ದ್ರೌಪದಿ ಮುರ್ಮು ಕುರಿತು ರಾಮ್ ಗೋಪಾಲ್ ವರ್ಮಾ ಟ್ವೀಟ್: ದೂರು ಕೊಟ್ಟ ಬಿಜೆಪಿ
ಹೈದರಾಬಾದ್, ಜೂನ್ 24: ವಿವಾದಗಳಿಂದಲೇ ಸುದ್ದಿಯಲ್ಲಿರುವ ಖ್ಯಾತ ನಿರ್ದೇಶಕ ಮತ್ತು ಚಿತ್ರ ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಎನ್ಡಿಎಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಕುರಿತ ಟ್ವೀಟ್ ಮತ್ತೊಂದು ವಿವಾದ ಸೃಷ್ಟಿಸಿದೆ. ವರ್ಮಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಪೊಲೀಸ್ ದೂರು ದಾಖಲಿಸಿದ್ದಾರೆ.
ಬಿಜೆಪಿ ನಾಯಕರಾದ ಗುಡೂರು ನಾರಾಯಣ ರೆಡ್ಡಿ ಮತ್ತು ಟಿ.ನಂದೇಶ್ವರ್ ಗೌಡ್ ರಾಮ್ ಗೋಪಾಲ್ ವರ್ಮಾ ವಿರುದ್ಧ ಹೈದರಾಬಾದ್ನ ಅಬಿಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ, ಆದರೆ ವರ್ಮಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ರಾಷ್ಟ್ರಪತಿ ಚುನಾವಣೆ: ದ್ರೌಪದಿ ಮುರ್ಮುಗೆ ಜಗನ್ ಮೋಹನ್ ರೆಡ್ಡಿ ಬೆಂಬಲ
ಮುಂದಿನ ತಿಂಗಳು ನಡೆಯಲಿರುವ ರಾಷ್ಟ್ರಪತಿ ಚುನಾವಣೆಗೆ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್ಡಿಎ) ಅಭ್ಯರ್ಥಿಯಾಗಿರುವ ಮುರ್ಮು ವಿರುದ್ಧ ವರ್ಮಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಸಿನಿಮಾ ನಿರ್ಮಾಪಕ ಆರ್ಜಿವಿ ಜೂನ್ 22 ರಂದು ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಅದರಲ್ಲಿ "ದ್ರೌಪದಿ ರಾಷ್ಟ್ರಪತಿಯಾಗಿದ್ದರೆ ಪಾಂಡವರು ಯಾರು? ಮತ್ತು ಅದಕ್ಕಿಂತ ಮುಖ್ಯವಾಗಿ ಕೌರವರು ಯಾರು?" ಎಂದು ಕೇಳಿದ್ದು ಬಿಜೆಪಿಯವರನ್ನು ಕೆರಳಿಸಿದೆ. ದೂರಿನ ಬಗ್ಗೆ ಕಾನೂನು ಅಭಿಪ್ರಾಯ ಪಡೆದು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
Breaking: ರಾಷ್ಟ್ರಪತಿ ಚುನಾವಣೆಗೆ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ನಾಮಪತ್ರ
ವರ್ಮಾಗೆ ಮನೋವೈದ್ಯರ ಪರೀಕ್ಷೆ ಮಾಡಿಸಬೇಕು
ಬಿಜೆಪಿಯ ಆಂಧ್ರಪ್ರದೇಶ ಘಟಕದ ಮುಖ್ಯಸ್ಥ ಸೋಮು ವೀರರಾಜು, ಆರ್ಜಿವಿ ಹೇಳಿಕೆಯನ್ನು ಕಟುವಾಗಿ ಟೀಕಿಸಿದ್ದಾರೆ ಮತ್ತುವರ್ಮಾ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಆರ್ಜಿವಿ ಟ್ವೀಟ್ ಅನ್ನು ಪೊಲೀಸರು ಗಮನಿಸಿ ಅವರ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಬೇಕು ಎಂದು ಅವರು ಹೇಳಿದರು.
ವರ್ಮಾರನ್ನು ಜೈಲಿಗೆ ಕಳುಹಿಸಬೇಕು ಮತ್ತು ಮನೋವೈದ್ಯರಿಂದ ಅವರನ್ನು ಪರೀಕ್ಷಿಸಿಬೇಕು ಎಂದು ವೀರರಾಜು ಒತ್ತಾಯಿಸಿದ್ದಾರೆ.
ಆರ್ಜಿವಿ ಸ್ಪಷ್ಟನೆ
ಏತನ್ಮಧ್ಯೆ, ಶುಕ್ರವಾರ ಆರ್ಜಿವಿ ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಿದ್ದಾರೆ. "ಇದು ಕೇವಲ ಶ್ರದ್ಧೆಯಿಂದ ವ್ಯಂಗ್ಯವಾಗಿ ಹೇಳಲಾಗಿದೆ ಮತ್ತು ಬೇರೆ ರೀತಿಯಲ್ಲಿ ಯಾರೊಬ್ಬರ ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲ" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ ವರ್ಮಾ, ರಾಜಕಾರಣಿಗಳು ಒಬ್ಬರನ್ನೊಬ್ಬರು ಕೆಳಕ್ಕೆ ಎಳೆದುಕೊಂಡಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು. "ಎಲ್ಲಾ ರಾಜಕಾರಣಿಗಳು ಒಬ್ಬರನ್ನೊಬ್ಬರು ಬೆನ್ನಿಗೆ ಇರಿದು ಕೆಳಕ್ಕೆ ಬೀಳಿಸುವುದರಲ್ಲಿ ನಿರತರಾಗಿರುವಾಗ, ಅವರ ಪ್ರಾಥಮಿಕ ಕೆಲಸವಾದ ಜನರ ಸಮಸ್ಯೆಗಳನ್ನು ನೋಡಲು ಅವರಿಗೆ ಸಮಯ ಮತ್ತು ಶಕ್ತಿ ಯಾವಾಗ ಸಿಗುತ್ತದೆ" ಎಂದು ಅವರು ಬರೆದಿದ್ದಾರೆ.