ಲಖಿಂಪುರ ಖೇರಿ ಘಟನೆ 'ಸರ್ಕಾರಿ ಪ್ರಾಯೋಜಿತ ಹಿಂಸಾಚಾರ': ಓವೈಸಿ
ಹೈದರಾಬಾದ್, ಅಕ್ಟೋಬರ್ 05: ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ನಡೆದ ಹಿಂಸಾಚಾರವು "ರಾಜ್ಯ ಪ್ರಾಯೋಜಿತ ಹಿಂಸಾಚಾರ" ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದು, ಕೇಂದ್ರ ಸರ್ಕಾರ ಹಾಗೂ ಉತ್ತರ ಪ್ರದೇಶ ಸರ್ಕಾರವನ್ನು ಈ ಎಂಟು ಮಂದಿಯ ಸಾವಿಗೆ ಕಾರಣವಾದ ಘಟನೆಯ ಹಿನ್ನೆಲೆ ಟೀಕೆ ಮಾಡಿದ್ದಾರೆ.
ಈ ಬಗ್ಗೆ ಎಎನ್ಐಗೆ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, "ಈ ಘಟನೆಯು ರಾಜ್ಯ ಪ್ರಾಯೋಜಿತ ಹಿಂಸಾಚಾರ. ಈ ಪ್ರಕರಣದ ಹಿನ್ನೆಲೆ ಕೇಂದ್ರ ಹಾಗೂ ಉತ್ತರ ಪ್ರದೇಶದ ಬಿಜೆಪಿ ಸರ್ಕಾರಗಳ ವಿರುದ್ದ ಆರೋಪ ಮಾಡಬೇಕಾಗಿದೆ. ಯಾಕೆಂದರೆ ಕೇಂದ್ರ ಸಂಪುಟ ಸಚಿವರೇ ಆ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಪ್ರಚೋದಿತ ಭಾಷಣ ಮಾಡಿದ್ದಾರೆ. ಎರಡು ನಿಮಿಷದಲ್ಲೇ ಎಲ್ಲವೂ ಕೊನೆಯಾಗಿ (ರೈತರ ಪ್ರತಿಭಟನೆ) ಈ ಘಟನೆಗೆ ಕಾರಣವಾಗಿದೆ," ಎಂದು ಆರೋಪ ಮಾಡಿದ್ದಾರೆ.
ಯುಪಿ ಹಿಂಸಾಚಾರ: ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರನ ವಿರುದ್ದ ಕೊಲೆ ಪ್ರಕರಣ
"ಈ ವಿಚಾರದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಯಬೇಕು. ಈ ಘಟನೆಯ ಬಗ್ಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತನಿಖೆಯನ್ನು ನಡೆಸಬೇಕು," ಎಂದು ಆಗ್ರಹ ಮಾಡಿದ್ದಾರೆ. ಇನ್ನು ಈ ಸಂದರ್ಭದಲ್ಲೇ, "ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾರಿಂದ ರೈತರು ಕೊಲ್ಲಲ್ಪಟ್ಟ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ನಾನು ಭೇಟಿ ನೀಡಲಿದ್ದೇನೆ," ಎಂದು ಕೂಡಾ ತಿಳಿಸಿದ್ದಾರೆ.
"ನಾನು ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ಭೇಟಿ ನೀಡಲಿದ್ದೇನೆ. ಜನರೊಂದಿಗೆ ಒಗ್ಗಟ್ಟು ಪ್ರದರ್ಶನ ಮಾಡಲಿದ್ದೇನೆ. ಆ ಜನರನ್ನು ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಪುತ್ರ ಕೊಂದಿದ್ದಾನೆ. ಇದೊಂದು ಹೇಯ ಅಪರಾಧ. ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಈ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯಬೇಕು. ಹಾಗೆಯೇ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾರನ್ನು ತನ್ನ ಸ್ಥಾನದಿಂದ ಪದಚ್ಯುತಿ ಮಾಡಬೇಕು," ಎಂದು ಕೂಡಾ ಓವೈಸಿ ಒತ್ತಾಯಿಸಿದ್ದಾರೆ.
ಈ ನಡುವೆ ಉತ್ತರ ಪ್ರದೇಶ ಪೊಲೀಸರು ಪಂಜಾಬ್ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಸುಖ್ಜಿಂದರ್ ಸಿಂಗ್ ರಾಂಧವಾ ನೇತೃತ್ವದ ಪಂಜಾಬ್ ಸಚಿವ ಹಾಗೂ ಶಾಸಕರ ನಿಯೋಗವನ್ನು ವಶಕ್ಕೆ ಪಡೆದಿದೆ. ಆರೋಪಿಗಳನ್ನು ಬಂಧನ ಮಾಡಬೇಕು ಎಂದು ಈ ಸಂದರ್ಭದಲ್ಲಿ ಸುಖ್ಜಿಂದರ್ ಸಿಂಗ್ ರಾಂಧವಾ ಆಗ್ರಹ ಮಾಡಿದರು.
'ಯುಪಿ ಹಿಂಸಾಚಾರ ಯೋಗಿ ಸರ್ಕಾರಕ್ಕೆ ಅಂತ್ಯ ಹಾಡಲಿದೆ': ಕಾಂಗ್ರೆಸ್ ನಾಯಕ
ಉತ್ತರ ಪ್ರದೇಶದ ಲಖಿಂಪುರ್ ಖೇರಿ ಜಿಲ್ಲೆಯಲ್ಲಿ ಭಾನುವಾರ ಸಚಿವರುಗಳ ಭೇಟಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಕಾರುಗಳು ರೈತರ ಮೇಲೆ ಹರಿದು ಹೋದ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರನೂ ಇದ್ದರು ಎಂದು ಹೇಳಲಾಗಿದೆ. ಈ ನಡುವೆ ಕೇಂದ್ರ ಸಚಿವರ ಪುತ್ರ ಆಶೀಶ್ ವಿರುದ್ದ ಕೊಲೆ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದ ಸಂದರ್ಭದಲ್ಲಿ ಕಾರಿನಲ್ಲಿ ಕೇಂದ್ರ ರಾಜ್ಯ ಸಚಿವ ಅಜಯ್ ಮಿಶ್ರಾರ ಪುತ್ರ ಇದ್ದರು ಎಂಬ ಆರೋಪವನ್ನು ಸಚಿವರು ನಿರಾಕರಿಸಿದ್ದಾರೆ. "ನನ್ನ ಪುತ್ರ ಆ ಸಂದರ್ಭದಲ್ಲಿ ಕಾರಿನಲ್ಲಿ ಇರಲಿಲ್ಲ. ಕಾರ್ಯಕರ್ತರ ಮೇಲೆ ದುಷ್ಕರ್ಮಿಗಳು ಕೋಲು ಮತ್ತು ಕತ್ತಿಗಳಿಂದ ಹಲ್ಲೆ ಮಾಡಿದ್ದಾರೆ. ನನ್ನ ಮಗ ಅಲ್ಲಿ ಇದ್ದಿದ್ದರೆ, ಆತ ಜೀವಂತವಾಗಿ ಇರುತ್ತಿರಲಿಲ್ಲ," ಎಂದು ಹೇಳಿದ್ದಾರೆ. ಹಾಗೆಯೇ ಪುತ್ರ ಆಶೀಶ್ ಮಿಶ್ರಾ ಕೂಡಾ ಈ ಆರೋಪವನ್ನು ನಿರಾಕರಿಸಿದ್ದಾರೆ. "ನಾನು ಕಾರ್ಯಕ್ರಮವೊಂದರಲ್ಲಿ ಇದ್ದೆ," ಎಂದಿದ್ದಾರೆ.
(ಒನ್ಇಂಡಿಯಾ ಸುದ್ದಿ)