ತಿರುಪತಿಯಲ್ಲಿ ವಿಐಪಿ ದರ್ಶನ ರದ್ದು, ಕಾರಣವೇನು?
ಹೈದರಾಬಾದ್, ಜುಲೈ 19: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಾಲಿನಲ್ಲಿ ಗಂಟೆಗಟ್ಟಲೆ ಹೈರಾಣಾಗಿರುವ ಭಕ್ತರಿಗೆ ವಿಐಪಿ ಭಕ್ತರ ಕಿರಿಕಿರಿ ಅಂತ್ಯವಾಗುವ ಲಕ್ಷಣಗಳಿವೆ.
ಈಗಿನ ವಿಐಪಿ ಲಿಸ್ಟ್ 1, ಲಿಸ್ಟ್ 2, ಲಿಸ್ಟ್ 3 ವ್ಯವಸ್ಥೆಯನ್ನು ರದ್ದುಗೊಳಿಸಿ ಕೆಲ ವರ್ಷಗಳ ಹಿಂದೆ ಜಾರಿಯಲ್ಲಿದ್ದ ಅರ್ಚನ ಅನಂತರ ದರ್ಶನ ಸೇವೆಯನ್ನು ಮತ್ತೆ ಜಾರಿಗೆ ಸರುವ ಸಾಧ್ಯತೆ ಇದೆ.
ಜುಲೈ 18ರಂದು ಟಿಟಿಡಿ ತನ್ನ ವಿವರಣೆಯನ್ನು ಸಲ್ಲಿಸಿದೆ. ಹೀಗಾಗಿ ಹೈಕೋರ್ಟ್ ಆದೇಶಕ್ಕೂ ಮೊದಲೇ ಕ್ರಮ ಕೈಗೊಳ್ಳಲು ಟಿಟಿಡಿ ವಿಐಪಿ ದರ್ಶನ ರದ್ದುಗೊಳಿಸಲು ನಿರ್ಧರಿಸಿದ್ದು ತಕ್ಷಣದಿಂದಲೇ ಇದನ್ನು ರದ್ದುಪಡಿಸಲು ಸೂಚಿಸಲಾಗಿದೆ.
ತಿರುಪತಿಯಲ್ಲಿ ಸದ್ಯ ವಿಐಪಿ ದರ್ಶನವನ್ನು ಲಿಸ್ಟ್ 1, ಲಿಸ್ಟ್ 2, ಲಿಸ್ಟ್ 3 ಎಂದು ವಿಂಗಡಿಸಲಾಗುತ್ತಿದೆ. ಲಿಸ್ಟ್ 1ರ ಅನ್ವಯ ದರ್ಶನ ಪಡೆದವರಿಗೆ ದೇವರ ಸನ್ನಿಧಿಯಲ್ಲಿ ಆರತಿ ಮತ್ತು ತೀರ್ಥ ಪ್ರಸಾದ ನೀಡಲಾಗುತ್ತದೆ.
ಉಳಿದೆರೆಡು ವಿಭಾಗಗಳಿಗೆ ಈ ಸೇವೆ ಇರುವುದಿಲ್ಲ, ಆದರೆ ತಿರುಪತಿಯಲ್ಲಿ ದಿನವೊಂದಕ್ಕೆ ಸಾವಿರಾರು ಭಕ್ತರು ದೇವರ ದರ್ಶನ ಪಡೆಯಲು ಬರುವುದರಿಂದ ಲಿಸ್ಟ್ 1ನ ಭಕ್ತರಿಗೆ ಆರತಿ, ತೀರ್ಥ ಪ್ರಸಾದ ನೀಡಲು ಹೆಚ್ಚಿನ ಸಮಯ ಬೇಕಾಗುತ್ತದೆ.
ಇವರ ನಂತರ ಉಳಿದೆರೆಡು ಲಿಸ್ಟ್ಗಳ ಭಕ್ತರನ್ನು ಬಿಟ್ಟ ನಂತರ ಸರತಿಯಲ್ಲಿ ಸಾಮಾನ್ಯ ಜನರಿಗೆ ದರ್ಶನವಾಗುತ್ತದೆ.
ವಿಐಪಿ ದರ್ಶನದ ಕಾರಣದಿಂದಲೇ ಜನ ಸಾಮಾನ್ಯರು ತಿಮ್ಮಪ್ಪನ ದರ್ಶನಕ್ಕಾಗಿ ಹಲವು ಗಂಟೆ ಸಾಲಿನಲ್ಲಿ ನಿಲ್ಲಬೇಕಾಗುತ್ತದೆ ಎಂದ ನ್ಯಾಯಾಲಯಕ್ಕೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ.
ಟಿಟಿಡಿ ಅಧ್ಯಕ್ಷ ವೈ.ವಿ ಸುಬ್ಬಾರೆಡ್ಡಿ ವಿಐಪಿ ದರ್ಶನ ಸೇವೆ ರದ್ದುಗೊಳಿಸುವ ಬಗ್ಗೆ ಘೋಷಣೆ ಮಾಡಿದ್ದು, ಇದರ ಬದಲಾಗಿ ಅರ್ಚನೆ ನಂತರ ದರ್ಶನ ಸೇವೆಯನ್ನು ಆರಂಭಿಸುವುದಾಗಿ ತಿಳಿಸಿದ್ದಾರೆ.