ಸೂಪರ್ ಸ್ಟಾರ್ ರಜನಿಕಾಂತ್ ಆರೋಗ್ಯ ವರದಿಯಲ್ಲಿ ಏನಿದೆ?
ಹೈದರಾಬಾದ್, ಡಿ. 27: ಸೂಪರ್ ಸ್ಟಾರ್ ರಜನಿಕಾಂತ್ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಗಾಬರಿಗೊಂಡಿದ್ದ ಅಭಿಮಾನಿಗಳಿಗೆ ಅಪೊಲೊ ಆಸ್ಪತ್ರೆಯಿಂದ ಶುಭ ಸುದ್ದಿ ಬಂದಿದೆ. ರಜನಿಕಾಂತ್ ಅವರಿಗೆ ಉಂಟಾಗಿದ್ದ ಅಧಿಕ ರಕ್ತದೊತ್ತಡ ಪರಿಸ್ಥಿತಿ ಈಗ ತಿಳಿಗೊಂಡಿದೆ. ಅಭಿಮಾನಿಗಳು, ಕುಟುಂಬಸ್ಥರು ಆತಂಕ ಪಡಬೇಕಾಗಿಲ್ಲ ಎಂದು ಅಪೋಲೋ ಆಸ್ಪತ್ರೆಯ ಭಾನುವಾರದ ಹೆಲ್ತ್ ಬುಲೇಟಿನ್ ನಿಂದ ತಿಳಿದು ಬಂದಿದೆ.
ನಟ ರಜನಿಕಾಂತ್ ಅವರಿಗೆ ರಕ್ತದೊತ್ತಡದಲ್ಲಿ ಏರಿಳಿತವಾದ ಕಾರಣ ಶುಕ್ರವಾರದಂದು ಹೈದರಾಬಾದ್ನ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಅವರ ಆರೋಗ್ಯದಲ್ಲಿ ಉತ್ತಮ ಸುಧಾರಣೆಯಾಗುತ್ತಿದೆ, ವೈದ್ಯೋಪಚಾರಕ್ಕೆ ಸ್ಪಂದಿಸುತ್ತಿದ್ದಾರೆ. ಆರೋಗ್ಯ ಸ್ಥಿತಿಯನ್ನು ವಿವರಿಸಿ ಆಸ್ಪತ್ರೆಯು ಭಾನುವಾರ ಬೆಳಗ್ಗೆ ಹೇಳಿಕೆ ಬಿಡುಗಡೆ ಮಾಡಿದೆ.
ಶನಿವಾರ ರಾತ್ರಿ ಅವರ ಆರೋಗ್ಯದಲ್ಲಿ ಅಷ್ಟೇನೂ ತೊಂದರೆಗಳಾಗಿಲ್ಲ. ಅವರ ರಕ್ತದೊತ್ತಡ ಸಮಸ್ಥಿತಿಗೆ ಮರಳುತ್ತಿದೆ. ನಿನ್ನೆಗಿಂತಲೂ ಉತ್ತಮ ನಿಯಂತ್ರಣದ ಸ್ಥಿತಿಯಲ್ಲಿದೆ. ಅವರ ಆರೋಗ್ಯದ ಮೇಲೆ ಇಂದು ಮಧ್ಯಾಹ್ನ ವೈದ್ಯರು ಮತ್ತಷ್ಟು ತಪಾಸಣೆ ನಡೆಸುತ್ತಾರೆ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡುವ ಬಗ್ಗೆ ಪ್ರಕಟಿಸಲಾಗುತ್ತದೆ ಎಂದು ಅಧಿಕೃತ ಮಾಹಿತಿ ನೀಡಲಾಗಿದೆ.
ರಕ್ತದೊತ್ತಡದಲ್ಲಿನ ಬದಲಾವಣೆಗಳ ಹಿನ್ನೆಲೆಯಲ್ಲಿ ಸಂಪೂರ್ಣ ವಿಶ್ರಾಂತಿಗೆ ಸಲಹೆ ನೀಡಲಾಗಿದೆ. ಹೀಗಾಗಿ ಅವರ ಭೇಟಿಗೆ ಯಾರಿಗೂ ಅವಕಾಶ ನೀಡುತ್ತಿಲ್ಲ. ಕೊವಿಡ್ 19 ಪರೀಕ್ಷೆಗಳನ್ನು ನಡೆಸಲಾಗಿದ್ದು, ನೆಗಟಿವ್ ಬಂದಿದೆ ಹೀಗಾಗಿ, ಬೇರೆ ಯಾವುದೇ ಸಮಸ್ಯೆಗಳಿಲ್ಲ ಎಂದು ವೈದ್ಯಾಧಿಕಾರಿಗಳು ಹೇಳಿದರು.
'ಅಣ್ಣಾತೆ' ಚಿತ್ರದ ಚಿತ್ರೀಕರಣಕ್ಕಾಗಿ ಹೈದರಾಬಾದ್ನಲ್ಲಿರುವ ರಜನಿಕಾಂತ್ ಅವರಲ್ಲಿ ರಕ್ತದೊತ್ತಡದ ಏರಿಳಿತ ಮತ್ತು ಬಳಲಿಕೆ ಕಂಡುಬಂದ ಹಿನ್ನೆಲೆಯಲ್ಲಿ ಶುಕ್ರವಾರದಂದು ಜ್ಯುಬಿಲಿಹಿಲ್ಸ್ ನಲ್ಲಿರಿವ ಅಪೊಲೊ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.