ಕಾಶ್ಮೀರಿ ಪಂಡಿತರ ಬಗ್ಗೆ ಹೇಳಿಕೆ: ಸಾಯಿ ಪಲ್ಲವಿ ವಿರುದ್ಧ ದೂರು
ಹೈದರಾಬಾದ್, ಜೂನ್ 16: ಕಾಶ್ಮೀರಿ ಪಂಡಿತರ ಹತ್ಯೆಯನ್ನು ದೇಶದಲ್ಲಿ ಗೋ ರಕ್ಷಕರ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಹೋಲಿಸಿ ಮಾತನಾಡಿದ ಬಹುಭಾಷಾ ನಟಿ ಸಾಯಿಪಲ್ಲವಿ ವಿರುದ್ಧ ಹೈದರಾಬಾದ್ನಲ್ಲಿ ದೂರು ದಾಖಲಾಗಿದೆ.
ನಟಿ ಸಾಯಿ ಪಲ್ಲವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಜರಂಗದಳದ ಸದಸ್ಯ ಅಖಿಲ್ ಹೈದರಾಬಾದ್ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಧರ್ಮದ ಹೆಸರಿನಲ್ಲಿ ಹಿಂಸಾಚಾರ ಖಂಡಿಸಿದ ಸಾಯಿ ಪಲ್ಲವಿ
ಗ್ರೇಟ್ ಆಂಧ್ರ ಯೂಟ್ಯೂಬ್ ಚಾನೆಲ್ನಲ್ಲಿ ಸಂದರ್ಶನ ಕಾರ್ಯಕ್ರಮದಲ್ಲಿ ನಟಿ ಸಾಯಿ ಪಲ್ಲವಿ, ಕಾಶ್ಮೀರಿ ಭಯೋತ್ಪಾದಕರನ್ನು ಗೋರಕ್ಷಕರಿಗೆ ಹೋಲಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಾವು ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಮತ್ತು ದೂರು ನೀಡಲು ಉದ್ದೇಶಿಸಿದ್ದೇವೆ. ನಟಿ ಹಾಗೂ ಚಿತ್ರದ ನಿರ್ದೇಶಕ ವೇಣು ಉಡುಗುಲ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ. ದೂರಿನ ಮೇಲೆ ಪೊಲೀಸರು ಇಲ್ಲಿಯವರೆಗೆ ಎಫ್ಐಆರ್ ದಾಖಲಿಸಿಲ್ಲ.
ಉದ್ದೇಶಿತ ಹತ್ಯೆ ವಿರೋಧಿಸಿ ಖೀರ್ ಭವಾನಿ ಉತ್ಸವ ಬಹಿಷ್ಕರಿಸಿದ ಕಾಶ್ಮೀರಿ ಪಂಡಿತರು
ಸಾಯಿ ಪಲ್ಲವಿ ಹೇಳಿಕೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಕೆಲವರು ಸಾಯಿ ಪಲ್ಲವಿ ಪರವಾಗಿ ಟ್ವೀಟ್ ಮಾಡಿದ್ದರೆ, ಮತ್ತೆ ಕೆಲವರು ಸಾಯಿ ಪಲ್ಲವಿ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲ ಹಿಂದೂ ಸಂಘಟನೆ ಕಾರ್ಯಕರ್ತರು ಟ್ವಿಟರ್ನಲ್ಲಿ ಬಾಯ್ಕಾಟ್ ವಿರಾಟಪರ್ವಂ ಎಂದು ಟ್ವೀಟ್ ಮಾಡುತ್ತಿದ್ದಾರೆ.
ವಿವಾದಕ್ಕೆ ಕಾರಣವಾದ ಹೇಳಿಕೆ
ತೆಲುಗು ಚಿತ್ರ 'ವಿರಾಟ ಪರ್ವಂ' ಪ್ರಚಾರದ ಭಾಗವಾಗಿ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ನಟಿ ಸಾಯಿ ಪಲ್ಲವಿ, "ಕಾಶ್ಮೀರ ಫೈಲ್ಸ್ ಸಿನಿಮಾದಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯನ್ನು ತೋರಿಸಲಾಗಿದೆ. ನೀವು ಅದನ್ನು ಧಾರ್ಮಿಕ ಸಂಘರ್ಷ ಎಂದು ನೋಡಿದರೆ, ಹಸುಗಳನ್ನು ಸಾಗಿಸುವ ವಾಹನವನ್ನು ಚಲಾಯಿಸುತ್ತಿದ್ದಾಗ ಮುಸಲ್ಮಾನರೊಬ್ಬರ ಮೇಲೆ ಹಲ್ಲೆ ನಡೆಸಿದ ಘಟನೆ ಇತ್ತೀಚಿಗೆ ನಡೆದಿದೆ, ಆ ಮುಸ್ಲಿಂ ವ್ಯಕ್ತಿಯಿಂದ 'ಜೈ ಶ್ರೀ ರಾಮ್' ಎಂದು ಘೋಷಣೆ ಕೂಗಿಸಿದ್ದಾರೆ. ಹಾಗಾದರೆ ಆಗ ನಡೆದದ್ದಕ್ಕೂ ಈಗ ಆಗುತ್ತಿರುವುದಕ್ಕೂ ಏನು ವ್ಯತ್ಯಾಸ?" ಎಂದು ಪ್ರಶ್ನೆ ಮಾಡಿದ್ದರು.
|
ಹಲವರಿಂದ ವಿರೋಧ
ಸಾಯಿ ಪಲ್ಲವಿ ಹೇಳಿಕೆಗೆ ಹಲವು ಹಿಂದೂ ಪರ ಸಂಘಟನೆಗಳು ಸೇರಿದಂತೆ ಸಾಕಷ್ಟು ಜನ ವಿರೋಧ ವ್ಯಕ್ತಪಡಿಸಿದ್ದಾರೆ. ನಟಿ ಪ್ರಣೀತಾ ಸುಭಾಷ್ ಸಾಯಿ ಪಲ್ಲವಿ ಹೇಳಿಕೆ ವಿರೋಧಿಸಿ ಟ್ವೀಟ್ ಮಾಡಿದ್ದು, "ಕಾಶ್ಮೀರಿ ಇಸ್ಮಾಮಿಸ್ಟ್ ಭಯೋತ್ಪಾದನೆಯನ್ನು ಮತ್ತು ಕಾಶ್ಮೀರಿ ಪಂಡಿತರ ಅವಸ್ಥೆಯನ್ನು ಸಾಮಾನ್ಯಗೊಳಿಸಿವುದು ಸರಿಯಲ್ಲ. ಕಾಶ್ಮೀರಿ ಫೈಲ್ಸ್ ಚಿತ್ರವನ್ನು ಮತ್ತೊಮ್ಮೆ ವೀಕ್ಷಿಸಲಿ, ಸಂತ್ರಸ್ತರ ಅಳಲನ್ನು ನೋಡಿ, ಕೇಳಿ, ಅರ್ಥಮಾಡಿಕೊಳ್ಳಿ" ಎಂದು ಟ್ವೀಟ್ ಮಾಡಿದ್ದಾರೆ.
|
ಸಾಯಿಪಲ್ಲವಿ ಬೆಂಬಲಕ್ಕೆ ನಿಂತ ಟಿಆರ್ ಎಸ್
ಸಾಯಿ ಪಲ್ಲವಿ ಹೇಳಿಕೆಗೆ ಟಿಎಸ್ ಆರ್ ಮುಖಂಡ ಬೆಂಬಲ ವ್ಯಕ್ತಪಡಿಸಿದ್ದು, ಆಕೆ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದಾರೆ. ಟಿಎಆರ್ ಎಸ್ ಸಾಮಾಜಿಕ ಮಾಧ್ಯಮ ಸಂಚಾಲಕ ಯತೀಶ್ ರೆಡ್ಡಿ ಸಾಯಿಪಲ್ಲವಿ ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ.
"ಇತ್ತೀಚಿನ ಸಂದರ್ಶನಲ್ಲಿ ಸಾಯಿ ಪಲ್ಲವಿ ಹೇಳಿದ್ದರಲ್ಲಿ ಯಾವುದೇ ತಪ್ಪಿಲ್ಲ. ಅಹಿಂಸೆಯ ಪರವಾಗಿ ಮಾತನಾಡಿದ್ದಕ್ಕೆ ಆಕೆಗೆ ಅಭಿನಂದಿಸುತ್ತೇನೆ. ಬಲಪಂಥವಾಗಲಿ ಎಡಪಂಥವಾಗಲಿ ಹಿಂಸೆ ಎಂದಿಗೂ ಹಿಂಸೆಯೇ" ಎಂದು ಟ್ವೀಟ್ ಮಾಡಿದ್ದಾರೆ.
|
ಬಾಯ್ಕಾಟ್ ವಿರಾಟಪರ್ವಂ ಅಭಿಯಾನ
ಸಾಯಿ ಪಲ್ಲವಿ ಹೇಳಿಕೆ ಬೆನ್ನಲ್ಲೇ ಆಕೆಯ ಹೊಸ ಚಿತ್ರ ವಿರಾಟ ಪರ್ವಂಗೆ ಸಂಕಷ್ಟ ಎದುರಾಗಿದೆ. ನಟಿಯ ಹೇಳಿಕೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹಲವರು ವಿರಾಟಪರ್ವಂ ಚಿತ್ರ ಬಹಿಷ್ಕರಿಸುವಂತೆ ಕರೆ ನೀಡುತ್ತಿದ್ದಾರೆ.
"ನಿಮ್ಮದೇ ಜನರ ಇತಿಹಾಸವನ್ನು ನೀವು ಓದಬೇಕು, ಆಮೇಲೆ ನಿಮಗೆ ಕಾಶ್ಮೀರಿ ಪಂಡಿತ ನೋವು ಏನೆಂದು ಅರ್ಥವಾಗುತ್ತದೆ. ಬಹುತೇಕ ಹಿಂದೂಗಳ ಸಮಸ್ಯೆ ಏನೆಂದರೆ, ಅವರಿಗೆ ತಮ್ಮದೇ ಇತಿಹಾಸದ ಅರಿವಿಲ್ಲದೇ ಇರುವುದು" ಎಂದು ಟ್ವೀಟ್ ಮಾಡಿದ್ದಾರೆ.
"ನಮಗೆ ಗೊತ್ತಿಲ್ಲದೇ ಇರುವ ವಿಚಾರದ ಬಗ್ಗೆ ಕೆಲವೊಮ್ಮೆ ಮಾತನಾಡದೆ ಇರುವುದೇ ಉತ್ತಮ, ಏನನ್ನಾದರೂ ಹೇಳಿಕೆ ನೀಡುವ ಮುನ್ನ ಅರಿಯುವುದು ಒಳ್ಳೆಯದು. ಆಕೆ ಉತ್ತಮ ಡ್ಯಾನ್ಸರ್ ಮತ್ತು ನಟಿ, ಆದರೆ ಇತಿಹಾಸದ ಜ್ಞಾನ ಮಾತ್ರ ಸೊನ್ನೆ, ಲಕ್ಷಾಂತರ ಹಿಂದೂಗಳು ಅಭಿಮಾನವನ್ನು ಕಳೆದುಕೊಂಡಿದ್ದಾಳೆ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.