ಆಂಧ್ರ- ಒಡಿಶಾ ಗಡಿ ಭಾಗದಲ್ಲಿ 681 ಕೆ.ಜಿ. ವಶಪಡಿಸಿಕೊಂಡ NCB
ಹೈದರಾಬಾದ್, ಮಾರ್ಚ್ 01 : ಎನ್ ಸಿಬಿ ಹೈದರಾಬಾದ್ ವಲಯದ ಅಧಿಕಾರಿಗಳು ಗಾಂಜಾ ವಿರುದ್ಧ ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಆಂಧ್ರ ಮತ್ತು ಒಡಿಶಾ ಗಡಿಯಲ್ಲಿ 3 ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ ಕೋಟ್ಯಂತರ ಮೌಲ್ಯದ 681 ಕೆ.ಜಿ. ತೂಕದ ಗಾಂಜಾ ವಶಪಪಡಿಸಿಕೊಂಡಿದ್ದಾರೆ.
ಆಂಧ್ರ -ಮತ್ತು ಒಡಿಶಾ ಗಡಿ ಭಾಗದಲ್ಲಿ ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಎನ್ಸಿಬಿ ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು. ಇದರ ಮಾಹಿತಿ ಆಧರಿಸಿ ತೆಲಂಗಣಾದ ರಂಗಾರೆಡ್ಡಿ ಜಿಲ್ಲೆ ಸಮೀಪದ ಟೋಲ್ ಬಳಿ ಮೂರು ವಾಹನದಲ್ಲಿ ಗಾಂಜಾ ಸಾಗಣೆ ಮಾಡುತ್ತಿರುವ ಮಾಹಿತಿ ಆಧರಿಸಿ ಹೈದರಾಬಾದ್ ವಲಯದ ಎನ್ ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಈ ವೇಳೆ ಎಂಟು ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ, ಮೂರು ವಾಹನದಲ್ಲಿ ಗಾಂಜಾ ಸಾಗಿಸುತ್ತಿರುವುದು ಪತ್ತೆಯಾಗಿದೆ. ಹೋಂಡಾ ಸಿಟಿ, ಸ್ವಿಫ್ಟ್ ಹಾಗೂ ಬೊಲೆರೋ ವಾಹನದಲ್ಲಿ ಯಾರಿಗೂ ಅನುಮಾನ ಬಾರದಂತೆ ಗಾಂಜಾ ಪಾಕೆಟ್ ಗಳನ್ನು ಬಚ್ಚಿಟ್ಟು ಸಾಗಣೆ ಮಾಡುತ್ತಿದ್ದರು. ಕಾರಿನ ಡಿಕ್ಕಿಯಲ್ಲಿ ಒಂದು ಭಾಗ ಗಾಂಜಾ ಬಚ್ಚಿಟ್ಟಿದ್ದರು. ಬಲೆರೋ ವಾಹನದಲ್ಲಿ ಗಾಂಜಾ ಪಾಕೆಟ್ ಇಟ್ಟು ಅದರ ಮೇಲೆ ಹಳೇ ಕುರ್ಚಿಗಳನ್ನು ಹಾಕಿದ್ದರು. ಎಂಟು ಆರೋಪಿಗಳನ್ನು ಬಂಧಿಸಿ, 681 ಕೆ.ಜಿ. ಗಾಂಜಾ ವಶಪಡಿಸಿಕೊಂಡಿದ್ದಾರೆ.
ಎಸ್. ಪವಾರ್, ವಿ. ಪವಾರ್, ಬಿ. ವರೇ, ಎಂ. ದೋತ್ರೆ, ದೇಶಮುಖ್, ಆರ್. ಗುಂಜಾಲ್, ಗಾಂಧಿ, ಸನಾಪ್ ಬಂಧಿತ ಆರೋಪಿಗಳು. ಇವರು ವಿಶಾಖಪಟ್ಟಣಂನಲ್ಲಿ ಗಾಂಜಾ ಪೂರೈಕೆದಾರರ ಮತ್ತು ಖರೀದಿದಾರರ ಸಂಪರ್ಕ ಜಾಲ ಹೊಂದಿದ್ದು, ಆಂಧ್ರ ಪ್ರದೇಶದಿಂದ ಮಹಾರಾಷ್ಟ್ರ ಮತ್ತಿತರ ರಾಜ್ಯಗಳಿಗೆ ಸಾಗಿಸಿ ದುಬಾರಿ ಬೆಲೆಗೆ ಮಾರಾಟ ಮಾಡಲು ಯೋಜನೆ ರೂಪಿಸಿದ್ದರು. ಅದರಂತೆ ಸಾಗಣೆ ಮಾಡುವಾಗ ಎನ್ ಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.