ಖಾಸಗಿ ಲ್ಯಾಬ್ ಗಳಲ್ಲಿ ಕೊವಿಡ್-19 ಪರೀಕ್ಷಿಸುವಂತಿಲ್ಲ: ಆರೋಗ್ಯ ಸಚಿವ
ಹೈದ್ರಾಬಾದ್, ಜೂನ್.24: ದೇಶವನ್ನು ಕೊರೊನಾವೈರಸ್ ಎಂಬ ಮಹಾಮಾರಿ ಆತಂಕದ ಕೂಪಕ್ಕೆ ತಳ್ಳಿದೆ. ಇಂಥ ಸಂದರ್ಭದಲ್ಲಿ ಖಾಸಗಿ ವೈದ್ಯಕೀಯ ಪ್ರಯೋಗಾಲಯಗಳು ಯಾವುದೇ ಕಾರಣಕ್ಕೂ ವಾಣಿಜ್ಯ ಉದ್ದೇಶಕ್ಕಾಗಿ ಕೊವಿಡ್-19 ತಪಾಸಣೆ ನಡೆಸುವಂತಿಲ್ಲ ಎಂದು ತೆಲಂಗಾಣ ಆರೋಗ್ಯ ಸಚಿವ ಇಟೇಲಾ ರಾಜೇಂದರ್ ತಿಳಿಸಿದ್ದಾರೆ.
ಆರೋಗ್ಯ ಅಧಿಕಾರಿಗಳ ಸಭೆಯ ಬಳಿಕ ಮಾತನಾಡಿದ ಆರೋಗ್ಯ ಸಚಿವ ಇಟೇಲಾ ರಾಜೇಂದ್ರರ್ ರಾಜ್ಯವು ಎದುರಿಸುತ್ತಿರುವ ಸಂದಿಗ್ಘ ಸ್ಥಿತಿಯಲ್ಲಿ ಲಾಭವನ್ನು ಪಡೆಯುವ ಬಗ್ಗೆ ಆಲೋಚಿಸುವಂತಿಲ್ಲ. ವಾಣಿಜ್ಯ ಉದ್ದೇಶಕ್ಕಾಗಿ ಕೊರೊನಾವೈರಸ್ ಸೋಂಕು ತಪಾಸಣೆ ನಡೆಸುವ ಹಾಗಿಲ್ಲ ಎಂದರು.
ತೆಲಂಗಾಣ; ಕೊರೊನಾ ವೈರಸ್ ಸೋಂಕಿಗೆ ವೈದ್ಯರೊಬ್ಬರು ಬಲಿ
ಸಾಮಾನ್ಯ ವೈದ್ಯಕೀಯ ತಪಾಸಣೆಗೂ, ಕೊರೊನಾವೈರಸ್ ವೈದ್ಯಕೀಯ ತಪಾಸಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಯಾವುದೇ ವ್ಯಕ್ತಿಯು ಕೊರೊನಾವೈರಸ್ ತಪಾಸಣೆಗೆ ಎಂದು ನಿಮ್ಮಲ್ಲಿ ಬಂದರೆ ಅಧಿಕೃತ ವರದಿ ಬರುವವರೆಗೂ ಅಂಥವರನ್ನು ಐಸೋಲೇಷನ್ ನಲ್ಲಿ ಇರಿಸಬೇಕು ಎಂದು ಸಚಿವ ರಾಜೇಂದರ್ ಸೂಚನೆ ನೀಡಿದ್ದಾರೆ.
ಪ್ರಯೋಗಾಲಯದ ಸಿಬ್ಬಂದಿ ಪಿಪಿಇ ಕಿಟ್ ಬಳಸಿ:
ರಾಜ್ಯದಲ್ಲಿ ಕೊರೊನಾವೈರಸ್ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಪ್ರತಿಯೊಂದು ಕೊವಿಡ್-19 ಪ್ರಯೋಗಾಲಯಗಳಲ್ಲೂ ಸಿಬ್ಬಂದಿಯು ಕಡ್ಡಾಯವಾಗಿ ಸ್ವಯಂ ಸುರಕ್ಷತಾ ಕಿಟ್ ಗಳನ್ನು ಧರಿಸುವುದು ಉತ್ತಮವಾಗಿದೆ. ಇಲ್ಲದೇ ಹೋದಲ್ಲಿ ಸೋಂಕಿತರಿಂದ ಲ್ಯಾಬ್ ಸಿಬ್ಬಂದಿಗೆ ಮಹಾಮಾರಿ ಅಂಟಿಕೊಳ್ಳುವ ಅಪಾಯವಿರುತ್ತದೆ ಎಂದು ಆರೋಗ್ಯ ಸಚಿವ ಇಟೇಲಾ ರಾಜೇಂದರ್ ಎಚ್ಚರಿಕೆ ನೀಡಿದ್ದಾರೆ.
ತೆಲಂಗಾಣದಲ್ಲಿ ಮಂಗಳವಾರದ ಅಂಕಿ-ಅಂಶಗಳ ಪ್ರಕಾರ ಒಂದೇ ದಿನ 879 ಮಂದಿಗೆ ಕೊರೊನಾವೈರಸ್ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆಯು 9553ಕ್ಕೆ ಏರಿಕೆಯಾಗಿದೆ. ಈ ಪೈಕಿ 4224 ಸೋಂಕಿತರು ಗುಣಮುಖರಾಗಿದ್ದರೆ, ಬಾಕಿ 5109 ಸೋಂಕಿತರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ ಮಹಾಮಾರಿಗೆ 220 ಮಂದಿ ಪ್ರಾಣ ಬಿಟ್ಟಿದ್ದಾರೆ.