ಇದೇನಿದು ಹೊಸ ಟ್ವಿಸ್ಟ್! ಉಪಪ್ರಧಾನಿ ಪಟ್ಟಕ್ಕೆ ಗಾಳಹಾಕುತ್ತಿದ್ದಾರಾ ಕೆಸಿಆರ್!
ಹೈದರಾಬಾದ್, ಮೇ 15: ಚುನಾವಣೆ ಫಲಿತಾಂಶದ ಹೊತ್ತಿಗೆ ರಾಷ್ಟ್ರ ರಾಜಕಾರಣದಲ್ಲಿ ಏನೆಲ್ಲ ಬದಲಾವಣೆಯಾಗುತ್ತದೋ ದೇವರೇ ಬಲ್ಲ! ಇಷ್ಟು ದಿನ ಪ್ರಧಾನಿ ಹುದ್ದೆಯ ಕನಸು ಕಾಣುತ್ತಿದ್ದ ಟಿಆರ್ ಎಸ್ ಮುಖಂಡ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಇದೀಗ ಉಪಪ್ರಧಾನಿಯ ಕನಸು ಕಾಣುತ್ತಿದ್ದಾರಾ?!
ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ
ಪ್ರಧಾನಿ ಹುದ್ದೆಯ ಅವರ ಕನಸಿಗೆ ಎಂಕೆ ಸ್ಟಾಲಿನ್ ಅವರೇ ಎಳ್ಳುನೀರು ಬಿಟ್ಟ ಮೇಲೆ ಕೆಸಿಆರ್ ಟ್ರ್ಯಾಕ್ ಬದಲಾಯಿಸಿದ್ದಾರೆ. ಕಾಂಗ್ರೆಸ್ -ಬಿಜೆಪಿಯನ್ನು ಹೊರಗಿಟ್ಟು ತೃತೀಯ ರಂಗ ರಚಿಸುವ ಆಸೆಗೆ ಅವರಿನ್ನೂ ತಿಲಾಂಜಲಿ ಹಾಡಿಲ್ಲ.
ಕೆಸಿಆರ್ ಪ್ರಧಾನಿ ಪಟ್ಟದ ಕನಸಿಗೆ ಅದೊಂದು ಮಾತಿಂದ ಕೊಳ್ಳಿ ಇಟ್ಟ ಸ್ಟಾಲಿನ್!
"ಒಮ್ಮೆ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಖಂಡಿತ ಬಹುಮತ ಗಳಿಸುವುದಿಲ್ಲ. ಆಗ ಉಳಿದ ಪಕ್ಷಗಳೆಲ್ಲ ಒಂದಾಗುತ್ತವೆ. ಆಗಲೂ ತೃತೀಯ ರಂಗಕ್ಕೆ ಬಹುಮತ ಬಾರದೆ ಇದ್ದರೆ ಕಾಂಗ್ರೆಸ್ ಬೆಂಬಲ ನೀಡಬಹುದು. ಕಾಂಗ್ರೆಸ್ ತಾನಾಗಿಯೇ ಹೀಗೆ ಬೆಂಬಲ ನೀಡಿದರೆ ಅದು 'ಸರ್ಕಾರದಲ್ಲಿ ಮುಖ್ಯ ಪಾತ್ರ' ವಹಿಸುವುದಕ್ಕೆ ಸಾಧ್ಯವಿಲ್ಲ ಎಂಬುದು ಕೆಸಿಆರ್ ಲೆಕ್ಕಾಚಾರ ಎನ್ನಲಾಗುತ್ತಿದೆ.
ಪ್ರಧಾನಿಯಾಗುವ ಅವಕಾಶ ಕ್ಷೀಣಿಸುತ್ತಿರುವುದರಿಂದ, ಕಡೇ ಪಕ್ಷ ಉಪಪ್ರಧಾನಿ ಹುದ್ದೆಗಾದರೂ ಗಾಳ ಹಾಕುವ ಪ್ರಯತ್ನವನ್ನು ಕೆಸಿಆರ್ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ ಟಿಆರ್ ಎಸ್ ಈ ಸುದ್ದಿಯನ್ನು ಅಲ್ಲಗಳೆದಿದ್ದು, ಕೆ ಚಂದ್ರಶೇಖರ್ ರಾವ್ ಅವರ ಉದ್ದೇಶ ಯಾವುದೇ ಹುದ್ದೆಯನ್ನು ಪಡೆಯುವುದಲ್ಲ, ಈ ದೇಶದಲ್ಲಿ ಮತ್ತು ಸರ್ಕಾರದಲ್ಲಿ ಬದಲಾವಣೆ ತರುವುದು ಎಂದಿದೆ.