ಚಿತ್ರಗಳಲ್ಲಿ ನೋಡಿ ಫೈಲಿನ್ ಅಬ್ಬರ
ಹೈದರಾಬಾದ್, ಅ.13 : ಸಾಗರದಲ್ಲಿ ರಕ್ಕಸ ಅಲೆಗಳನ್ನು ಸೃಷ್ಟಿಸುತ್ತಾ ಗಂಟೆಗೆ 200 ಕಿ.ಮೀ. ವೇಗದಲ್ಲಿ ನುಗ್ಗಿದ ಫೈಲಿನ್ ರುದ್ರರರ್ತನ ನಡೆಸಿತು. ಬಿರುಗಾಳಿಯ ವೇಗಕ್ಕೆ ಎದುರು ಸಿಕ್ಕ ಮರ, ಗಿಡಗಳು ತರೆಗೆಲೆಗಳಂತಾದವು. ಆಂಧ್ರಪ್ರದೇಶ ಮತ್ತು ಒರಿಸ್ಸಾದಲ್ಲಿ ಫೈಲಿನ್ ತನ್ನ ಪ್ರಭಾವವನ್ನು ತೋರಿಸಿತು.
ಶನಿವಾರ ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಅನಾಹುತ ಸೃಷ್ಟಿಸಿದ ಫೈಲಿನ್ ಚಂಡಮಾರುತ ಸದ್ಯ ಉತ್ತರ ಮತ್ತು ವಾಯುವ್ಯ ದಿಕ್ಕಿನತ್ತ ಸಾಗುತ್ತಿದೆ. ಆಂಧ್ರಪ್ರದೇಶ ಚಂಡಮಾರುತದ ಭೀತಿಯಿಂದ ಸದ್ಯ ಪಾರಾಗಿದೆ ಎಂದು ಹವಾಮಾನ ಇಲಾಖೆ ಹೇಳಿಕೆ ನೀಡಿದೆ.
ಫೈಲಿನ್ ಅಬ್ಬರದ ಕುರಿತು ನಿಖರವಾದ ಮಾಹಿತಿ ಪಡೆದು, ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡ ಪರಿಣಾಮ ಅನಾಹುತಗಳು ಕಡಿಮೆಯಾಗಿವೆ. ಸದ್ಯ ಆಂಧ್ರಪ್ರದೇಶದಲ್ಲಿ ಮಳೆಯ ಅಬ್ಬರ ನಿಂತಿದ್ದು, ಆಗಿರುವ ನಷ್ಟದ ಕುರಿತು ಲೆಕ್ಕಾಚಾರ ನಡೆಸಲಾಗುತ್ತಿದೆ.
ಒರಿಸ್ಸಾ ರಾಜ್ಯದ ಕರಾವಳಿ ತೀರದ ಸುಮಾರು 7 ಜಿಲ್ಲೆಗಳಿಗೆ ಶನಿವಾರ ಸಂಜೆಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾಜಧಾನಿ ಭುವನೇಶ್ವರದಲ್ಲಿಯೇ ಭಾನುವಾರ ಸಂಜೆಯ ವೇಳೆಗೆ ವಿದ್ಯುತ್ ವ್ಯವಸ್ಥೆ ಸರಿಹೋಗಬಹುದು ಎಂದು ಅಂದಾಜಿಸಲಾಗಿದೆ. ಫೈಲಿನ್ ಸೃಷ್ಟಿಸಿದ ಹಾನಿಯನ್ನು ಚಿತ್ರಗಳಲ್ಲಿ ನೋಡಿ.(ಪಿಟಿಐ ಚಿತ್ರಗಳು)
ರಕ್ಕಸ ಗಾತ್ರದ ಅಲೆಗಳು
ಸಮುದ್ರದಲ್ಲಿ 3.5 ಮೀಟರ್ ಗಿಂತಲೂ ಎತ್ತರದ ರಕ್ಕಸಗಾತ್ರದ ಅಲೆಗಳನ್ನು ಸೃಷ್ಟಿಸುತ್ತ ಫೈಲಿನ್ ಭೂಪ್ರದೇಶದತ್ತ ಧಾವಿಸಿತು. ಒಡಿಶಾ, ಆಂಧ್ರ ಕರಾವಳಿಯಲ್ಲಿ ತನ್ನ ವಿರಾಟ ರೂಪ ಪ್ರದರ್ಶಿಸಿತು. ಒರಿಸ್ಸಾದಲ್ಲಿ ಮರದಡಿ ಸಿಲುಕಿ 7 ಜನರು ಸಾವಿಗೀಡಾದರು. ವಿಶಾಖಪಟ್ಟಣಂನಲ್ಲಿ ಅಲೆಗಳ ರುದ್ರ ನರ್ತನ ಕಂಡು ಬಂದಿದ್ದು ಹೀಗೆ.
ಮಳೆಗೆ ಕರುಣೆಯೇ ಇಲ್ಲ
ಶನಿವಾರ ರಾತ್ರಿ 9.10ಕ್ಕೆ ಒರಿಸ್ಸಾದ ಗೋಪಾಲಪುರದ ಸಮೀಪ ಅಪ್ಪಳಿಸಿತು. ನಿರೀಕ್ಷೆಗಿಂತ ಒಂದು ಗಂಟೆ ತಡವಾಗಿ ಕರಾವಳಿಗೆ ಕಾಲಿಟ್ಟ ಫೈಲಿನ್ ಗಂಟೆಗೆ 200 ಕಿ.ಮೀ. ವೇಗದಲ್ಲಿ ಮುನ್ನುಗ್ಗಿತು. ನಂತರ 10ರಿಂದ 20 ಕಿ.ಮೀ. ವೇಗವೃದ್ಧಿಸಿಕೊಂಡಿತು. ಗೋಪಾಲಪುರದ ಕಡಲ ಕಿನಾರೆ ಫೈಲಿನ್ ಅಬ್ಬರದಲ್ಲಿ ಕಂಡಿದ್ದು ಹೀಗೆ.
ಬೇಗ ಹೋಗೋಣಪ್ಪಾ ಮಳೆ ಬರುತ್ತೆ
ಪುರಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬಳು ಮಳೆಯ ನಡುವೆಯೇ ಮನೆಗೆ ತೆರಳುತ್ತಿದ್ದಾಳೆ. ಚಂಡಮಾರುತ ಆಗಮನಕ್ಕೂ ಮೊದಲು ಸುರಿದ ಮಳೆಗೆ ರಸ್ತೆಗಳು ಜಲಾವೃತವಾಗಿದ್ದವು.
ಸರಿ ಮಾಡ್ರಪ್ಪಾ ಬೇಗ
ಒರಿಸ್ಸಾದ ರಾಜಧಾನಿ ಭುವನೇಶ್ವರದಲ್ಲಿ ಫೈಲಿನ್ ಅಬ್ಬರಕ್ಕೆ ಸಿಲುಕು ಧರೆಗೆ ಉರುಳಿದ ವಿದ್ಯುತ್ ಕಂಬವನ್ನು ವಿದ್ಯುತ್ ಇಲಾಖೆ ನೌಕರರು ಮತ್ತು ಜನರು ಸೇರಿ ನಿಲ್ಲಿಸಲು ಹರಸಾಹಸ ಪಡುತ್ತಿದ್ದಾರೆ.
ಬೇಗ ಹೋಗಪ್ಪ
ಒರಿಸ್ಸಾ ರಾಜ್ಯದ ಛಾತ್ರಾಪುರದಲ್ಲಿ ವ್ಯಕ್ತಿಯೊಬ್ಬ ಮಳೆಯ ನಡುವೆಯೇ ಛತ್ರಿ ಹಿಡಿದು ಸಾಗುತ್ತಿದ್ದಾನೆ. ಗಾಳಿ ಬೀಸುತ್ತಿರುವುದನ್ನು ನೋಡಿದರೆ, ಫೈಲಿನ್ ಅಬ್ಬರದ ಪರಿಚಯವಾಗುತ್ತದೆ.
ವಿದ್ಯುತ್ ಕಚೇರಿಯಲ್ಲಿಯೇ ಈ ಸ್ಥಿತಿ
ಓರಿಸ್ಸಾದ ಛಾತ್ರಾಪುರ ಸರ್ಕಿಟ್ ಹೌಸ್ ನಲ್ಲಿ ಭಾರೀ ಮಳೆಯಿಂದಾಗಿ ಆವರದಲ್ಲಿರುವ ಮರಗಳು ಧರೆಗೆ ಉರುಳಿದವು.
ಅಯ್ಯೋ ಏನಾಗುತ್ತೋ?
ಗೋಪಾಲಪುರ ಕಡಲ ಕಿನಾರೆಗೆ ಫೈಲಿನ್ ಆಗಮನವಾಗುವುದಕ್ಕೂ ಮುಂಚೆ ಇಬ್ಬರು ಬಾಲಕಿಯರು ಕುತೂಹಲದಿಂದ ಸಮುದ್ರವನ್ನು ನೋಡುತ್ತಾ, ಮನೆಯ ದಾರಿ ಹಿಡಿದಿದ್ದಾರೆ.
ಸಾಲಾಗಿ ಬನ್ರಪ್ಪೋ
ಪುರಿಯಲ್ಲಿ ಫೈಲಿನ್ ಅಬ್ಬರದಿಂದ ಜನರನ್ನು ರಕ್ಷಿಸಲು ಪ್ರಾರಂಭಿಸಲಾಗಿರುವ ಗಂಜಿ ಕೇಂದ್ರದಲ್ಲಿ ಜನರು ಊಟಕ್ಕಾಗಿ ಸಾಲು ಗಟ್ಟಿ ನಿಂತಿರುವುದು. ಜನರನ್ನು ಸ್ಥಳಾಂತರ ಮಾಡಿದ್ದರಿಂದ ಫೈಲಿನ್ ಭಾರೀ ಅನಾಹುತ ಸೃಷ್ಟಿಸಲು ಸಾಧ್ಯವಾಗಿಲ್ಲ.
ನಮ್ಮ ಮನೆನೂ ಹೋಗುತ್ತಾ?
ವಿಶಾಖಪಟ್ಟಣಂ ಬಂದರಿನಲ್ಲಿ ಜನರು ಸಮುದ್ರದ ಏರಿಳಿತವನ್ನು ನೋಡುತ್ತಿದ್ದಾರೆ. ಫೈಲಿನ್ ಅಬ್ಬರದಿಂದ ಕಡಲ ಕಿನಾರೆಯಲ್ಲಿರುವ ಅವರ ಮನೆಗಳು ಅಪಾಯಕ್ಕೆ ಸಿಲುಕಿವೆ.
ಏ ಹುಷಾರಪ್ಪ!
ವಿಶಾಖಪಟ್ಟಣಂ ಬಂದರಿನಲ್ಲಿ ಫೈಲಿನ್ ಅಬ್ಬರ ಸೃಷ್ಟಿಸಿದ ಚಿತ್ರವಿದು. ಪೊಲೀಸ್ ಅಧಿಕಾರಿಗಳು ನಿಂತ ಸ್ಥಳಕ್ಕೆ ಅಲೆ ಅಪ್ಪಳಿಸಿದಾಗ ಕ್ಯಾಮರಾ ಕಣ್ಣಿಗೆ ಕಂಡಿದ್ದು ಹೀಗೆ.