ಹೈದರಾಬಾದ್ ಅಪೋಲೋ ಆಸ್ಪತ್ರೆಯಿಂದ ರಜನಿಕಾಂತ್ ಡಿಸ್ಚಾರ್ಜ್
ಹೈದರಾಬಾದ್, ಡಿ.27: ಜ್ಯುಬಿಲಿ ಹಿಲ್ಸ್ ಅಪೊಲೊ ಆಸ್ಪತ್ರೆಯಿಂದ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಭಾನುವಾರ ಸಂಜೆ ಡಿಸ್ಚಾರ್ಜ್ ಮಾಡಲಾಗಿದೆ. ಆದರೆ, ಒಂದು ವಾರಗಳ ಕಾಲ ಕಡ್ಡಾಯವಾಗಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ.
ರಜನಿಕಾಂತ್ ಆರೋಗ್ಯ ಸ್ಥಿತಿಯ ಬಗ್ಗೆ ಗಾಬರಿಗೊಂಡಿದ್ದ ಅಭಿಮಾನಿಗಳಿಗೆ ಅಪೊಲೊ ಆಸ್ಪತ್ರೆಯಿಂದ ಶುಭ ಸುದ್ದಿಯನ್ನು ಬೆಳಗ್ಗೆಯೇ ಆಸ್ಪತ್ರೆಯ ವೈದ್ಯಾಧಿಕಾರಿಗಳು ನೀಡಿದ್ದರು. ರಜನಿಕಾಂತ್ ಅವರಿಗೆ ಉಂಟಾಗಿದ್ದ ಅಧಿಕ ರಕ್ತದೊತ್ತಡ ಪರಿಸ್ಥಿತಿ ತಿಳಿಗೊಂಡಿದ್ದು, ಮಧ್ಯಾಹ್ನ ವೇಳೆ ಡಿಸ್ಚಾರ್ಜ್ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಪ್ರಕಟಣೆ ನೀಡಲಾಗಿತ್ತು. ಅದರಂತೆ, ಮಧ್ಯಾಹ್ನ ರಜನಿ ಅವರ ಆರೋಗ್ಯ ಪರಿಶೀಲಿಸಿದ ವೈದ್ಯರು, ಆಸ್ಪತ್ರೆಯಿಂದ ಮನೆಗೆ ತೆರಳಲು ಅನುಮತಿ ನೀಡಿದ್ದಾರೆ.
ರಜನಿಕಾಂತ್ ಪಕ್ಷದ ಚಿಹ್ನೆ, ಹೆಸರು ಇದೇ ಇರಬಹುದೇ?
ಕೊವಿಡ್ 19 ನೆಗಟಿವ್ ವರದಿ ಇದ್ದರೂ ರಜನಿಕಾಂತ್ ಅವರು ಚಿತ್ರೀಕರಣಕ್ಕೆ ತೆರಳದಂತೆ ವೈದ್ಯರು ಸೂಚಿಸಿದ್ದಾರೆ. ಔಷಧಿ, ಆಹಾರ ಸೇವನೆ ಬಗ್ಗೆ ಸೂಕ್ತ ಸಲಹೆ ನೀಡಲಾಗಿದೆ. 70 ವರ್ಷ ವಯಸ್ಸಿನ ರಜನಿ ಅವರಿಗೆ ಈಗ ಸಂಪೂರ್ಣ ವಿಶ್ರಾಂತಿಯ ಅಗತ್ಯವಿದೆ. ಒಂದು ವಾರದ ಬಳಿಕ ಅವರ ರಕ್ತದೊತ್ತಡ ಪರೀಕ್ಷೆ ನಡೆಸಿ ಮತ್ತೊಮ್ಮೆ ಪರಿಶೀಲಿಸಲಾಗುವುದು ಎಂದು ಅಪೊಲೊ ಆಸ್ಪತ್ರೆ ಅಧಿಕೃತ ಹೇಳಿಕೆ ನೀಡಿದೆ.
ಹೈದರಾಬಾದ್ ನಲ್ಲಿ ಡಿ.15ರಿಂದ ಅಣ್ಣಾತೆ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಅಣ್ಣಾತೆ ಚಿತ್ರ ತಂಡದ ಏಳು ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಜನಿಕಾಂತ್ ಅವರಲ್ಲಿ ರಕ್ತದೊತ್ತಡದ ಏರಿಳಿತ ಮತ್ತು ಬಳಲಿಕೆ ಕಂಡುಬಂದ ಹಿನ್ನೆಲೆಯಲ್ಲಿ ಶುಕ್ರವಾರದಂದು ಜ್ಯುಬಿಲಿಹಿಲ್ಸ್ ನಲ್ಲಿರಿವ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆಯಲ್ಲೂ ಸಂಪೂರ್ಣ ವಿಶ್ರಾಂತಿಗೆ ಸಲಹೆ ನೀಡಲಾಗಿತ್ತು. ಹೀಗಾಗಿ ಅವರ ಭೇಟಿಗೆ ಯಾರಿಗೂ ಅವಕಾಶ ನೀಡಿರಲಿಲ್ಲ.
ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ವರದಿಯಲ್ಲಿ ಏನಿದೆ?
ಜನವರಿ 21,2021ರಂದು ಹೊಸ ರಾಜಕೀಯ ಬದುಕು ಆರಂಭ, ಡಿಸೆಂಬರ್ 31ರಂದು ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡುವುದಾಗಿ ರಜನಿಕಾಂತ್ ಘೋಷಿಸಿರುವುದನ್ನು ಇಲ್ಲಿ ಸ್ಮರಿಸಬಹುದು.