ಪವರ್ ಸ್ಟಾರ್ ಪಕ್ಷದ ಹೆಸರು ಜನ ಸೇನಾ
ಹೈದರಾಬಾದ್, ಮಾರ್ಚ್.12: ತೆಲುಗಿನ ಪವರ್ ಸ್ಟಾರ್ ಪವನ್ ಕಲ್ಯಾಣ್ ರಾಜಕೀಯ ಪ್ರವೇಶದ ಕುರಿತ ಅನುಮಾನಕ್ಕೆ ಉತ್ತರ ಸಿಕ್ಕಿದೆ. ಕೇಂದ್ರ ಸಚಿವ ಚಿರಂಜೀವಿ ಅವರ ತಮ್ಮ ಪವನ್ ಕಲ್ಯಾಣ್ ಅವರು ತಮ್ಮದೇ ಸ್ವಂತ ರಾಜಕೀಯ ಪಕ್ಷ ಕಟ್ಟುತ್ತಿದ್ದಾರೆ. ಹೊಸ ಪಕ್ಷದ ಹೆಸರನ್ನು ಅಧಿಕೃತವಾಗಿ ನೋಂದಾಯಿಸಿ, ಕೇಂದ್ರ ಚುನಾವಣಾ ಆಯೋಗಕ್ಕೆ ಮಾನ್ಯತೆಗಾಗಿ ಪತ್ರ ಬರೆದಿದ್ದಾರೆ. ಮಿಕ್ಕ ವಿವರ ತಿಳಿಯಲು ಮಾ.14ರ ಸುದ್ದಿಗೋಷ್ಠಿ ತನಕ ಕಾಯಿರಿ ಎಂದು ಪವನ್ ಅವರ ಮಾಧ್ಯಮ ವಕ್ತಾರರು ಒನ್ ಇಂಡಿಯಾ ಬಾತ್ಮಿದಾರರಿಗೆ ಹೇಳಿದ್ದಾರೆ.
ತೆಲುಗು ಚಿತ್ರರಂಗದಲ್ಲಿ ಪವರ್ ಸ್ಟಾರ್ ಎಂದು ಕರೆಸಿಕೊಳ್ಳುವ ಪವನ್ ಕಲ್ಯಾಣ್ ಅವರು ರಾಜಕೀಯ ರಂಗಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಹೊಸ ಪಕ್ಷವನ್ನು ಸದ್ಯದಲ್ಲೇ ಘೋಷಿಸುತ್ತಿದ್ದಾರೆ. ಹೊಸ ಪಕ್ಷಕ್ಕೆ ಹೆಸರನ್ನು ಹುಡುಕಲಾಗಿದೆ ಎಂಬ ಸುದ್ದಿಯನ್ನು ಈ ಮುಂಚೆ ಓದಿರುತ್ತೀರಿ.ಟಿಡಿಪಿ, ಲೋಕಸತ್ತಾ ಬಿಜೆಪಿ ಸೇರಿದಂತೆ ಹಲವು ಪಕ್ಷಗಳು ಪವನ್ ಕಲ್ಯಾಣ್ ಅವರನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಯತ್ನಿಸಿದ್ದರು. ಆದರೆ, ಯಾವುದೇ ಪಕ್ಷವನ್ನ ಸೇರದೆ ತನ್ನದೇ ಹೊಸ ಪಕ್ಷ ಕಟ್ಟುವ ಮೂಲಕ ಪವನ್ ಕಲ್ಯಾಣ್ ರಾಜಕೀಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಪವನ್ ಪಕ್ಷದ ಹೆಸರಿನ ಕುತೂಹಲ
ಜನಸೇನಾ ಎಂಬ ಹೆಸರಿನ ಪಕ್ಷ ಕಟ್ಟಿರುವ ಪವನ್ ಹೊಸ ಪಕ್ಷದ ನೋಂದಣಿಯನ್ನೂ ಮಾಡಿಸಿದ್ದಾರೆ. ಹೀಗಾಗಿ 'ರಿಪಬ್ಲಿಕ್ ಪಾರ್ಟಿ' ಹಾಗೂ 'ಯುವ ರಾಜ್ಯಂ' ಎಂಬ ಹೆಸರುಗಳು ರಿಜೆಕ್ಟ್ ಆಗಿ 'ಜನಸೇನಾ' ಹೆಸರು ಆಯ್ಕೆಗೊಂಡಿದೆ.
ಪವನ್ ಸುದ್ದಿಗೋಷ್ಠಿ ವೇದಿಕೆ ಸಿದ್ಧವಾಗುತ್ತಿದೆ
ಮಾ.14ರಂದು ದೈದರಾಬಾದಿನ HITEX ಮಾಧಾಪುರದಲ್ಲಿ ಸಂಜೆ 6 ಗಂಟೆಗೆ ನಡೆಯಲಿರುವ ಪತ್ರಿಕಾಗೋಷ್ಠಿಯಲ್ಲಿ ಹೊಸ ಪಕ್ಷ ಘೋಷಣೆ ಮತ್ತು ಸದಸ್ಯರ ಕುರಿತು ಪವನ್ ಕಲ್ಯಾಣ್ ಮಾಹಿತಿ ನೀಡಲಿದ್ದಾರೆ. ಇದಕ್ಕಾಗಿ ಸಿದ್ಧತೆ ಭರದಿಂದ ಸಾಗಿದೆ.
ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧಾರ
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತೆಲಂಗಾಣ ಮತ್ತು ಸೀಮಾಂಧ್ರದಿಂದ ತಮ್ಮ ಅಭ್ಯರ್ಥಿಗಳನ್ನ ಕಣಕ್ಕಿಳಿಸಲೂ ಪವನ್ ಯೋಜನೆ ರೂಪಿಸಿದ್ದಾರಂತೆ. ಯುವಕರು ಮತ್ತು ಹೊಸಮುಖಗಳಿಗೆ ಪಕ್ಷದಲ್ಲ್ಲಿ ಅವಕಾಶ ನೀಡಲಾಗಿದ್ದು, ಪ್ರಾಮಾಣಿಕ ನಿವೃತ್ತ ಸರ್ಕಾರಿ ಅಧಿಕಾರಿಗಳು ಪಕ್ಷ ಸೇರ್ಪಡೆಗೊಂಡಿದ್ದಾರೆ. ಪವನ್ ಕಲ್ಯಾಣ್ ಮಲ್ಕಗಿರಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂಬ ಸುದ್ದಿಯಿದೆ.
ಪವನ್ ಕಲ್ಯಾಣ್ ಕೋರ್ ಕಮಿಟಿ
ಸಿಬಿಐ ಮಾಜಿ ಜಂಟಿ ನಿರ್ದೇಶಕ ಲಕ್ಷ್ಮಿ ನಾರಾಯಣ, ಚಿತ್ರ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ಈನಾಡು ಸಮೂಹದ ಚೇರ್ಮನ್ ರಾಮೋಜಿ ರಾವ್ ಅವರು ಸದ್ಯಕ್ಕೆ ಪವನ್ ಕೋರ್ ಸಮಿತಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಚಿರಂಜೀವಿ ವಿರುದ್ಧವೇ ಪವನ್ ಕಲ್ಯಾಣ್?
ಪವನ್ ಕಲ್ಯಾಣ್ ಅವರ ಪಕ್ಷಕ್ಕೆ ತೆಲುಗು ದೇಶಂ ಪಕ್ಷದ ಬಾಹ್ಯ ಬೆಂಬಲ ಸಿಗಲಿದೆಯಂತೆ. ಹೀಗಾಗಿ ಬಿಜೆಪಿ ಕೂಡಾ ಪವನ್ ಪಕ್ಷಕ್ಕೆ ಬಹುಪರಾಕ್ ಹೇಳುವ ಸಾಧ್ಯತೆ ನಿಚ್ಚಳವಾಗಿದೆ ಎಂಬ ಗಾಳಿಸುದ್ದಿಯಿದೆ.
ಅಣ್ಣ ಚಿರಂಜೀವಿ ಒಡೆದು ಹೋಗಿರುವ ರಾಜ್ಯಕ್ಕೆ ಅಧಿಪತಿಯಾಗುವ ಹೊತ್ತಿಗೆ ಸಮಗ್ರ ಆಂಧ್ರದ ಪ್ರತಿನಿಧಿಯಾಗಿ ಪವನ್ ಜನರ ಮುಂದೆ ನಿಲ್ಲಲು ತಯಾರಿ ನಡೆಸಿದ್ದಾರೆ. ಅಲ್ಲದೆ ಅಣ್ಣನ ವಿರುದ್ಧ ನಿಲ್ಲುತ್ತಾರಾ? ಎಂಬ ಪ್ರಶ್ನೆಗೂ ಶೀಘ್ರವೇ ಉತ್ತರ ದೊರೆಯಲಿದೆ. ಇದರ ಜತೆಗೆ ಲೋಕ ಸತ್ತಾ ಪಕ್ಷದ ನಾಯಕ ಜೆಪಿ ಅವರ ಬಗ್ಗೆ ಅಭಿಮಾನವುಳ್ಳ ಪವನ್ ಅವರು ಅವರ ನೆರವನ್ನು ಕೇಳುವ ಸಾಧ್ಯತೆಯಿದೆಯಂತೆ. ತೆಲುಗು ಕಿರುತೆರೆಯ ಜನಪ್ರಿಯತೆ ಗಳಿಸಿರುವ 'ಜಬರ್ದಸ್ತ್' ಕಾರ್ಯಕ್ರಮ ಖ್ಯಾತಿಯ ನಟ, ಮತ್ತೊಬ್ಬ ಅಣ್ಣ ನಾಗ ಬಾಬು ಯಾರ ಪರ ನಿಲ್ಲಲಿದ್ದಾರೆ ಎಂಬ ಕುತೂಹಲವೂ ಎಲ್ಲರಲ್ಲಿದೆ.