ತೆಲಂಗಾಣದಲ್ಲಿ ಕಾಂಗ್ರೆಸ್ ಕತೆ ಮುಗೀತು! ವಿರೋಧ ಪಕ್ಷದ ಸ್ಥಾನವೂ ಇಲ್ಲ!
ಹೈದರಾಬಾದ್, ಜೂನ್ 27: ಹಲವು ಕಾಂಗ್ರೆಸ್ ಶಾಸಕರು ತೆಲಂಗಾಣ ರಾಷ್ಟ್ರ ಪಕ್ಷಕ್ಕೆ ಸೇರಿದ ಕಾರಣ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ ಮುಖ್ಯ ವಿರೋಧ ಪಕ್ಷದ ಸ್ಥಾನವನ್ನು ಕಳೆದುಕೊಂಡಿದೆ. ಈ ಮೂಲಕ ತೆಲಂಗಾಣದಲ್ಲಿ ಅಸ್ತಿತ್ವ ಕಳೆದುಕೊಳ್ಳುವ ಸೂಚನೆಯನ್ನು ಕಾಂಗ್ರೆಸ್ ನೀಡಿದೆ.
ಜೂನ್ ಮೊದಲ ವಾರದಲ್ಲಿ ಕಾಂಗ್ರೆಸ್ ನ 18 ಶಾಸಕರಲ್ಲಿ 12 ಶಾಸಕರು ತೆಲಂಗಾಣ ರಾಷ್ಟ್ರ ಸಮಿತಿ ಸೇರಿದ್ದರು. ಈ ಆಘಾತಕಾರಿ ನಡದೆ ಕಾಂಗ್ರೆಸ್ ಗೆ ತೀರಾ ಅನಿರೀಕ್ಷಿತವಾಗಿತ್ತು. ಲೋಕಸಭೆಯ ಸೋಲಿನ ಬೇಸರದಿಂದಲೇ ಹೊರಬರದ ಕಾಂಗ್ರೆಸ್ಸಿಗೆ ಇದೊಂದು ಭಾರೀ ಆಘಾತವೆನ್ನಿಸಿತ್ತು.
ತೆಲಂಗಾಣದಲ್ಲಿ ಕಾಂಗ್ರೆಸ್ ಗೆ ಭಾರೀ ಶಾಕ್: 12 ಶಾಸಕರು ಟಿಆರ್ ಎಸ್ ಗೆ!
ಇದಕ್ಕೂ ಮುನ್ನವೇ ಕಾಂಗ್ರೆಸ್ ಶಾಸಕರು ತಮ್ಮ ಪಕ್ಷವನ್ನು ಟಿಆರ್ ಎಸ್ ಜೊತೆ ವಿಲೀನ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದರು. ಆದರೆ ಆ ಬಗ್ಗೆ ಪಕ್ಷ ಇನ್ನೂ ನಿರ್ಧಾರ ತೆಗೆದುಕೊಳ್ಳುವ ಮೊದಲೇ ಹನ್ನೆರಡು ಶಾಸಕರು ಪಕ್ಷ ತೊರೆದಿದ್ದು ರಾಷ್ಟ್ರೀಯ ಪಕ್ಷಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.
"ಟಿಆರ್ ಎಸ್ ನ ದೂರದೃಷ್ಟಿ ಮತ್ತು ಆಡಳಿತ ವೈಖರಿಯಿಂದ ಪ್ರಭಾವಿತರಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ" ಕಾಂಗ್ರೆಸ್ ತೊರೆದ ಶಾಸಕರು ತಿಳಿಸಿದ್ದರು.
ತೆಲಂಗಾಣ: ಕಾಂಗ್ರೆಸ್ಗೆ ಮರ್ಮಾಘಾತ ನೀಡಿದ ಸಿಎಂ ಚಂದ್ರಶೇಖರ್ ರಾವ್
ಇದೀಗ ತೆಲಂಗಾಣದಲ್ಲಿ ಮುಖ್ಯ ವಿರೋಧ ಪಕ್ಷ ಎಂಬುದೇ ಇಲ್ಲ! ಏಳು ಶಾಸಕರನ್ನು ಹೊಂದಿರುವ ಅಸಾದುದ್ದಿನ್ ಓವೈಸಿ ಅವರ ಎಐಎಂಐಎಂ ಪಕ್ಷವೇ ಎರಡನೇ ಅತೀ ದೊಡ್ಡ ಪಕ್ಷವಾಗಿದೆ.
ಇನ್ನು ವಿಪಕ್ಷ ನಾಯಕರಾಗಿದ್ದ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ತಮ್ಮ ವಿಪಕ್ಷ ನಾಯಕರ ಸ್ಥಾನವನ್ನೂ ಕಳೆದುಕೊಂಡಿದ್ದಾರೆ.