ಹೈದರಾಬಾದ್ಗೆ ಇಂದು ನಡ್ಡಾ ಭೇಟಿ: ನಾಳೆಯಿಂದ ಬಿಜೆಪಿ ಬೃಹತ್ ರೋಡ್ ಶೋ ಯೋಜನೆ
ಹೈದರಾಬಾದ್ ಜುಲೈ 1: 2023ರ ವಿಧಾನಸಭೆ ಚುನಾವಣೆಯ ಭಾಗವಾಗಿ ತೆಲಂಗಾಣದಲ್ಲಿ ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಈ ವಾರಾಂತ್ಯದಲ್ಲಿ ಹೈದರಾಬಾದ್ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸುತ್ತಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಶುಕ್ರವಾರ ತೆಲಂಗಾಣ ರಾಜಧಾನಿಗೆ ಆಗಮಿಸುವ ನಿರೀಕ್ಷೆಯಿದೆ. ಹೈದರಾಬಾದ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಸೆಂಟರ್ನಲ್ಲಿ ಜುಲೈ 2-3 ರಂದು ನಡೆಯಲಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಪ್ರತಿನಿಧಿಗಳು ಹೈದರಾಬಾದ್ಗೆ ಆಗಮಿಸಲು ಪ್ರಾರಂಭಿಸಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ, ನಡ್ಡಾ ಅವರನ್ನು ಸ್ವಾಗತಿಸಲು ರಾಜ್ಯ ಘಟಕವು ಮೆಗಾ ರೋಡ್ಶೋ ಅನ್ನು ಯೋಜಿಸಿದೆ ಮತ್ತು ಶಂಶಾಬಾದ್ನಲ್ಲಿರುವ ಹೈದರಾಬಾದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸುಮಾರು ಒಂದು ಕಿಲೋಮೀಟರ್ ವರೆಗೆ ರೋಡ್ಶೋಗೆ ಸಿದ್ಧತೆ ನಡೆಸುತ್ತಿದೆ.
ಇಡೀ ಹೈದರಾಬಾದ್ ನಗರವು ಪಕ್ಷದ ಧ್ವಜಗಳು ಮತ್ತು ಬ್ಯಾನರ್ಗಳೊಂದಿಗೆ ಕೇಸರಿ ಬಣ್ಣದಿಂದ ಕಂಗೊಳಿಸುತ್ತಿದ್ದು ಪೋಸ್ಟರ್ಗಳು ಕೇಂದ್ರ ಸರ್ಕಾರದ ಸಾಧನೆಯನ್ನು ಬಿಂಬಿಸುತ್ತಿವೆ. ನಗರದ ಮೂಲೆ ಮೂಲೆಗಳಲ್ಲಿ ಬಿಜೆಪಿಯ ಪ್ರಮುಖರ ದೊಡ್ಡ ಕಟೌಟ್ಗಳು ಮತ್ತು ಬ್ಯಾನರ್ಗಳು ರಾರಾಜಿಸುತ್ತಿವೆ.
ಪ್ರಧಾನಿ ನರೇಂದ್ರ ಮೋದಿ ಅವರಿಂದ ಭಾಷಣ
ಜುಲೈ 2 ರಂದು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಷ್ಟ್ರೀಯ ಪದಾಧಿಕಾರಿಗಳ ಸಭೆಗಳು ಮತ್ತು ನಂತರ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಜುಲೈ 3 ರಂದು ಪರೇಡ್ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದೊಂದಿಗೆ ಸಾರ್ವಜನಿಕ ಸಭೆ ನಡೆಯಲಿದೆ.
19 ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುವ ಬೃಹತ್ ಸಭೆ
ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ ಲಕ್ಷ್ಮಣ್ ಮಾತನಾಡಿ, "ಜುಲೈ 2 ಮತ್ತು 3 ರಂದು ನಮ್ಮ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯಲಿದೆ. ಈ ಐತಿಹಾಸಿಕ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, 19 ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಇತರ ಬಿಜೆಪಿ ಹಿರಿಯ ನಾಯಕರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಸಂಪರ್ಕ ಅಭಿಯಾನಕ್ಕಾಗಿ ತೆಲಂಗಾಣದಾದ್ಯಂತ ಎಲ್ಲಾ 119 ಕ್ಷೇತ್ರಗಳನ್ನು ತಲುಪುವಂತೆ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಿಗೆ ತಿಳಿಸಿಲಾಗಿದೆ," ಎಂದು ಹೇಳಿದರು.
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಯ ಭರವಸೆ
2023 ರ ವಿಧಾನಸಭೆ ಚುನಾವಣೆಯ ಭಾಗವಾಗಿ ತೆಲಂಗಾಣದಲ್ಲಿ ಬಿಜೆಪಿ ಸಿದ್ಧತೆ ನಡೆಸಿದೆ. ವಿಧಾನಸಭೆ ಚುನಾವಣೆಗೆ ಬಿಜೆಪಿ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಸರ್ಕಾರವನ್ನು ಉರುಳಿಸುವ ದೊಡ್ಡ ನಿರೀಕ್ಷೆಯೊಂದಿಗೆ ಈಗಿನಿಂದಲೇ ಸಿದ್ಧತೆ ನಡೆಸಿದೆ. ಈ ಹಿಂದೆ 2004ರಲ್ಲಿ ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಸಿದಾಗ ಪಕ್ಷ ಅಧಿಕಾರಕ್ಕೆ ಬಂದರೆ ತಡ ಮಾಡದೆ ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆ ಮಾಡುವುದಾಗಿ ಭರವಸೆ ನೀಡಿತ್ತು.
ಪೊಲೀಸ್ ಬಿಗಿ ಭದ್ರತೆ
ಇತ್ತೀಚಿನ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಯಶಸ್ಸು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಇತ್ತೀಚಿನ ಕಾರ್ಪೊರೇಟರ್ಗಳ ಸಂವಾದವು ದೇಶದ ದಕ್ಷಿಣ ಭಾಗದಲ್ಲಿ ಕಾಲಿಡಲು ಬಯಸುತ್ತಿರುವ ಕೇಸರಿ ಪಕ್ಷಕ್ಕೆ ದೊಡ್ಡ ತಿರುವು ಎಂದು ಹೇಳಲಾಗಿದೆ. ಪ್ರಧಾನಿ ಮೋದಿಯವರ ಹೈದರಾಬಾದ್ ಭೇಟಿಗೆ ಮುನ್ನ ಹೈದರಾಬಾದ್ ನಗರ ಪೊಲೀಸರು ಮತ್ತು ರಾಜ್ಯ ಸರ್ಕಾರದ ಇಲಾಖೆಗಳು ವಿಸ್ತಾರವಾದ ಭದ್ರತೆಯನ್ನು ಏರ್ಪಡಿಸಿವೆ.