ಮೃತದೇಹ ಸ್ವೀಕರಿಸಲು ಒಪ್ಪದ ಕುಟುಂಬದವರು: ಪೊಲೀಸರಿಂದಲೇ ಅಂತ್ಯಸಂಸ್ಕಾರ ಸಾಧ್ಯತೆ
Recommended Video
ಹೈದರಾಬಾದ್, ಡಿಸೆಂಬರ್ 6: ಎನ್ಕೌಂಟರ್ ನಡೆದ ಸ್ಥಳದಲ್ಲಿಯೇ ಸುಮಾರು ಹತ್ತು ಗಂಟೆ ಸಮಯ ಬಿದ್ದಿದ್ದ ಅತ್ಯಾಚಾರ ಆರೋಪಿಗಳ ಮೃತದೇಹಗಳನ್ನು ಶುಕ್ರವಾರ ಮಧ್ಯಾಹ್ನದ ಬಳಿಕ ಅಲ್ಲಿಂದ ಸಾಗಿಸಲಾಯಿತು.
ಮಹಬೂಬನಗರ ಜಿಲ್ಲಾಸ್ಪತ್ರೆಯಲ್ಲಿ ಎಲ್ಲ ಮೃತ ಆರೋಪಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ಬಳಿಕ ಮೃತದೇಹಗಳನ್ನು ಆರೋಪಿಗಳ ಕುಟುಂಬದವರಿಗೆ ಒಪ್ಪಿಸಬೇಕಿದೆ. ಆದರೆ ಎಲ್ಲ ನಾಲ್ವರು ಆರೋಪಿಗಳ ಕುಟುಂಬದವರು ಮೃತದೇಹಗಳನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ ಎಂದು ತಿಳಿದುಬಂದಿದೆ. ಹೀಗಾಗಿ ಪೊಲೀಸರೇ ಅವರ ಅಂತ್ಯಸಂಸ್ಕಾರ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ದೊರೆತಿಲ್ಲ.
ಎನ್ಕೌಂಟರ್ ಮಾಡಿದ್ದೇಕೆ, ನೈಜ ಕಾರಣ ಬಿಚ್ಚಿಟ್ಟ ಪೊಲೀಸ್ ಆಯುಕ್ತ ವಿಶ್ವನಾಥ್
'ನನ್ನ ಮಗು ತಪ್ಪು ಮಾಡಿದ್ದರೆ ಅವನನ್ನೂ ಸುಟ್ಟುಬಿಡಿ. ನನ್ನ ಮಗ ನನಗೆ ಏನೂ ಅಲ್ಲ. ಆಕೆಯ ತಾಯಿ (ಪಶುವೈದ್ಯೆಯ ತಾಯಿ) ಒಂಬತ್ತು ತಿಂಗಳು ಹೊತ್ತು ಆಕೆಗೆ ಜನ್ಮ ನೀಡಿರುತ್ತಾರೆ. ಆಕೆಯ ಮಗ ಅಂತಹ ಅಪರಾಧದ ಬಲಿಪಶುವಾದರೆ ಆಕೆ ಏನು ಮಾಡಬೇಕು? ಇಂದು ನಾನು ಸಂಕಷ್ಟ ಅನುಭವಿಸುತ್ತಿದ್ದೇನೆ. ಆ ಹೆಣ್ಣುಮಗುವಿನ ತಾಯಿ ಅನುಭವಿಸುತ್ತಿರುವ ವೇದನೆ ನಾನು ಊಹಿಸಬಲ್ಲೆ' ಎಂದು ಪ್ರಕರಣದ ನಾಲ್ಕನೇ ಆರೋಪಿ ಚನ್ನಕೇಶವುಲು ತಾಯಿ, ಮಗನ ಬಂಧನವಾದಾಗ ಹೇಳಿಕೆ ನೀಡಿದ್ದರು.
ಮರಣೋತ್ತರ ಪರೀಕ್ಷೆ ನಡೆಯುವ ಆಸ್ಪತ್ರೆಯ ಸುತ್ತಲೂ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, 200ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಎನ್ಕೌಂಟರ್ನ ಪಿನ್ ಟು ಪಿನ್ ಮಾಹಿತಿ; ಪೊಲೀಸ್ ವರ್ಶನ್ ಹೀಗಿದೆ...
'ನಾಲ್ವರು ಆರೋಪಿಗಳು ಹತ್ತು ದಿನಗಳಿಂದ ಪೊಲೀಸ್ ವಶದಲ್ಲಿದ್ದರು. ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದೆವು. ಅವರು ತಾವು ಎಸಗಿದ ಅಪರಾಧವನ್ನು ಒಪ್ಪಿಕೊಂಡ ಬಳಿಕ ಘಟನೆ ನಡೆದ ಸ್ಥಳಕ್ಕೆ ಕರೆದೊಯ್ದು ಸನ್ನಿವೇಶವನ್ನು ಮರುಸೃಷ್ಟಿಸಲು ಬಯಸಿದ್ದೆವು. ಘಟನಾ ಸ್ಥಳವನ್ನು ತಲುಪಿದಾಗ ಆರೋಪಿಗಳು ನಮ್ಮ ಮೇಲೆ ಕಲ್ಲು ಎಸೆದು ದಾಳಿ ನಡೆಸಿದರು. ನಮ್ಮ ಗನ್ಗಳನ್ನು ಕಸಿದುಕೊಳ್ಳುವಲ್ಲಿ ಸಫಲರಾದರು. ಹೀಗಾಗಿ ಅವರ ಮೇಲೆ ಎನ್ಕೌಂಟರ್ ಮಾಡಬೇಕಾಯಿತು. ಘಟನೆಯಲ್ಲಿ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ' ಎಂದು ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ್ ಹೇಳಿದ್ದಾರೆ.