ಮಾರುತಿರಾವ್ ಆತ್ಮಹತ್ಯೆ; ಇನ್ನೂ ಉತ್ತರ ಸಿಗದ ಪ್ರಶ್ನೆಗಳು
ಹೈದರಾಬಾದ್, ಮಾರ್ಚ್ 13 : ಪ್ರಣಯ್ ಪೆರುಮಲ್ಲಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿರಾವ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರಿಗೆ ಇನ್ನು ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ.
ಪ್ರಣಯ್ ಪೆರುಮಲ್ಲಾ ಮರ್ಯಾದಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಾರುತಿರಾವ್ ಶವ ಮಾರ್ಚ್ 8ರಂದು ಪತ್ತೆಯಾಗಿತ್ತು. ಹೈದರಾಬಾದ್ನ ಖೈರತಾಬಾದ್ ಆರ್ಯವೈಶ್ಯ ಭವನದ 306ನೇ ರೂಂನಲ್ಲಿ ಶವ ಸಿಕ್ಕರೂ ವಿಷದ ಬಾಟಲ್ ಸಿಕ್ಕಿಲ್ಲ.
ಮಾರುತಿರಾವ್ ಆತ್ಮಹತ್ಯೆ; 200 ಕೋಟಿ ಆಸ್ತಿ ವಿವಾದ ಕಾರಣ?
ಮಾರುತಿರಾವ್ ಆತ್ಮಹತ್ಯೆಗೂ ಒಂದು ವಾರ ಮೊದಲು ಅವರ ಫಾರ್ಮ್ ಹೌಸ್ನಲ್ಲಿ ಸುಮಾರು 35 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಈ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಆ ವ್ಯಕ್ತಿ ಯಾರು? ಎಂಬ ಗುರುತು ಸಿಕ್ಕಿರಲಿಲ್ಲ.
ತಪ್ಪಿನ ಅರಿವಾಗಿ ಅಮೃತಾ ಕ್ಷಮೆ ಕೇಳಲು ಬಯಸಿದ್ದ ಮಾರುತಿರಾವ್
ಸಹೋದರನ ಜೊತೆ ಮಾರುತಿರಾವ್ ಆಸ್ತಿ ವಿಚಾರದಲ್ಲಿ ವಿವಾದ ಮಾಡಿಕೊಂಡಿದ್ದರು ಎಂಬ ವಿಚಾರದ ಕುರಿತು ಪೊಲೀಸರು ತನಿಖೆ ನಡೆಸಬೇಕಿದೆ. ಚಿಕ್ಕಪ್ಪ ತಂದೆಯ ಮೇಲೆ ಹಲ್ಲೆ ಮಾಡಿದ್ದರು ಎಂದು ಅಮೃತಾ ಹೇಳಿಕೆ ನೀಡಿದ್ದು, ಪೊಲೀಸರು ತನಿಖೆಯ ಆಯಾಮವನ್ನೇ ಬದಲಿಸಿದೆ.
ಮಾರುತಿರಾವ್ ಡೆತ್ ನೋಟ್; ಅಮೃತಾಗೆ ಭಾವನಾತ್ಮಕ ಸಂದೇಶ
ಎಫ್ಎಸ್ಎಲ್ ವರದಿಗೆ ಕಾಯುತ್ತಿದ್ದಾರೆ
ಮಾರುತಿರಾವ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಶವ ಸಿಕ್ಕಿದ ಹೈದರಾಬಾದ್ನ ಖೈರತಾಬಾದ್ ಆರ್ಯವೈಶ್ಯ ಭವನದ 306ನೇ ರೂಂನಲ್ಲಿ ವಿಷದ ಬಾಟಲ್ ಸಿಕ್ಕಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಭಂದಿ ಸಾವಿಗೆ ವಿಷದ ಅಂಶ ಕಾರಣ ಎಂದು ಹೇಳಿದ್ದಾರೆ. ಕೊಠಡಿಯಲ್ಲಿ ಸಿಕ್ಕ ಡೆತ್ ನೋಟ್ ಸಹ ಎಫ್ಎಸ್ಎಲ್ಗೆ ಕಳಿಸಲಾಗಿದ್ದು, ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ದೂರು ವಾಪಸ್ ಪಡೆಯಲು ಮನವಿ
ಪ್ರಣಯ್ ಪೆರುಮಲ್ಲಾ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಮಾರುತಿರಾವ್ ಏಪ್ರಿಲ್ 2019ರಲ್ಲಿ ಜಾಮೀನು ಪಡೆದು ಹೊರ ಬಂದಿದ್ದರು. ಬಳಿಕ ಅವರು ಅಮೃತಾ ದೂರು ವಾಪಸ್ ಪಡೆಯುವಂತೆ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ, ಪ್ರಣಯ್ ಸಾವಿಗೆ ನ್ಯಾಯಬೇಕು ಎಂದು ಪಟ್ಟು ಹಿಡಿದಿದ್ದ ಅಮೃತಾ ದೂರು ವಾಪಸ್ ಪಡೆಯಲು ಒಪ್ಪಿರಲಿಲ್ಲ. ಶಿಕ್ಷೆಯಾಗುವ ಭಯದಲ್ಲಿ ಆತ್ಮಹತ್ಯೆಗೆ ಶರಣಾದರೆ? ಎಂದು ತನಿಖೆ ನಡೆಸಲಾಗುತ್ತಿದೆ.
ಆಸ್ತಿ ವಿವಾದ ಕಾರಣ?
ಮಾರುತಿರಾವ್ ಆಂಧ್ರಪ್ರದೇಶದ ನಲ್ಗೋಂಡ ಜಿಲ್ಲೆಯ ವಿರ್ಯಾಲಗೂಡು ನಿವಾಸಿ. ಹೈದರಾಬಾದ್ ಮತ್ತು ವಿರ್ಯಾಲಗೂಡು ಸೇರಿ ಅವರು ಸುಮಾರು 200 ಕೋಟಿ ಆಸ್ತಿಯನ್ನು ಹೊಂದಿದ್ದರು. ಅವರ ಸಹೋದರ ಸರವಣ ಆಸ್ತಿಯನ್ನು ತಮ್ಮ ಪುತ್ರನ ಹೆಸರಿಗೆ ಬರೆದುಕೊಡಬೇಕು ಎಂದು ಪಟ್ಟು ಹಿಡಿದಿದ್ದರು. ಪ್ರಣಯ್ ಪೆರುಮಲ್ಲಾ ಪ್ರಕರಣದಲ್ಲಿ ಸರವಣ ಸಹ ಆರೋಪಿಯಾಗಿದ್ದಾರೆ. ಅಮೃತಾ ಚಿಕ್ಕಪ್ಪ ಆಸ್ತಿಗಾಗಿ ಪೀಡಿಸುತ್ತಿದ್ದರು. ಅವರು ತಂದೆಯ ಮೇಲೆ ಹಲ್ಲೆ ಮಾಡಿದ್ದರು ಎಂದು ಹೇಳಿಕೆ ಕೊಟ್ಟಿದ್ದು, ಪೊಲೀಸರ ತನಿಖೆಯ ಆಯಾಮನವನ್ನು ಬದಲಿಸಿದೆ.
ಕೊನೆ ದಿನದ ದಿನಚರಿಗಳು
ಮಾರ್ಚ್ 7ರ ಶನಿವಾರ ಹೈದರಾಬಾದ್ನಲ್ಲಿ ಕೆಲಸವಿದೆ ಎಂದು ಪತ್ನಿ ಗಿರಿಜಾ ಬಳಿ ಹೇಳಿ ಡ್ರೈವರ್ ರಾಜೇಶ್ ಜೊತೆ ವಿರ್ಯಾಲಗೂಡಿನಿಂದ ಮಾರುತಿರಾವ್ ಹೊರಟಿದ್ದರು. ಆದರೆ, ಏನು ಕೆಲಸವಿದೆ, ಯಾರನ್ನು ಭೇಟಿ ಮಾಡಬೇಕು ಎಂದು ಪತ್ನಿಗೆ ಸರಿಯಾಗಿ ಮಾಹಿತಿ ನೀಡಿರಲಿಲ್ಲ. ಮಾರುತಿರಾವ್ ಕೊನೆ ದಿನದ ದಿನಚರಿ, ಫೋನ್ ಕರೆಗಳ ಮಾಹಿತಿಯನ್ನು ಪೊಲೀಸರು ಅವಲೋಕಿಸುತ್ತಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.