ಆತ್ಮಹತ್ಯೆಗೆ ಶರಣಾಗಿದ್ದ ರೋಹಿತ್ ವೇಮುಲನ ಸಹೋದರ ಈಗ ವಕೀಲ
ಹೈದರಾಬಾದ್, ಡಿಸೆಂಬರ್ 19: ಹೈದರಾಬಾದಿನ ಕೇಂದ್ರ ವಿಶ್ವವಿದ್ಯಾಲಯದ ಕ್ಯಾಂಪಸ್ನಲ್ಲಿರುವ ಹಾಸ್ಟೆಲ್ ಕೊಠಡಿಯಲ್ಲಿ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆ ಮಾಡಿಕೊಂಡ ಘಟನೆಯ ಸುಮಾರು ಐದು ವರ್ಷದ ಬಳಿಕ ಅವರ ಕುಟುಂಬದಲ್ಲಿ ಹೊಸ ಸಂತಸವೊಂದು ಮೂಡಿದೆ.
ತಮ್ಮ ಮೊದಲ ಮಗ ರೋಹಿತ್ ಸಾವಿನ ಸುಮಾರು ಐದು ವರ್ಷಗಳ ನಂತರ ಕಿರಿಯ ಮಗ ರಾಜಾ ವಕೀಲನಾಗಿ ಅರ್ಹತೆ ಪಡೆದಿರುವ ಖುಷಿಯನ್ನು ಅವರ ತಾಯಿ ರಾಧಿಕಾ ವೇಮುಲ ಹಂಚಿಕೊಂಡಿದ್ದಾರೆ.
ಹೈದರಾಬಾದ್ : ನೊಂದ ದಲಿತ ವಿದ್ಯಾರ್ಥಿ ಆತ್ಮಹತ್ಯೆ, ವಿವಿ ಪ್ರಕ್ಷುಬ್ಧ
'ನನ್ನ ಕಿರಿಯ ಮಗ ರಾಜಾ ವೇಮುಲ ಈಗ ವಕೀಲ. ರೋಹಿತ್ ವೇಮುಲನ ಸಾವಿನ ಐದು ವರ್ಷದ ನಂತರ ನಮ್ಮ ಬದುಕಿನಲ್ಲಿ ಪ್ರಮುಖ ಬದಲಾವಣೆಯೊಂದು ಆಗಿದೆ. ಇನ್ನು ಮುಂದೆ ವಕೀಲ ರಾಜಾ ವೇಮುಲ ನ್ಯಾಯಾಲಯದ ಕಾನೂನಿನಲ್ಲಿ ಜನರು ಮತ್ತು ಅವರ ಹಕ್ಕುಗಳಿಗಾಗಿ ಹೋರಾಟ/ಕೆಲಸ ಮಾಡಲಿದ್ದಾನೆ. ಇದು ಸಮಾಜಕ್ಕೆ ನನ್ನ ಮರು ಪಾವತಿ. ಆತನನ್ನು ಆಶೀರ್ವದಿಸಿ' ಎಂದು ರಾಧಿಕಾ ವೇಮುಲ ಟ್ವೀಟ್ ಮಾಡಿದ್ದಾರೆ. ಮುಂದೆ ಓದಿ.
ಮಗನನ್ನು ಕಳೆದುಕೊಳ್ಳುವ ದುಃಖವೇನೆಂದು ನನಗೆ ಗೊತ್ತು: ರಾಧಿಕಾ ವೆಮುಲಾ
ಹಲ್ಲೆ ಆರೋಪದಲ್ಲಿ ಅಮಾನತು
2015ರಲ್ಲಿ ಹೈದರಾಬಾದ್ ಕೇಂದ್ರ ವಿವಿಯಲ್ಲಿ ಎಬಿವಿಪಿ ಕಾರ್ಯಕರ್ತನಾಗಿದ್ದ ವಿದ್ಯಾರ್ಥಿಯೊಬ್ಬನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಐವರು ದಲಿತ ಸಂಶೋಧನಾ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿತ್ತು. ಇದರಲ್ಲಿ ರೋಹಿತ್ ವೇಮುಲ ಕೂಡ ಒಬ್ಬರು. ವಿ.ವಿಯಲ್ಲಿ ಅವರು ವಿಜ್ಞಾನ ತಂತ್ರಜ್ಞಾನ ಮತ್ತು ಸಾಮಾಜಿಕ ಅಧ್ಯಯನಗಳಲ್ಲಿ ಪಿಎಚ್ಡಿ ಮಾಡುತ್ತಿದ್ದರು.
ಆತ್ಮಹತ್ಯೆಗೆ ಶರಣಾಗಿದ್ದ ರೋಹಿತ್
ವಿ.ವಿಯ ಶಿಸ್ತು ಸಮಿತಿಯು ತನಿಖೆ ನಡೆಸಿ ಈ ಪ್ರಕರಣದಲ್ಲಿ ರೋಹಿತ್ ಮತ್ತು ಇತರ ನಾಲ್ವರು ತಪ್ಪಿತಸ್ಥರು ಎಂದು ಅವರ ಅಮಾನತನ್ನು ಎತ್ತಿಹಿಡಿದಿತ್ತು. ಇದರಿಂದ ತೀವ್ರ ನೊಂದಿದ್ದ 26 ವರ್ಷದ ರೋಹಿತ್, 2016ರ ಜನವರಿ 17ರಂದು ಹಾಸ್ಟೆಲ್ನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಘಟನೆ ದೇಶದಾದ್ಯತ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಅನೇಕ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದವು.
ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್!
ಆಟೋ ಓಡಿಸುತ್ತಿದ್ದ ರಾಜಾ
ಈ ವಿದ್ಯಾರ್ಥಿ ಚಳವಳಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ರೋಹಿತ್ ತಾಯಿ ರಾಧಿಕಾ ಮತ್ತು ಕಿರಿಯ ಸಹೋದರ ರಾಜಾ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಹೋರಾಟ ನಡೆಸಿದ್ದರು. ಪುದುಚೆರಿ ವಿ.ವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರಾಜಾ, ದೈನಂದಿನ ಜೀವನೋಪಾಯಕ್ಕಾಗಿ 2017ರಿಂದ ಗುಂಟೂರು ಮತ್ತು ತೆನಾಲಿ ನಡುವೆ ಸರಕು ಆಟೋರಿಕ್ಷಾವನ್ನು ಓಡಿಸುತ್ತಿದ್ದರು.
ಉದ್ಯೋಗದ ಆಹ್ವಾನ ನೀಡಿದ್ದರು
'ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಅನೇಕ ಜನರು ನನಗೆ ಉದ್ಯೋಗ ನೀಡುವ ಆಫರ್ ಕೊಟ್ಟಿದ್ದರು. ಆದರೆ ನಾನು ರಾಜಕಾರಣಿಗಳಿಂದ ಕೆಲಸ ಪಡೆದುಕೊಂಡಿದ್ದರೆ ಅವರೊಂದಿಗೆ ಗುರುತಿಸಿಕೊಳ್ಳುವಂತೆ ಆಗುತ್ತಿತ್ತು. ಈ ಸಂಗತಿಯನ್ನು ನನ್ನ ಅಣ್ಣ ದ್ವೇಷಿಸುತ್ತಿದ್ದ. ಈಗ ನಾನು ನ್ಯಾಯ ಪಡೆದುಕೊಳ್ಳುವ ಹೋರಾಟದಲ್ಲಿದ್ದೇನೆ. ಮುಂದೆ ಕೆಲಸಕ್ಕೆ ಪ್ರಯತ್ನಿಸುತ್ತೇನೆ' ಎಂದು ರಾಜಾ ವೇಮುಲ ತಿಳಿಸಿದ್ದಾರೆ.
ವಿಜ್ಞಾನಿಯಾಗುವ ಕನಸು ಕಂಡಿದ್ದರು
ದೇಶದಾದ್ಯಂತ ನಡೆಯುತ್ತಿರುವ ಸಭೆಗಳಲ್ಲಿ, ಸಮಾರಂಭಗಳಲ್ಲಿ ಭಾಗವಹಿಸಲು ಓಡಾಟಕ್ಕಾಗಿ ತನಗೆ ಹಾಗೂ ತಾಯಿಗೆ ಹೆಚ್ಚಿನ ಹಣದ ಅಗತ್ಯ ಬೀಳುತ್ತಿದೆ ಎಂದು ಹೇಳಿದ್ದಾರೆ. ವಿಜ್ಞಾನಿಯಾಗಲು ಬಯಸಿದ್ದ ರಾಜಾ, ಅನ್ವಯಿಕ ಭೂಶಾಸ್ತ್ರದಲ್ಲಿ ಎಂಎಸ್ಸಿ ಪದವಿ ಪಡೆದಿದ್ದಾರೆ. ನನ್ನ ಅಣ್ಣನ ಸಾವು ಕನಸುಗಳನ್ನೆಲ್ಲ ಛಿದ್ರಗೊಳಿಸಿತು. ಅದರಿಂದ ಹೊರಬರಲು ಸಾಕಷ್ಟು ಸಮಯ ಬೇಕಾಯಿತು ಎಂದಿದ್ದಾರೆ. ನ್ಯಾಯದ ಹೋರಾಟಕ್ಕಾಗಿ ಕಾನೂನು ಪದವಿ ಪಡೆಯುವುದು ಒಳಿತು ಎಂದು ಅವರು ವಕೀಲಿಕೆಯನ್ನು ಅಭ್ಯಾಸ ಮಾಡಿದ್ದಾರೆ.