ಮುಸ್ಲಿಮರು ಮುಸ್ಲಿಮರಿಗೇ ಮತ ಹಾಕಿ: ಓವೈಸಿ ವಿವಾದಾತ್ಮಕ ಹೇಳಿಕೆ
ಹೈದರಾಬಾದ್, ಜೂನ್ 25: "ಮುಸ್ಲಿಮರು ಮುಸ್ಲಿಮರಿಗೆ ಮಾತ್ರ ಮತ ಹಾಕಿ. ನಮ್ಮನ್ನು 70 ವರ್ಷಗಳಿಂದ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ನಮ್ಮ ಬಾಯಿಮುಚ್ಚಿಸಲಾಗುತ್ತಿದೆ" ಎನ್ನುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ ಅಸಾದುದ್ದಿನ್ ಓವೈಸಿ.
ಗೋ ರಕ್ಷಣೆ ಹೆಸರಿನಲ್ಲಿ ಕ್ವಾಸಿಮ್(30) ಎಂಬಾತನನ್ನು ಹತ್ಯೆ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಐಎಂಐಎಂ(All India Majlis-e-Ittehadul Muslimeen) ಮುಖಂಡ ಓವೈಸಿ ಈ ರೀತಿ ಹೇಳಿಕೆ ನೀಡಿದ್ದಾರೆ.
ದೇಶದ ವಿಷಯ ಬಂದಾಗ ನಾವು ಕೇಂದ್ರ ಸರ್ಕಾರದ ಪರ: ಓವೈಸಿ
'ಕ್ವಾಸಿಮ್ ನ ಹತ್ಯೆ ನಾವೆಲ್ಲರೂ ಮತ್ತೊಮ್ಮೆ ಚಿಂತಿಸುವಂತೆ ಮಾಡಿದೆ. ಆದರೆ ದಯವಿಟ್ಟು ಕಣ್ಣೀರು ಹಾಕಬೇಡಿ. ನಿಮ್ಮೊಳಗಿನ ಪ್ರಜ್ಞೆಯನ್ನು ಹೊರಗೆ ತನ್ನಿ. ಜಾತ್ಯತೀತತೆಯ ಬಗ್ಗೆ ಮಾತನಾಡುವವರೇ ನಿಜವಾದ ಡಕಾಯಿತರು. ಅವರೇ ಅವಕಾಶವಾದಿಗಳು. ಅವರು ಕಳೆದ ಎಪ್ಪತ್ತು ವರ್ಷಗಳಿಂದ ಮುಸ್ಲಿಮರನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮನ್ನು ಸುಮ್ಮನಾಗಿಸುತ್ತಿದ್ದಾರೆ' ಎಂದು ಅವರು ಹರಿಹಾಯ್ದರು.
'ಈಗ ನಿಮಗೋಸ್ಕರ ನೀವೇ ಹೋರಾಡಬೇಕು. ನಿಮಗೆ ಜಾತ್ಯತೀತತೆ ಜೀವಂತವಾಗಿರಬೇಕು ಎಂಬ ಆಸೆಯಿದ್ದರೆ ನಿಮಗಾಗಿ ನೀವೇ ಹೋರಾಡಿ. ಮುಸ್ಲಿಮರಿಗೇ ಮತ ಹಾಕಿ. ಮುಸ್ಲಿಂ ಅಭ್ಯರ್ಥಿಯೇ ಗೆಲ್ಲುವಂತೆ ಮಾಡಿ" ಎಂದು ಓವೈಸಿ ಗುಡುಗಿದ್ದಾರೆ.
"ಗೋ ರಕ್ಷಣೆಯ ಹೆಸರಿನಲ್ಲಿ ಹಿಂಸೆ ಮಾಡಲಾಗುತ್ತಿದ್ದರೂ ಮೋದಿಯವರ ಆಳ್ವಿಕೆಯಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ? ಮೋದಿಯವರೇ, ನಿಮ್ಮ ಆಳ್ಳಿಕೆಯಲ್ಲಿ ಇಂಥವೆಲ್ಲ ನಡೆಯುತ್ತಿವೆ. ನಿಮ್ಮ ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಅಂದ್ರೆ ಇದೇನಾ?" ಎಂದು ಓವೈಸಿ ಪ್ರಶ್ನಿಸಿದ್ದಾರೆ.