ಅಪಾರ್ಟ್ಮೆಂಟ್ನಲ್ಲಿ ಇಸ್ರೋ ವಿಜ್ಞಾನಿಯ ಹತ್ಯೆ, ಕಾರಣ ನಿಗೂಢ
ಹೈದರಾಬಾದ್, ಅಕ್ಟೋಬರ್ 3: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಯೊಬ್ಬರನ್ನು ಕೊಲೆ ಮಾಡಿರುವ ಘಟನೆ ಹೈದರಾಬಾದಿನ ಅಪಾರ್ಟ್ಮೆಂಟ್ ಒಂದರಲ್ಲಿ ನಡೆದಿದೆ.
ಮೂಲತಃ ಕೇರಳದವರಾಗಿರುವ ಸುರೇಶ್, ಹೈದರಾಬಾದಿನ ಅಪಾರ್ಟ್ ಮೆಂಟ್ ಒಂದರಲ್ಲಿ ಒಬ್ಬರೇ ನೆಲೆಸಿದ್ದರು. ಮಂಗಳವಾರ ಸುರೇಶ್ ಕಚೇರಿಗೆ ಬಂದಿರಲಿಲ್ಲ.
ಕುಡಿದ ನಶೆಯಲ್ಲಿ ಕೊಲೆ ಮಾಡಿ ಶೌಚಾಲಯದಲ್ಲಿ ಬಿಸಾಡಿದ ಸ್ನೇಹಿತರು
ಹೀಗಾಗಿ ಅವರ ಸಹೋದ್ಯೋಗಿಗಳು ಸುರೇಶ್ ಮೊಬೈಲಿಗೆ ಕರೆ ಮಾಡಿದ್ದಾರೆ. ಈ ವೇಳೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದರಿಂದ ಗಾಬರಿಗೊಂಡ ಸಹೋದ್ಯೋಗಿಗಳು ಚೆನ್ನೈನಲ್ಲಿ ಬ್ಯಾಂಕ್ ಉದ್ಯೋಗಿಯಾಗಿರುವ ಸುರೇಶ್ ಪತ್ನಿ ಇಂದಿರಾಗೆ ವಿಷಯ ತಿಳಿಸಿದ್ದಾರೆ.
56 ವರ್ಷದ ಎಸ್ ಸುರೇಶ್ ಮೃತ ವಿಜ್ಞಾನಿ,ಇವರ ಮೃತದೇಹ ಹೈದರಾಬಾದಿನ ಅಮೀರ್ ಪೇಟ್ ನಲ್ಲಿರುವ ಅಪಾರ್ಟ್ ಮೆಂಟಿನಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುರೇಶ್ ಸಂಬಂಧಿಕರೊಬ್ಬರು ಅಲ್ಲೇ ವಾಸಿಸುತ್ತಿದ್ದಾರೆ. ಹೀಗಾಗಿ ಅವರು ಕೂಡ ಸುರೇಶ್ ಪತ್ನಿಗೆ ವಿಷಯ ತಿಳಿಸುವ ಮೊದಲು ಒಂದು ಬಾರಿ ಪರಿಶೀಲಿಸಿದ್ದಾರೆ. ಈ ಮಧ್ಯೆ ಸುರೇಶ್ ಪತ್ನಿ ಪೊಲೀಸರೊಂದಿಗೆ ಹೈದರಾಬಾದ್ಗೆ ತೆರಳಿದ್ದಾರೆ.
ಸುರೇಶ್ ತಲೆಯಲ್ಲಿ ಗಾಯಗಳಾಗಿತ್ತು. ಹೀಗಾಗಿ ಭಾರದ ವಸ್ತುಗಳಿಂದ ತಲೆಗೆ ಹೊಡೆದಿರಬಹುದು. ಪರಿಣಾಮ ಸುರೇಶ್ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸುರೇಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಕೂಡ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.