ತಿರುಪತಿ ತಿಮ್ಮಪ್ಪನನ್ನೂ ಬಿಡದ ವಾನ್ನಾಕ್ರೈ ವೈರಸ್
ದಾಳಿಗೆ ಗುರಿಯಾದ ಎಲ್ಲಾ ಕಂಪ್ಯೂಟರ್ ಗಳು ಆಡಳಿತಾತ್ಮಕ ನಿರ್ವಹಣೆಗೆ ಬಳಕೆಯಾಗುತ್ತಿದ್ದ ಕಂಪ್ಯೂಟರ್ ಗಳಾಗಿವೆ. ಟಿಕೆಟ್ ಮಾರಾಟ ಮತ್ತು ಭಕ್ತರ ವಿವಿಧ ಸೇವೆಗಳಿಗಾಗಿ ಇದನ್ನು ಬಳಸಲಾಗುತ್ತಿತ್ತು.
ತಿರುಪತಿ, ಮೇ 17: ಹಲವು ಕಡೆಗಳಲ್ಲಿ ವೈರಸ್ ದಾಳಿಗಳು ನಡೆದ ವರದಿಗಳ ನಂತರ ಇದೀಗ ವೆಂಕಟೇಶ್ವರನಿಗೂ ವೈರಸ್ ಕಾಟ ವಕ್ಕರಿಸಿದೆ. ತಿರುಮಲ ತಿರುಪತಿಯ 22ಕ್ಕೂ ಹೆಚ್ಚು ಕಂಪ್ಯೂಟರ್ ಗಳ ಮೇಲೆ 'ವಾನ್ನಾಕ್ರೈ ರಾನ್ಸಮ್ವೇರ್ ' ದಾಳಿ ನಡೆದಿದೆ.
ಇಲ್ಲಿನ ಆಡಳಿತಾತ್ಮಕ ನಿರ್ವಹಣೆಗೆ ಬಳಸುವ ಕಂಪ್ಯೂಟರ್ ಗಳ ಮೇಲೆ ರಾನ್ಸಮ್ವೇರ್ ದಾಳಿ ನಡೆದಿದೆ. ಈ ಕಂಪ್ಯೂಟರ್ ಗಳನ್ನು ಟಿಕೆಟ್ ಹಂಚಿಕೆಗೆ ಬಳಸುತ್ತಿದ್ದರು ಎನ್ನಲಾಗಿದೆ.[ಜಗತ್ತಿನ ನಿದ್ದೆಗೆಡಿಸಿರುವ ವಾನ್ನಕ್ರೈ ವೈರಸ್ ಹುಟ್ಟಿದ್ದು ಎಲ್ಲಿ?]
"ದಾಳಿಗೆ ಗುರಿಯಾದ ಎಲ್ಲಾ ಕಂಪ್ಯೂಟರ್ ಗಳು ಆಡಳಿತಾತ್ಮಕ ನಿರ್ವಹಣೆಗೆ ಬಳಕೆಯಾಗುತ್ತಿದ್ದ ಕಂಪ್ಯೂಟರ್ ಗಳಾಗಿವೆ. ಟಿಕೆಟ್ ಮಾರಾಟ ಮತ್ತು ಭಕ್ತರ ವಿವಿಧ ಸೇವೆಗಳಿಗಾಗಿ ಇದನ್ನು ಬಳಸಲಾಗುತ್ತಿತ್ತು," ಎಂದು ಟಿಟಿಡಿಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಸಿಂಘಾಲ್ ಹೇಳಿದ್ದಾರೆ.
ಇನ್ನು ಮುನ್ನೆಚ್ಚರಿಕೆ ಕ್ರಮವಾಗಿ ಇತರ ಕಂಪ್ಯೂಟರ್ ಗಳ ಬಳಕೆಯನ್ನೂ ಸ್ಥಗಿತಗೊಳಿಸಲಾಗಿದೆ. ಆದರೆ ಇದರಿಂದ ಭಕ್ತರಿಗೆ ನೀಡಲಾಗುತ್ತಿರುವ ಸೇವೆಗಳಿಗೆ ಯಾವುದೇ ಅಡ್ಡಿಯಾಗಿಲ್ಲ ಎಂದು ಟಿಟಿಡಿ ಮೂಲಗಳು ಹೇಳಿವೆ.[ಕೇರಳದ ವಯನಾಡು, ಕೊಲ್ಕೊತ್ತಾದಲ್ಲೂ ರಾನ್ಸಮ್ವೇರ್ ದಾಳಿ]
ಟಿಟಿಡಿಯ ಮಾಹಿತಿ ತಂತ್ರಜ್ಞಾನ ವಿಭಾಗ ಟಾಟಾ ಕನ್ಸಲ್ಟೆನ್ಸಿ ಕಂಪೆನಿ ಜತೆ ಒಪ್ಪಂದ ಮಾಡಿಕೊಂಡು ಕಾರ್ಯ ನಿರ್ವಹಿಸುತ್ತಿದೆ. ಹಳೆಯ ಕಂಪ್ಯೂಟರ್ ಕಾರ್ಯಾಚರಣಾ ವ್ಯವಸ್ಥೆ ಬಳಕೆ ಮಾಡುತ್ತಿದ್ದ ಕಂಪ್ಯೂಟರ್ ಗಳು ಮಾತ್ರ ದಾಳಿಗೆ ಗುರಿಯಾಗಿವೆ.[ಸೈಬರ್ ದಾಳಿ 'ರಾನ್ಸಮ್ವೇರ್'ನಿಂದ ತಪ್ಪಿಸಿಕೊಳ್ಳುವುದು ಹೇಗೆ?]
ಕಳೆದ ಎರಡು ದಿನಗಳಲ್ಲಿ ಕೇರಳದಲ್ಲಿ ಹಲವು ರಾನ್ಸಮ್ವೇರ್ ದಾಳಿಗಳು ನಡೆದಿದ್ದು ವರದಿಯಾಗಿವೆ. ಇನ್ನು 140 ಬೇರೆ ಬೇರೆ ದೇಶಗಳಲ್ಲೂ ಇದೇ ರೀತಿ ದಾಳಿಗಳು ನಡೆದಿವೆ. (ಒನ್ ಇಂಡಿಯಾ ಸುದ್ದಿ)
{promotion-urls}