ದಲಿತ ವಿದ್ಯಾರ್ಥಿ ಸಾವಿಗೂ ಬಿಜೆಪಿಗೂ ಸಂಬಂಧವಿಲ್ಲ: ಸಚಿವ ಬಂಡಾರು
ಹೈದರಾಬಾದ್, ಜ. 18: ಹೈದರಾಬಾದಿನ ಕೇಂದ್ರ ವಿಶ್ವವಿದ್ಯಾಲಯ ಆವರಣದಲ್ಲಿ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ಸಾವಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಸ್ಪಷ್ಟಪಡಿಸಿದ್ದಾರೆ.
ಆದರೆ, ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ಮತ್ತು ಹೈದರಾಬಾದ್ ವಿಶ್ವವಿದ್ಯಾಲಯದ ಕುಲಪತಿ ಅಪ್ಪಾ ರಾವ್ ಪೋಡಿಲೆ ವಿರುದ್ಧ 'ಆತ್ಮಹತ್ಯೆಗೆ ಪ್ರಚೋದನೆ' ನೀಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.[ನೊಂದ ದಲಿತ ವಿದ್ಯಾರ್ಥಿ ಆತ್ಮಹತ್ಯೆ, ವಿವಿ ಪ್ರಕ್ಷುಬ್ಧ]
ಹೈದರಾಬಾದ್ ವಿಶ್ವವಿದ್ಯಾಲಯದಿಂದ ಉಚ್ಚಾಟಿತರಾಗಿದ್ದ ಐವರು ದಲಿತ ವಿದ್ಯಾರ್ಥಿಗಳ ಪೈಕಿ ರೋಹಿತ್ ವೇಮುಲ ಅವರು ಭಾನುವಾರ ವಿಶ್ವವಿದ್ಯಾಲಯ ಆವರಣದ ವಸತಿಗೃಹದಲ್ಲಿ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಎಬಿವಿಪಿ ಹಾಗೂ ಅಂಬೇಡ್ಕರ್ ವಿದ್ಯಾರ್ಥಿ ಸಂಘಟನೆ ನಡುವಿನ ಕಿತ್ತಾಟದ ಪರಿಣಾಮವಾಗಿ ವಿಶ್ವವಿದ್ಯಾಲಯದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದೆ.
ಬಿಜೆಪಿ ಬೆಂಬಲಿತ ಎಬಿವಿಪಿ ಜೊತೆಗೆ ಕಳೆದ ವರ್ಷ ಘರ್ಷಿಸುವುದಕ್ಕೆ ಮೊದಲು ಅವರು ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಕಾಲ ಅಧ್ಯಯನ ಮಾಡಿದ್ದರು. ವಿದ್ಯಾರ್ಥಿಗಳು ವೆಮುಲ ಸಾವಿನ ಹಿನ್ನೆಲೆಯಲ್ಲಿ ಕ್ರಮಕ್ಕೆ ಆಗ್ರಹಿಸಿ ಹೋರಾಟಕ್ಕೆ ಇಳಿದಿದ್ದರು.
ಸಚಿವ ದತ್ತಾತ್ರೇಯ, ಅಪ್ಪಾರಾವ್ ಹಾಗೂ ಎಬಿವಿಪಿ ನಾಯಕರಾದ ಸುಶೀಲ್ ಕುಮಾರ್, ವಿಷ್ಣು ವಿರುದ್ಧ ಅಂಬೇಡ್ಕರ್ ಸ್ಟೂಡೆಂಟ್ಸ್ ಯೂನಿಯನ್ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.