ಭಾರತ-ಚೀನಾ ಸಂಘರ್ಷದ ಸಂದರ್ಭದಲ್ಲಿ ಕೇಂದ್ರದ ಉನ್ನತ ನಾಯಕತ್ವ ನಾಪತ್ತೆ:ಓವೈಸಿ
ಹೈದರಾಬಾದ್, ಸೆಪ್ಟೆಂಬರ್ 11: ಭಾರತ-ಚೀನಾ ಸಂಘರ್ಷದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಉನ್ನತ ನಾಯಕತ್ವ ನಾಪತ್ತೆಯಾಗಿದೆ ಎಂದು ಎಐಎಂಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಓವೈಸಿ, ನಮ್ಮ ಯೋಧರು ಚೀನಾದ ಪಿಎಲ್ಎ ಯೋಧರನ್ನು ಗಡಿಯಲ್ಲಿ ಧೈರ್ಯದಿಂದ ನಿಯಂತ್ರಿಸಿದ್ದಾರೆ. ಸೇನೆ ಪಾಲಿಗೆ ಇದು ಸುದೀರ್ಘ ಸಮಸ್ಯೆಯೇ ಅಲ್ಲ. ಆದರೆ ದೆಹಲಿಯಲ್ಲಿ ಕುಳಿತಿರುವ ಕೇಂದ್ರ ಸರ್ಕಾರದ ಹಿರಿಯ ನಾಯಕತ್ವ ನಾಪತ್ತೆಯಾಗಿದ್ದು, ಈ ಸಂಬಂಧ ದೃಢನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಎಲ್ಲಿ ಶೂಟ್ ಮಾಡ್ತೀರ ಹೇಳಿ ಅಲ್ಲಿಗೆ ಬರ್ತೀನಿ: ಅಸಾದುದ್ದೀನ್ ಓವೈಸಿ
ಭಾರತೀಯ ಸೇನೆ ಇತ್ತೀಚೆಗೆ ಲಡಾಖ್ ನಲ್ಲಿ ಚೀನಾದ ಪಿಎಲ್ಎ ಯೋಧರು ಎಲ್ಎಸಿ ಅತಿಕ್ರಮಣವನ್ನು ವಿಫಲಗೊಳಿಸಿ, ಪ್ಯಾಂಗಾಂಗ್ ಸರೋವರದ ಪ್ರಮುಖ ಶಿಖರಗಳನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು. ಇದರಿಂದ ಚೀನಾ ತೀವ್ರ ಹಿನ್ನಡೆಯನ್ನುಂಟು ಮಾಡಿತ್ತು.
ಇದೇ ಕಾರಣಕ್ಕೆ ಚೀನಾ ಮತ್ತು ಭಾರತದ ನಡುವೆ ಶೀಥಲ ಸಮರವೇರ್ಪಟ್ಟಿದೆ. ಲಡಾಖ್ ಸಂಘರ್ಷ ನಡೆದು ವಾರಗಳೇ ಕಳೆದರೂ ಈ ವರೆಗೂ ಪ್ರಧಾನಿ ಮೋದಿ ಒಂದೇ ಒಂದು ಪದವನ್ನೂ ಹೇಳಿಲ್ಲ.
ಬಹುಶಃ, ಪ್ರಧಾನಿ ಮೋದಿ ನವಿಲುಗಳಿಗೆ ಆಹಾರ ನೀಡುವುದರಿಂದ ಮುಕ್ತರಾದಾಗ, ಈ ದೇಶದ ಜನರಿಗೆ ಹೇಳಲು ಅವರಿಗೆ ಸಮಯವಿರುತ್ತದೆ. ಚೀನಾ ದೇಶವನ್ನು ಹೆಸರಿನಿಂದ ಉಲ್ಲೇಖಿಸುವ ಧೈರ್ಯ ಬರುತ್ತದೆ ಎಂದು ಹೇಳಿದ್ದಾರೆ.