ನಾಪತ್ತೆಯಾಗಿದ್ದ ವಿವಾಹಿತ ಮಹಿಳಾ ಟೆಕ್ಕಿ ಮರಳಿ ಮನೆಗೆ
ಹೈದ್ರಾಬಾದ್, ಅ. 13 : ಅಕ್ಟೋಬರ್ 9 ರಂದು ಹೈದ್ರಾಬಾದ್ ನಿಂದ ನಾಪತ್ತೆಯಾಗಿದ್ದ ವಿವಾಹಿತ ಟೆಕ್ಕಿ ಭವ್ಯಶ್ರೀ(26) ತನ್ನ ಗೆಳೆಯನೊಂದಿಗೆ ವಿಶಾಖಪಟ್ಟಣದಲ್ಲಿ ಸುರಕ್ಷಿತವಾಗಿ ಪತ್ತೆಯಾಗಿದ್ದಾಳೆ. ವಿಶೇಷ ಪೊಲೀಸ್ ತನಿಖಾ ತಂಡ ಆಕೆಯನ್ನು ಭಾನುವಾರ ವಾಪಸ್ ಕರೆದುಕೊಂಡು ಬಂದಿದೆ. ಅವಳ ಮೊಬೈಲ್ ಸಂಖ್ಯೆ ಬೆನ್ನುಹತ್ತಿದ ಪೊಲೀಸರಿಗೆ ಆಕೆ ಇರುವ ಜಾಗವನ್ನು ಪತ್ತೆಮಾಡಿ ವಾಪಸ್ ಕರೆದುಕೊಂಡು ಬಂದಿದ್ದಾರೆ.
ಕೆಲಸ ಮುಗಿಸಿ ಅಕ್ಟೋಬರ್ 9 ರಂದು ರಾತ್ರಿ ಕಚೇರಿಯಿಂದ ಹೊರಟ ಭವ್ಯಶ್ರೀ ಗಂಡನೊಂದಿಗೆ ನಿರಂತರವಾಗಿ ವಾಟ್ಸಾಪ್ ಸಂದೇಶ ಕಳುಹಿಸುತ್ತಿದ್ದಳು. ಮನೆಗೆ ಖಾಸಗಿ ಕ್ಯಾಬ್ ವೊಂದರಲ್ಲಿ ಆಗಮಿಸುತ್ತಿದ್ದೇನೆ ಎಂದೂ ಹೇಳಿದ್ದಳು. ಆದರೆ ಏಕಾಏಕಿ ಸಂದೇಶ ಬರುವುದು ನಿಂತಿತ್ತು. ಕರೆ ಮಾಡಿದರೆ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿತ್ತು.[ಉದ್ಯೋಗಿಗೆ ಮುತ್ತು ಕೊಟ್ಟ ಸಿಇಒ]
ಕಂಗಾಲಾದ ಆಕೆಯ ಗಂಡ ಕಾರ್ತಿಕ್ ಚೈತನ್ಯ ಸ್ನೇಹಿತರ ಬಳಿ ವಿಚಾರಿಸಿದ್ದರು. ಆದರೆ ಎಲ್ಲಿಯೂ ಮಾಹಿತಿ ಸಿಕ್ಕಿರಲಿಲ್ಲ. ನಂತರ ಅನಿವಾರ್ಯವಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆದರೆ ಶನಿವಾರ ಗಂಡನಿಗೆ ಕರೆ ಮಾಡಿದ ಭವ್ಯಶ್ರೀ ಒಂದೆರಡು ದಿನಗಳಲ್ಲಿ ಹೈದ್ರಾಬಾದ್ಗೆ ಹಿಂದಿರುತ್ತೇನೆ. ನಾನು ಸುರಕ್ಷಿತವಾಗಿದ್ದೇನೆ ಎಂದು ತಿಳಿಸಿದ್ದಳು. ಅಲ್ಲದೇ ಇದಕ್ಕೆ ಸಾಕ್ಷಿ ಎಂಬಂತೆ ಆಕೆ ಸಿಕಂದರಾಬಾದ್ ನಿಂದ ವಿಜಾಗ್ ಗೆ ರೈಲು ಟಿಕೇಟ್ ಖರೀದಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.'
ಅದಾಗಲೇ ತನಿಖೆಗೆ ಇಳಿದಿದ್ದ ಪೊಲೀಸರ ತಂಡಗಳು ವಿವಿಧೆಡೆ ತೆರಳಿದೆ. ಈ ವೇಳೆ ಭವ್ಯಶ್ರೀ ಆಕೆಯ ಗೆಳೆಯನೊಂದಿಗೆ ವಿಶಾಖಪಟ್ಟಣದಲ್ಲಿ ಪತ್ತೆಯಾಗಿದ್ದಾಳೆ. ಜತೆಗಿದ್ದವನು ಭವ್ಯಶ್ರೀ ಕಾಲೇಜು ಸ್ನೇಹಿತ ಎಂದು ಹೇಳಲಾಗಿದ್ದು ಎರಡು ದಿನಗಳ ಕಾಲ ಟೆಕ್ಕಿ ಯಾಕೆ ತಲೆಮರೆಸಿಕೊಂಡಿದ್ದಳು ಎಂಬುದು ತನಿಖೆ ನಂತರವೇ ಬಹಿರಂಗವಾಗಲಿದೆ.[ಟೆಕ್ಕಿ ಗಿರೀಶ್ ಹತ್ಯೆ: ಶುಭಾಗೆ ಸುಪ್ರೀಂನಿಂದ ಜಾಮೀನು]
ಒಪನ್ ಟೆಕ್ನಾಲಜೀಸ್ ನಲ್ಲಿ ಕೆಲಸ ಮಾಡುತ್ತಿರುವ ಭವ್ಯಶ್ರೀ ಕಳೆದ ಎರಡೂವರೆ ವರ್ಷದ ಹಿಂದೆ ಕಾರ್ತಿಕ್ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಮೂಲತಃ ವಿಜಯವಾಡದ ನಿವಾಸಿಗಳಾದ ದಂಪತಿ ಕಳೆದ ಕೆಲ ತಿಂಗಳುಗಳಿಂದ ಹೈದ್ರಾಬಾದ್ ನಲ್ಲಿ ವಾಸವಿದ್ದರು.