ಎರಡು ಗಂಟೆಯಲ್ಲೇ ತಿಮ್ಮಪ್ಪನ ದರ್ಶನ ಭಾಗ್ಯ?
ತಿರುಮಲ, ಜು.10: ತಿರುಪತಿ ತಿಮ್ಮಪ್ಪ ದೇವರ ದರ್ಶನಕ್ಕಾಗಿ ಗಂಟೆಗಟ್ಟಲೇ, ದಿನಗಟ್ಟಲೇ ಕಾದು ಕಾದು ಸುಸ್ತಾಗುತ್ತಿದ್ದ ಭಕ್ತರಿಗೆ ಸಂತಸದ ಸುದ್ದಿ ಬಂದಿದೆ. ಇನ್ಮುಂದೆ ಕೇವಲ ಎರಡೇ ಗಂಟೆಯಲ್ಲಿ ತಿಮ್ಮಪ್ಪನ ದರ್ಶನ ಮಾಡಬಹುದಂತೆ.
ಇಂಥದ್ದೊಂದು ಕ್ರಾಂತಿಕಾರಿ ಬದಲಾವಣೆಯನ್ನು ತಿರುಮಲ ತಿರುಪತಿ ಟ್ರಸ್ಟ್ ಜಾರಿಗೆ ತರಲಿದೆ ಎಂದು ಆಂಧ್ರಪ್ರದೇಶದ ಸಚಿವ ಪೈಡಿಕೊಂಡಲ ಮಾಣಿಕ್ಯಾಲ ರಾವ್ ಹೇಳಿದ್ದಾರೆ. ದೇವುನಿಕಡಪದಲ್ಲಿ ಪುರಾತನ ದೇಗುಲ ಲಕ್ಷ್ಮಿ ವೆಂಕಟೇಶ್ವರನ ದರ್ಶನ ಪಡೆದ ನಂತರ ಮಾತನಾಡಿದ ಸಚಿವ ಮಾಣಿಕ್ಯಾಲ ರಾವ್ ಅವರು ಈ ಸಂತಸದ ಸುದ್ದಿ ನೀಡಿದ್ದಾರೆ.
ಭಕ್ತಾದಿಗಳು ಗಂಟೆಗಟ್ಟಲೇ ಕ್ಯೂ ನಿಲ್ಲುವುದನ್ನು ತಪ್ಪಿಸಲು ಒಂದು ಸಾಫ್ಟ್ ವೇರ್ ಕಂಡು ಹಿಡಿಯಲಾಗಿದು, ಇದರ ಪ್ರಕಾರ ನಿಗದಿತ ಸಮಯಕ್ಕೆ ಭಕ್ತರು ಸರತಿ ಸಾಲಿನಲ್ಲಿ ಬಂದು ಸೇರಿ ಕೊಂಡರೆ ಸಾಕು. ಈ ಮೂಲಕ ಎರಡು ಗಂಟೆಯೊಳಗೆ ದರ್ಶನ ಪಡೆದುಕೊಳ್ಳಬಹುದಾಗಿದೆ ಎಂದಿದ್ದಾರೆ.
ಈಗಾಗಲೇ ಮೂರು ರೀತಿಯ ಸಾಫ್ಟ್ ವೇರ್ ಗಳನ್ನು ಪ್ರಯೋಗಕ್ಕೆ ಒಳಪಡಿಸಲಾಗಿದ್ದು, ಶೀಘ್ರದಲ್ಲೇ ಸೂಕ್ತವಾದ ತಂತ್ರಾಂಶವನ್ನು ಅಳವಡಿಸಿಕೊಂಡು ಸರತಿ ಸಾಲಿನ ದಟ್ಟಣೆಯನ್ನು ಕರಗಿಸಲಾಗುವುದು ಎಂದರು.
ಇದೇ ವೇಳೆ ರಾಜ್ಯದಲ್ಲಿ ಸುಮಾರು 28 ಸಾವಿರ ಎಕರೆ ದತ್ತಿ ಭೂಮಿ ಒತ್ತುವರಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದ ತಂಡದಿಂದ ತನಿಖೆ ಕೈಗೊಳ್ಳಲಾಗುತ್ತದೆ ಎಂದರು.
ಇತ್ತೀಚೆಗೆ ದರ್ಶನ ವ್ಯವಸ್ಥೆ ಸುಧಾರಣೆ ಮಾಡಲಾಗಿತ್ತು. ವೆಂಡಿ ವಾಕಿಲಿ ಬಳಿ (ಬೆಳ್ಳಿ ಬಾಗಿಲು ಬಳಿ) ಬಂದಾಗ 2 ಸಾಲುಗಳಲ್ಲಿ ಭಕ್ತರನ್ನು ಸರದಿಯಲ್ಲಿ ನಿಲ್ಲಿಸಲಾಗುವುದು. ಅಲ್ಲಿಂದ ಮುಂದಕ್ಕೆ, ಅನತಿ ದೂರದಲ್ಲಿರುವ (ಜಯ-ವಿಜಯ ದ್ವಾರದ ಬಳಿ) ಮಹಾಮೂರ್ತಿಯನ್ನು ನೋಡಲು 2 ಹಂತಗಳಲ್ಲಿ ಭಕ್ತರನ್ನು ಒಳಗೆ ಬಿಡಲಾಗುವುದು. ಇದಕ್ಕಾಗಿ ತುಸು ಎತ್ತರದಲ್ಲಿ, ಮರದಿಂದ ಮಾಡಿದ ವಿಶೇಷ ವೇದಿಕೆ (wooden ramp) ನಿರ್ಮಿಸಲಾಗುವುದು. ಅದರ ಮೇಲೆ ಒಂದು ಸಾಲಿನಲ್ಲಿರುವ ಭಕ್ತರನ್ನು ಬಿಟ್ಟು ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಟಿಟಿಡಿ ಪ್ರಕಟಿಸಿತ್ತು.ಇದಕ್ಕೂ ಮುನ್ನ ಸಂಜೆ ವೇಳೆಯಲ್ಲಿ VVIP ದರ್ಶನವನ್ನು ಸ್ಥಗಿತಗೊಳಿಸುವ ಬಗ್ಗೆ ಟಿಟಿಡಿ ಚಿಂತನೆ ನಡೆಸಿತ್ತು.