ ನೇರವಾಗಿ ಹಗರಣಕ್ಕೆ ಸಂಬಂಧಪಟ್ಟಂತೆ ಅಲ್ಲ. ಬದಲಿಗೆ ಆದಾಯ ತೆರಿಗೆ ತಪ್ಪಿಸಿದ್ದಾರೆಂದು ರಾಜು ಪತ್ನಿ ನಂದಿನಿ, ಪುತ್ರರಾದ ತೇಜ ಮತ್ತು ರಾಮನಿಗೆ 1 ವರ್ಷ ಜೈಲು ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಲಾಗಿದೆ.
ಅಷ್ಟೇ ಅಲ್ಲ, ಶಿಕ್ಷೆಯ ವಿರುದ್ಧ ನಂದಿನಿಗೆ ಏನಾದರೂ ಅಸಮ್ಮತಿಯಿದ್ದು, ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸುವ ಹಾಗಿದ್ದರೆ ಅದಕ್ಕೂ ಕಾಲಾವಕಾಶ ಕಲ್ಪಿಸಲಾಗಿದೆ. ಇದು Economic Offences Court ನಿನ್ನೆ ಹೊರಡಿಸಿರುವ ತೀರ್ಪು. ಅಂದಹಾಗೆ ಇವರೆಲ್ಲಾ ತಲಾ ಒಂದೆರಡು ಕೋಟಿ ರೂ. ತೆರಿಗೆ ತಪ್ಪಿಸಿದ್ದಾರಂತೆ. ಅದೂ Maytas Hill County housing project ಹೆಸರಿನಲ್ಲಿ.
ಜತೆಗೆ, Satyam Computers ಕಂಪನಿಯ ನಾಲ್ವರು ಮಹಿಳಾ ನಿರ್ದೇಶಕರುಗಳಿಗೆ 6 ತಿಂಗಳ ಜೈಲುವಾಸ ವಿಧಿಸಲಾಗಿದೆ. ಅಂದಿನ ಕಾಲಕ್ಕೇ 8,000 ಕೋಟಿ ರೂಪಾಯಿಯ ಬೃಹತ್ ಪ್ರಮಾಣದ ಹಗರಣ ಇದಾಗಿತ್ತು. ಪ್ರಕರಣದಲ್ಲಿ ಸತ್ಯಂ ರಾಜು, ಅವನ ಸೋದರ, ಅವನ ಭಾವ, ಅವನ ಷಡ್ಡಕ, ಅವನ ಚಿಕ್ಕಪ್ಪ, ಇವನ ತಮ್ಮ ಅಂತೆಲ್ಲಾ ಸತ್ಯಂ ರಾಜುವಿನ ಸುತ್ತಮುತ್ತಲ ಸಂಬಂಧಿಗಳೇ ಕಂಪನಿಯ ಆಯಕಟ್ಟಿನ ಸ್ಥಾನಗಳಲ್ಲಿ ಕುಳಿತು ಇಡೀ ಹಗರಣಕ್ಕೆ ಕೈಹಾಕಿದ್ದರು.
ಆ ಸಂಬಂಧ ಸುಮಾರು 5 ವರ್ಷಗಳಿಂದ ಸತ್ಯಂ ರಾಜು, ಅವನ ಸೋದರ, ಅವನ ಭಾವ, ಅವನ ಸೋದರರ ಹೆಂಡತಿಯರು ಸೇರಿದಂತೆ ಕೆಲವರು ಜೈಲಿನಲ್ಲೇ ಇದ್ದಾರೆ. ಇದೀಗ ಆತನ ಪತ್ನಿ ನಂದಿನಿ ಮತ್ತು ಪುತ್ರರು ಸಹ ಅವರನ್ನು ಸೇರಿಕೊಳ್ಳಲಿದ್ದಾರೆ.
ಆದರೆ ಈ ಪಾಟಿ ಜನರ ದುಡ್ಡನ್ನು ತಿಂದುಹಾಕಿದ್ದಕ್ಕೆ ಸತ್ಯಂ ರಾಜು ಮತ್ತು ಅವನ ತಂಡಕ್ಕೆ ಕೇವಲ ಸಾದಾ ಜೈಲು ಮತ್ತು ನಗಣ್ಯ ದಂಡ ಮಾತ್ರ ವಿಧಿಸಲಾಗಿದೆ. ಅವನು ತಿಂದುಹಾಕಿದ 8,000 ಕೋಟಿ ರೂಪಾಯಿ ಎಲ್ಲಿ ಹೋಯಿತೋ? ಎಂದು ಜನ ಕೇಳುವಂತಾಗಿದೆ.
ಈ ಮಧ್ಯೆ, ಈ ಪಾಟಿ ಮೊತ್ತದ ಹಗರಣ ನಡೆಯುವಾಗ ಅದರಲ್ಲಿ ಅನೇಕ ಬ್ಯಾಂಕುಗಳ ಹಣವೂ ಸೇರಿರುತ್ತದೆ. ಆ ಬ್ಯಾಂಕುಗಳ ನೀಡಿರಬಹುದಾದ ಸಾಲದ ಗತಿಯೇನು? ಅಥವಾ ನಮ್ಮ ಬಿಬಿಎಂಪಿ ಆಯುಕ್ತ ಲಕ್ಷ್ಮೀನಾರಾಯಗಾರು ಹೇಳಿದಂತೆ ಸತ್ಯಂ ಮೋಸವೂ ಬುಕ್ಕಿಶ್ ಅಡ್ಜಸ್ಟ್ ಮೆಂಟಿನಲ್ಲಿ ಪರಿಸಮಾಪ್ತಿಯಾಗಿದೆಯಾ?