ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ವಿವಾದಾತ್ಮಕ ಹೇಳಿಕೆ, ಬಂಧನ
ತೆಲಂಗಾಣದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಟಿ ರಾಜಾ ಸಿಂಗ್ ಪ್ರವಾದಿ ಮೊಹಮ್ಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರಿಂದ ಅವರನ್ನು ಬಂಧಿಸಲಾಗಿದೆ. ಪ್ರವಾದಿ ಮುಹಮ್ಮದ್ ಅವರ ಹೇಳಿಕೆಯ ನಂತರ ಟಿ ರಾಜಾ ಸಿಂಗ್ ಬೆಳಕಿಗೆ ಬಂದಿದ್ದಾರೆ. ಇವರ ಹೇಳಿಕೆಯಿಂದಾಗಿ ಅವರ ವಿರುದ್ಧ ಪ್ರತಿಭಟನೆಗಳೂ ಶುರುವಾಗಿವೆ. ಪ್ರತಿಭಟನೆ ಮತ್ತು ಜನರ ಅಸಮಾಧಾನವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಅವರ ವಿರುದ್ಧ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಬಳಿಕ ಅವರನ್ನು ಇಂದು ಬಂಧಿಸಲಾಗಿದೆ.
ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರು ಪ್ರವಾದಿ ಮೊಹಮ್ಮದ್ ಅವರ ವಿರುದ್ಧ ಧರ್ಮನಿಂದೆಯ ಹೇಳಿಕೆಗಾಗಿ ಇಂದು ಮಂಗಳವಾರ ಬೆಳಿಗ್ಗೆ ಹೈದರಾಬಾದ್ ದಕ್ಷಿಣ ವಲಯ ಪೊಲೀಸರು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಸಿಂಗ್ ಅವರು ಗೋಶಾಮಹಲ್ನ ಶಾಸಕರಾಗಿದ್ದು ಅವರು ಇತ್ತೀಚೆಗೆ ಅಪ್ಲೋಡ್ ಮಾಡಿದ ವಿಡಿಯೊದಲ್ಲಿ ಪ್ರವಾದಿ ಮೊಹಮ್ಮದ್ ವಿರುದ್ಧ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಹಲವಾರು ಪ್ರತಿಭಟನೆಗಳು ಭುಗಿಲೆದ್ದಿವೆ.
ಸಿಟ್ಟಿಗೆದ್ದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದಬೀರ್ಪುರ, ಭವಾನಿನಗರ, ರೇನ್ಬಜಾರ್ ಮತ್ತು ಮಿರ್ಚೌಕ್ ಪೊಲೀಸ್ ಠಾಣೆಗಳಲ್ಲಿ ಪ್ರತಿಭಟನೆ ನಡೆಸುತ್ತಿರುವುದು ಕಂಡುಬಂದಿದೆ. ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಸಿಂಗ್ ವಿರುದ್ಧ ಜನರು ಪ್ರತಿಭಟಿಸಿದ್ದಾರೆ ಮತ್ತು ಅವರನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಟಿ ರಾಜಾ ಸಿಂಗ್ ಬಂಧನ
ಪ್ರವಾದಿ ಮುಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಹೈದರಾಬಾದ್ನಲ್ಲಿ ಸೋಮವಾರ ರಾತ್ರಿ ಬಿಜೆಪಿ ಶಾಸಕ ರಾಜಾ ಸಿಂಗ್ ಪ್ರವಾದಿ ಕುರಿತು ಮಾತನಾಡುವ ವಿಡಿಯೋವನ್ನು ವೈರಲ್ ಆದ ಬೆನ್ನಲ್ಲೆ ಅವರ ವಿರುದ್ಧ ಪ್ರತಿಭಟನೆ ನಡೆದು ಬಿಜೆಪಿ ಶಾಸಕನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
ಟಿ ರಾಜಾ ಸಿಂಗ್ ವಿರುದ್ಧ ಪ್ರಕರಣ
ಟಿ ರಾಜಾ ಸಿಂಗ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನೂರಾರು ಜನರು ಬೀದಿಗಿಳಿದ ಕಾರಣ, ಅವರ ವಿರುದ್ಧ ದಬೀರ್ಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. IPC ಯ 153 ಎ, 295, ಮತ್ತು 505 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದಕ್ಕೂ ಮೊದಲು ಆಗಸ್ಟ್ 19 ರಂದು ಹೈದರಾಬಾದ್ನಲ್ಲಿ ಹಾಸ್ಯನಟ ಮುನಾವರ್ ಫರುಕಿ ಅವರ ಕಾರ್ಯಕ್ರಮದ ಮೊದಲು ರಾಜಾ ಸಿಂಗ್ ಮತ್ತು ಇತರ 4 ಜನರನ್ನು ರಕ್ಷಣಾತ್ಮಕ ಕಸ್ಟಡಿಗೆ ತೆಗೆದುಕೊಳ್ಳಲಾಗಿತ್ತು. ಕಳೆದ ವಾರ, ತೆಲಂಗಾಣ ರಾಷ್ಟ್ರ ಸಮಿತಿಯ ಆಡಳಿತದಲ್ಲಿರುವ ತೆಲಂಗಾಣ ಸರ್ಕಾರವು ಫರುಕಿ ನಗರದಲ್ಲಿ ಪ್ರದರ್ಶನ ನೀಡಲು ಅವಕಾಶ ನೀಡಿದರೆ, ಹಾಸ್ಯನಟನ ಮೇಲೆ ಹಲ್ಲೆ ನಡೆಸುವುದಾಗಿ ಮತ್ತು ಸ್ಥಳವನ್ನು ಸುಟ್ಟು ಹಾಕುವುದಾಗಿ ಸಿಂಗ್ ಬೆದರಿಕೆ ಹಾಕಿದ್ದರು. ಈ ಕಾರಣದಿಂದಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.
'ಹಿಂದೂ ದೇವರುಗಳ ಮೇಲೆ ಹಾಸ್ಯನಟನ ಹಾಸ್ಯ' ಆರೋಪ
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೊ ಸಂದೇಶದಲ್ಲಿ, ಬಿಜೆಪಿ ಶಾಸಕರು ಹಾಸ್ಯನಟ ಹಿಂದೂ ದೇವರುಗಳ ಮೇಲೆ ಹಾಸ್ಯ ಮಾಡಿದ್ದಾರೆ ಮತ್ತು ಹೈದರಾಬಾದ್ನಲ್ಲಿ ಪ್ರದರ್ಶನಕ್ಕೆ ಅನುಮತಿ ನೀಡಬಾರದು ಎಂದು ಹೇಳಿದ್ದಾರೆ.
"ಹೈದರಾಬಾದ್ನಲ್ಲಿ ಕಾರ್ಯಕ್ರಮವನ್ನು ನಡೆಸಲು ಅವರನ್ನು ಆಹ್ವಾನಿಸಿದರೆ ಏನಾಗುತ್ತದೆ ಎಂದು ಅವರು ನೋಡಲಿ. ಎಲ್ಲೇ ಕಾರ್ಯಕ್ರಮ ನಡೆದರೂ ಆತನನ್ನು ಥಳಿಸುತ್ತೇವೆ. ಯಾರೇ ಅವರಿಗೆ ಸ್ಥಳವನ್ನು ನೀಡಿದರೆ, ನಾವು ಅಲ್ಲಿ ಬೆಂಕಿ ಹಚ್ಚುತ್ತೇವೆ'' ಎಂದು ಸಿಂಗ್ ವಿಡಿಯೊದಲ್ಲಿ ಹೇಳಿದ್ದಾರೆ.
ಫರುಕಿ ಕಾರ್ಯಕ್ರಮಕ್ಕೆ ಆಹ್ವಾನ
ಹಾಸ್ಯನಟ ಮೂಲತಃ ಜನವರಿ 9 ರಂದು ತೆಲಂಗಾಣ ರಾಜಧಾನಿಯಲ್ಲಿ ಪ್ರದರ್ಶನ ನೀಡಬೇಕಿತ್ತು. ಆದರೆ ದಕ್ಷಿಣ ರಾಜ್ಯದಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚಳದಿಂದಾಗಿ ಪ್ರದರ್ಶನವನ್ನು ರದ್ದುಗೊಳಿಸಲಾಯಿತು. ಆಗಲೂ ತೆಲಂಗಾಣ ಬಿಜೆಪಿ ಫರೂಕಿ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.
ಕಳೆದ ವರ್ಷ ಡಿಸೆಂಬರ್ನಲ್ಲಿ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರ ಮತ್ತು ರಾಜ್ಯ ಐಟಿ ಸಚಿವ ಕೆಟಿ ರಾಮರಾವ್ ಅವರು ಬಲಪಂಥೀಯ ಗುಂಪುಗಳ ಕೋಪವನ್ನು ಆಗಾಗ್ಗೆ ಸೆಳೆಯುವ ಫರುಕಿ ಮತ್ತು ಕುನಾಲ್ ಕಮ್ರಾ ಅವರಂತಹ ಹಾಸ್ಯನಟರಿಗೆ "ಮುಕ್ತ ಆಹ್ವಾನ" ನೀಡಿದರು.
Recommended Video