ಕರೀಂನಗರದಲ್ಲಿ 1 ರುಪಾಯಿಗೆ ಅಂತ್ಯಸಂಸ್ಕಾರ, ಸಂಬಂಧಿಕರಿಗೆ ಐದು ರುಪಾಯಿಗೆ ಒಂದು ಊಟ
ಹೈದರಾಬಾದ್ (ತೆಲಂಗಾಣ), ಮೇ 21: ಬಡವರು, ಕೆಳ ಮಧ್ಯಮ ವರ್ಗದವರಿಗೆ ತಮ್ಮ ಹತ್ತಿರದವರ ಅಂತ್ಯ ಸಂಸ್ಕಾರಕ್ಕೂ ಹಣದ ಸಮಸ್ಯೆ ಆಗುವುದನ್ನು ನೀವು ಕೇಳಿರಬಹುದು, ನೋಡಿರಬಹುದು. ಎಷ್ಟೋ ಮಂದಿಗೆ ಅದು ಅನುಭವಕ್ಕೂ ಬಂದಿರಬಹುದು. ಅಂಥ ಕಷ್ಟದಲ್ಲಿ ಇರುವವರಿಗೆ ನೆರವು ನೀಡುವ ಉದ್ದೇಶದಿಂದ ತೆಲಂಗಾಣದ ಕರೀಂ ನಗರದಲ್ಲಿ 1 ರುಪಾಯಿಗೆ ಅಂತ್ಯಸಂಸ್ಕಾರ ನೆರವೇರಿಸುವ ಯೋಜನೆ ಆರಂಭಿಸಲಾಗಿದೆ.
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಕರೀಂನಗರ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ಮಂಗಳವಾರದಂದು ಈ ಯೋಜನೆಯನ್ನು ಘೋಷಣೆ ಮಾಡಿದೆ. ಆಯಾ ಧಾರ್ಮಿಕ ವಿಧಿಯಂತೆ ಆಗುವ ಎಲ್ಲ ಅಂತಿಮ ವಿಧಿಯ ಖರ್ಚನ್ನು ಕೆಎಂಸಿ ಭರಿಸಲಿದೆ. ಈ ಯೋಜನೆಗೆ "ಅಂತಿಮ್ ಯಾತ್ರಾ- ಆಖರಿ ಸಫರ್" ಎಂದು ಹೆಸರಿಡಲಾಗಿದೆ.
ಶವವನ್ನು ಸ್ಮಶಾನಕ್ಕೆ ಅಥವಾ ಚಿತಾಗಾರಕ್ಕೆ ಕೆಎಂಸಿಯಿಂದಲೇ ಸಾಗಾಟ ಮಾಡಲಾಗುತ್ತದೆ. ಧಾರ್ಮಿಕ ವಿಧಿ- ವಿಧಾನಕ್ಕೆ ಸಿದ್ಧ ಮಾಡಲಾಗುತ್ತದೆ. ಸೌದೆ, ಸೀಮೆ ಎಣ್ಣೆ ಇತರ ಅಗತ್ಯ ವಸ್ತುಗಳನ್ನು ಸಿದ್ಧಪಡಿಸಲಾಗುತ್ತದೆ. ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರಿಗೆ ಸ್ಮಶಾನದಲ್ಲಿ ಸಮಾಧಿಗೆ ಹಳ್ಳ ತೋಡಿಕೊಡಲಾಗುತ್ತದೆ.
ಕರೀಂನಗರ್ ನ ಮೇಯ ಎಸ್.ರವೀಂದರ್ ಸಿಂಗ್ ಮಾತನಾಡಿ, ಬಡವರು ಮತ್ತು ನೆರವಿನ ಅಗತ್ಯ ಇರುವವರ ಅಂತಿಮ ವಿಧಿ ವಿಧಾನವೂ ಗೌರವಯುತವಾಗಿ ಆಗಬೇಕು ಎಂಬುದು ಈ ಯೋಜನೆಯ ಉದ್ದೇಶ. ಅಂತ್ಯ ಸಂಸ್ಕಾರಕ್ಕೆ ಆಗುವ ವೆಚ್ಚ ಕೂಡ ಹೆಚ್ಚಾಗುತ್ತಿರುವುದರಿಂದ ಎಷ್ಟೋ ಕುಟುಂಬಗಳು ಅದಕ್ಕೆ ವ್ಯವಸ್ಥೆ ಮಾಡಿಕೊಳ್ಳಲು ಸಹ ಕಷ್ಟ ಪಡುತ್ತಿವೆ ಎಂದಿದ್ದಾರೆ.
ಜೂನ್ ಹದಿನೈದನೇ ತಾರೀಕಿನಿಂದ ಈ ಯೋಜನೆ ಜಾರಿಗೆ ಬರಲಿದೆ. ಇದು ಎಲ್ಲ ಜಾತಿ, ಧರ್ಮದವರಿಗೂ ಅನ್ವಯ ಆಗಲಿದೆ. ಈ ಯೋಜನೆ ಅಡಿಯಲ್ಲಿ ಒಂದು ರುಪಾಯಿ ಪಾವತಿಸಿ, ರಸೀದಿ ಪಡೆಯಬೇಕು. ಕೆಎಂಸಿಯ ಸಿಬ್ಬಂದಿ ಕೂಡ ತಮ್ಮ ಪ್ರದೇಶದಲ್ಲಿ ಮೃತರಾದವರ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಗೆಲ್ಲಿಸಿದ ತೆಲಂಗಾಣ ಜನರಿಗೆ ಭಾರಿ ಉಡುಗೊರೆ ನೀಡಿದ ಸಿಎಂ ಕೆಸಿಆರ್
ಅಗತ್ಯ ಇದ್ದಲ್ಲಿ ಶವವನ್ನು ಇರಿಸಲು ಉಚಿತವಾಗಿ 'ಬಾಡಿ ಫ್ರೀಜರ್ಸ್' ಹಾಗೂ ತೀರಿ ಹೋದವರ ಕುಟುಂಬದ ಐವತ್ತು ಮಂದಿ ಸದಸ್ಯರಿಗೆ ಊಟದ ವ್ಯವಸ್ಥೆ ಮಾಡಿಕೊಡಲಾಗುತ್ತದೆ. ಐದು ರುಪಾಯಿಗೆ ಒಂದು ಊಟದಂತೆ ಒದಗಿಸಲಾಗುತ್ತದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.
ಈ ಯೋಜನೆ ಅಡಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದ ತಕ್ಷಣವೇ 'ಮರಣ ಪ್ರಮಾಣಪತ್ರ'ವನ್ನು ವಿತರಿಸಲಾಗುತ್ತದೆ. ಶವವನ್ನು ಚಿತಾಗಾರ ಅಥವಾ ಸ್ಮಶಾನಕ್ಕೆ ಸಾಗಾಟ ಮಾಡುವ ಸಲುವಾಗಿ ವಿಶೇಷ ವಾಹನ ವ್ಯವಸ್ಥೆ ಮಾಡಲಾಗುತ್ತದೆ. ಈ ಯೋಜನೆಗಾಗಿಯೇ ಒಂದೂವರೆ ಕೋಟಿ ರುಪಾಯಿ ಎತ್ತಿಡಲಾಗಿದೆ. ಜತೆಗೆ ದಾನಿಗಳ ನೆರವಿಗಾಗಿ ಮನವಿ ಸಹ ಮಾಡಲಾಗಿದೆ.