ತೆಲಂಗಾಣ; ಕಬಡ್ಡಿ ವೀಕ್ಷಕರ ವೇದಿಕೆ ಕುಸಿದು ಸುಮಾರು 100 ನೂರು ಮಂದಿಗೆ ಗಾಯ
ತೆಲಂಗಾಣ, ಮಾರ್ಚ್ 22: ಕಬಡ್ಡಿ ಪಂದ್ಯಾವಳಿ ವೇಳೆ ವೀಕ್ಷಕರ ಗ್ಯಾಲರಿ ವೇದಿಕೆ ಕುಸಿದು ಸುಮಾರು ನೂರು ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದಲ್ಲಿ ಸೋಮವಾರ ನಡೆದಿದೆ.
ತೆಲಂಗಾಣದ ಸೂರ್ಯಪೇಟೆಯಲ್ಲಿ 47ನೇ ಜೂನಿಯರ್ ನ್ಯಾಷನಲ್ ಕಬಡ್ಡಿ ಚಾಂಪಿಯನ್ಷಿಪ್ ಪಂದ್ಯಾವಳಿ ಉದ್ಘಾಟನೆ ನಡೆಯುತ್ತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ. ಸೂರ್ಯಪೇಟೆಯ ಎಸ್ಪಿ ಕಚೇರಿ ಮೈದಾನದಲ್ಲಿ ಪಂದ್ಯಾವಳಿಯ ಉದ್ಘಾಟನೆ ಸಮಾರಂಭ ನಡೆಯುತ್ತಿತ್ತು. ಅದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ವೀಕ್ಷಕರು ಕುಳಿತಿದ್ದ ಗ್ಯಾಲರಿ ವೇದಿಕೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.
ಚಿಕ್ಕಬಳ್ಳಾಪುರದ ಜಿಲೆಟಿನ್ ಸ್ಫೋಟದಲ್ಲಿ ಐವರು ಸಾವು, ಓರ್ವನಿಗೆ ಗಾಯ
ಅಲ್ಲಿ ಕುಳಿತಿದ್ದ ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ವಿಶೇಷ ಚಿಕಿತ್ಸೆಗೆಂದು ಹೈದರಾಬಾದ್ಗೆ ಸ್ಥಳಾಂತರಿಸಲಾಗಿದೆ.
ತೆಲಂಗಾಣ ಕಬಡ್ಡಿ ಅಸೋಸಿಯೇಷನ್ ಈ ಪಂದ್ಯಾವಳಿಯನ್ನು ಆಯೋಜಿಸಿತ್ತು. ಭಾರತದ ವಿವಿಧೆಡೆಗಳಿಂದ ಪಂದ್ಯಾವಳಿಯಲ್ಲಿ ಭಾಗವಹಿಸಲು ಸುಮಾರು 1500 ಆಟಗಾರರು ಬಂದಿದ್ದು, ಮಾರ್ಚ್ 25ರವರೆಗೂ ಪಂದ್ಯ ನಡೆಯಬೇಕಿತ್ತು.
ಮೈದಾನದಲ್ಲಿ ಮೂರು ವೀಕ್ಷಕರ ಗ್ಯಾಲರಿ ವೇದಿಕೆಗಳನ್ನು ಹಾಕಲಾಗಿತ್ತು. ಪ್ರತಿ ವೇದಿಕೆಯೂ 5000 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿತ್ತು ಎನ್ನಲಾಗಿದೆ.