ನಂದಮೂರಿ ಹರಿಕೃಷ್ಣ ದುರ್ಮರಣಕ್ಕೆ ಕಂಬನಿ ಮಿಡಿದ ಗಣ್ಯರು
Recommended Video
ಹೈದರಾಬಾದ್, ಆಗಸ್ಟ್ 29: ಭೀಕರ ಅಪಘಾತದಲ್ಲಿ ಮೃತರಾದ ನಂದಮೂರಿ ಹರಿಕೃಷ್ಣ ಅವರ ಅಗಲಿಕೆಗೆ ದೇಶದಾದ್ಯಂತ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
ತೆಲಗು ಚಿತ್ರರಂಗದ ಖ್ಯಾತ ನಟ ಎನ್ ಟಿ ರಾಮರಾವ್ ಅವರ ಪುತ್ರರಾದ ನಂದಮೂರಿ ಹರಿಕೃಷ್ಣ ಅವರಿಗೆ 61 ವರ್ಷ ವಯಸ್ಸಾಗಿತ್ತು. ಇಂದು ಬೆಳಿಗ್ಗೆ ತಮ್ಮ ಟೊಯೋಟಾ ಫಾರ್ಚ್ಯುನರ್ ಕಾರಿನಲ್ಲಿ ವೇಗವಾಗಿ ಬರುತ್ತಿದ್ದ ಹರಿಕೃಷ್ಣ ಅವರು ತೆಲಂಗಾಣದ ನಲ್ಗೊಂಡ ಬಳಿಯ ಅನ್ನೆಪರ್ತಿ ಎಂಬಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತರಾದರು. ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ತಲೆಗೆ ತೀವ್ರವಾಗಿ ಏಟು ಬಿದ್ದಿದ್ದರಿಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು.
ರಸ್ತೆ ಅಪಘಾತ: ಎನ್ಟಿಆರ್ ಮಗ ನಂದಮೂರಿ ಹರಿಕೃಷ್ಣ ಸಾವು
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಸಂಬಂಧಿಯೂ ಆಗಿರುವ ಹರಿಕೃಷ್ಣ ರಾಜ್ಯಸಭೆಯ ಮಾಜಿ ಸದಸ್ಯರೂ ಆಗಿದ್ದರು. ನಟರಾಗಿ ರಾಜಕಾರಣಿಯಾಗಿ ಸಾವಿರಾರು ಅಭಿಮಾನಿಗಳನ್ನು ಪಡೆದಿದ್ದ ಹರಿಕೃಷ್ಣ ಅವರ ಅಕಾಲಿಕ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.
|
ಕಂಬನಿ ಮಿಡಿದ ವೆಂಕಯ್ಯ ನಾಯ್ಡು
'ಒಬ್ಬ ಜನಪ್ರಿಯ ನಟರಾಗಿ ಅವರು ತೆಲುಗು ಪ್ರೇಕ್ಷಕರನ್ನು ರಂಜಿಸಿದ್ದರು. ಒಬ್ಬ ಸಂಸದೀಯ ಪಟುವಾಗಿ ಅವರು ತಮ್ಮ ಅಭಿಪ್ರಾಯಗಳನ್ನು ಪ್ರಾಮಾಣಿಕವಾಗಿ ಹೇಳುತ್ತಿದ್ದರು. ಅವರ ಕುಟುಂಬ, ಅಭಿಮಾನಿಗಳಿಗೆ, ಬಂಧುಗಳಿಗೆ ನನ್ನ ಸಂತಾಪಗಳು' ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಟ್ವೀಟ್ ಮಾಡಿದ್ದಾರೆ.
|
ಅವರೊಬ್ಬ ಮಹಾನ್ ನಟ
'ಅವರೊಬ್ಬ ಮಹಾನ್ ನಟ, ಅತ್ಯುತ್ತಮ ಮಾತುಗಾರ ಮತ್ತು ಮಾಜಿ ಸಂಸದ. ಅಪಘಾತದಲ್ಲಿ ಅವರು ದುರ್ಮರಣಕ್ಕೀಡಾದ ಸುದ್ದಿ ಕೇಳಿ ಆಘಾತವಾಯಿತು. ಅವರ ಕುಟುಂಬಕ್ಕೆ, ಸ್ನೇಹಿತರಿಗೆ, ಅಭಿಮಾನಿಗಳಿಗೆ ನನ್ನ ಸಂತಾಪಗಳು' ಎಂದಿದ್ದಾರೆ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಉತ್ತಮ್ ಕುಮಾರ್ ರೆಡ್ಡಿ.
|
ಅವರ ಆತ್ಮಕ್ಕೆ ಶಾಂತಿ ಸಿಗಲಿ
ಅವರಂಥ ಗಟ್ಟಿ ವ್ಯಕ್ತಿತ್ವದ ವ್ಯಕ್ತಿಯನ್ನು ಈ ಸಮಯದಲ್ಲಿ ಬಹಳ ವಿಷಾದದಿಂದ ನೆನಪಿಸಿಕೊಳ್ಳುತ್ತಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ. ಅವರೊಂದಿಗೆ ಹಲವು ಚಿತ್ರಗಳ್ಲಲಿ ಆತ್ಮೀಯವಾಗಿ ಕೆಲಸ ಮಾಡಿದ್ದೇನೆ. ಅವರದ್ದು ನಿರ್ಭೀತ ಆತ್ಮ ಎಂದಿದ್ದಾರೆ ಫಿಲ್ಮ್ ಮೇಕರ್ ಬಿವಿಎಸ್ ರವಿ.
|
ಒಬ್ಬ ಅತ್ಯುತ್ತಮ ಮನುಷ್ಯನನ್ನು ಕಳೆದುಕೊಂಡಿದ್ದೇವೆ
ನಂದಮೂರಿ ಹರಿಕೃಷ್ಣ ಅವರ ದುರ್ಮರಣದ ಸುದ್ದಿ ಕೇಳಿ ಆಘಾತವಾಯಿತು. ಅವರ ಕುಟುಂಬಕ್ಕೆ ನಮ್ಮ ತೀವ್ರ ಸಂತಾಪಗಳು. ನಾವು ಒಬ್ಬ ಮಹಾನ್ ವ್ಯಕ್ತಿತ್ವದ ಮನುಷ್ಯನನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿಸಿಗಲಿ ಎಂದಿದ್ದಾರೆ ಶ್ರೀಕಾಂತ್ ಮೆಕಾ.
|
ಎಂಥ ದುರಂತ ನೋಡಿ
ಜಾನಕಿ ರಾಮ್ ಅವರು ಅಪಘಾತದಲ್ಲಿ ಮೃತರಾದ ಮೇಲೆ ಜ್ಯೂನಿಯರ್ ಎನ್ ಟಿಆರ್ ಅವರು ತಮ್ಮ ಚಿತ್ರಗಳಲ್ಲಿ ಎಂದಿಗೂ ಸುರಕ್ಷಿತವಾಗಿ ವಾಹನ ಚಾಲನೆ ಮಾಡುವ ಬಗ್ಗೆ ಸಂದೇಶ ನೀಡುತ್ತಿದ್ದರು. ಆದರೆ ಎಂಥ ದುರಂತ ನೋಡಿ, ಅವರ ತಂದೆಯೂ ಈಗ ಅಪಘಾತದಲ್ಲಿ ಮೃತರಾದರು ಎಂದಿದ್ದಾರೆ ನವ ಮೋಹನ್ ರಾವ್.