ಆಂಧ್ರ ಅಸೆಂಬ್ಲಿ ಕಟ್ಟಡ ವಿನ್ಯಾಸಕ್ಕೆ ರಾಜಮೌಳಿ ಸಲಹೆಗಾರ
ಹೈದರಾಬಾದ್, ಸೆಪ್ಟೆಂಬರ್ 22: ಆಂಧ್ರಪ್ರದೇಶ ರಾಜ್ಯಕ್ಕಾಗಿ ಹೊಸದಾಗಿ ನಿರ್ಮಾಣವಾಗುತ್ತಿರುವ ರಾಜಧಾನಿ, ಅಮರಾವತಿಯಲ್ಲಿ ತಾವು ಕೇವಲ ಅಲ್ಲಿನ ಅಸೆಂಬ್ಲಿ ಕಟ್ಟಡದ ವಿನ್ಯಾಸದಲ್ಲಿ ಮಾತ್ರ ತೊಡಗಿಸಿಕೊಂಡಿರುವುದಾಗಿ ಬಾಹುಬಲಿ ಚಿತ್ರದ ನಿರ್ದೇಶಕ ಎಸ್.ಎಸ್. ರಾಜಮೌಳಿ ಸ್ಪಷ್ಟಪಡಿಸಿದ್ದಾರೆ.
ಆಂಧ್ರ ಪ್ರದೇಶ ಸರ್ಕಾರವು ತನಗಾಗಿ ಹೊಸ ರಾಜಧಾನಿಯೊಂದನ್ನು ನಿರ್ಮಾಣ ಮಾಡುತ್ತಿದ್ದು ಅದರ ಸಂಪೂರ್ಣ ಉಸ್ತುವಾರಿಯನ್ನು ಲಂಡನ್ ನ ಫಾಸ್ಟರ್ ಪ್ಲಸ್ ಪಾರ್ಟ್ ನರ್ಸ್ ಎಂಬ ಸಂಸ್ಥೆಗೆ ನೀಡಲಾಗಿದೆ. ಈ ಮಹಾ ನಗರದ ನಿರ್ಮಾಣದಲ್ಲಿ ರಾಜಮೌಳಿ ತೊಡಗಿಸಿಕೊಂಡಿದ್ದು, ಇಡೀ ಯೋಜನೆಯ ಮೇಲುಸ್ತುವಾರಿ ವಹಿಸಿಕೊಂಡಿದ್ದಾರೆಂಬ ಸುದ್ದಿಗಳು ಕೆಲ ಮಾಧ್ಯಮಗಳಲ್ಲಿ ಹರಿದಾಡಿದ್ದವು.
ಆದರೆ, ಈ ಸುದ್ದಿಗಳನ್ನು ಟ್ವಿಟ್ಟರ್ ನಲ್ಲಿ ಅಲ್ಲಗಳೆದಿರುವ ರಾಜಮೌಳಿ, ತಾವು ಕೇವಲ ಅಸೆಂಬ್ಲಿ ಕಟ್ಟಡದ ವಿನ್ಯಾಸದಲ್ಲಿ ಮಾತ್ರ ತೊಡಗಿಸಿಕೊಂಡಿದ್ದಾಗಿ ತಿಳಿಸಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಇಲ್ಲಿನ ಅಸೆಂಬ್ಲಿ ಕಟ್ಟಡವು ಇಡೀ ವಿಶ್ವದ ಗಮನ ಸೆಳೆಯುಂಥ ಕಟ್ಟಡವಾಗಬೇಕೆಂದು ಆಶಿಸಿ, ನನ್ನ ಸಲಹೆ ಕೇಳಿದ್ದರು. ಅವರ ಸ್ನೇಹಪೂರ್ವಕ ಆಗ್ರಹದ ಮೇರೆಗೆ ನಾನು ಅದರ ವಿನ್ಯಾಸದ ವಿಚಾರದಲ್ಲಿ ಕೊಂಚ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.
All I am doing is interpreting the vision of @NCBN garu to Foster + Partners to quicken the process.
— rajamouli ss (@ssrajamouli) September 21, 2017