ಚಿತ್ರಗಳಲ್ಲಿ: ತಿಮ್ಮಪ್ಪನ ಹಳೆ ಹರಕೆ ತೀರಿಸಿಕೊಂಡ ಸಿದ್ದರಾಮಯ್ಯ
ಹೈದರಾಬಾದ್,ಜ.27: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿರುಪತಿಗೆ ತೆರಳಿ ತಮ್ಮ ಹಳೆ ಹರಕೆ ತೀರಿಸಿಕೊಂಡಿದ್ದಾರೆ. ವಿವಾಹ ವಾರ್ಷಿಕೋತ್ಸವದ ನೆಪದಲ್ಲಿ ಏಳುಬೆಟ್ಟದ ಒಡೆಯನನ್ನು ಕಂಡ ಸಿದ್ದರಾಮಯ್ಯ ಅವರು ರಾಜ್ಯದ ಅಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದೆ ಎಂದಿದ್ದಾರೆ.
ಸೋಮವಾರ ಸಂಜೆಯೇ ತಿರುಪತಿಗೆ ತೆರಳಿದ್ದ ಅವರು, ಮಂಗಳವಾರ ಮುಂಜಾನೆ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಸಿಎಂ ಸಿದ್ದರಾಮಯ್ಯ ಅವರನ್ನು ತಿರುಮಲ ತಿರುಪತಿ ದೇವಸ್ಥಾನಂನ ಕಾರ್ಯಕಾರಿ ಅಧಿಕಾರಿ ಕೆಎಸ್ ಶ್ರೀನಿವಾಸ ರಾಜು ಹಾಗೂ ಇನ್ನಿತರ ಅಧಿಕಾರಿಗಳು ಬರಮಾಡಿಕೊಂಡರು.
ರಂಗಾನಾಯಕುಲ ಮಂಟಪದಲ್ಲಿ ವೇದ ಘೋಷಗಳೊಂದಿಗೆ ಸಿದ್ದರಾಮಯ್ಯ ಅವರಿಗೆ ವೇದ ಪಂಡಿತರು ಆಶೀರ್ವಚನ ನೀಡಿದರು. ಶ್ರೀವಾರಿ ವಸ್ತ್ರವನ್ನು ನೀಡಿ ಗೌರವಿಸಲಾಯಿತು. [ತಿಮ್ಮಪ್ಪನ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ]
ಸಿದ್ದರಾಮಯ್ಯ ಅವರ ಜೊತೆಗೆ ಲೋಕೋಪಯೋಗಿ ಸಚಿವ ಮಹದೇವ ಪ್ರಸಾದ್ಸಹ ಸಿಎಂ ಜೊತೆಗಿದ್ದರು. ಸಿಎಂ ಸ್ಥಾನಕ್ಕೇರಿದ ಬಳಿಕ ಮೊದಲ ಬಾರಿಗೆ ತಿರುಮಲಕ್ಕೆ ಭೇಟಿ ನೀಡಿದ್ದಾರೆ. [ಸಂಕಷ್ಟ ನಿವಾರಣೆಗಾಗಿ ತಿಮ್ಮಪ್ಪನಿಗೆ ಡಿವಿಎಸ್ ಮೊರೆ]
ಅದರೆ, ತಿರುಮಲಕ್ಕೆ ಭೇಟಿ ನೀಡುವ ಬಗ್ಗೆ ಎಂದೋ ನಿಶ್ಚಯಿಸಲಾಗಿತ್ತು. ಮನೆಯವರ ಹರಕೆ, ವಿವಾಹ ವಾರ್ಷಿಕೋತ್ಸವದ ದಿನ ತಿಮ್ಮಪ್ಪನನ್ನು ಕಾಣಬೇಕು ಎಂದರು ಹೀಗಾಗಿ ಬಿಡುವು ಮಾಡಿಕೊಂಡು ಬಂದಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ತಿರುಪತಿ ಭೇಟಿ ಚಿತ್ರಗಳು ಇಲ್ಲಿವೆ....
ದೇಗುಲ ಪ್ರದಕ್ಷಿಣೆ, ವಿಶೇಷ ಪೂಜೆ ಸಲ್ಲಿಕೆ
ನಾಡಿನ ಏಳಿಗೆಗಾಗಿ ಸಿದ್ದರಾಮಯ್ಯ ಅವರು ತಿರುಮಲ ತಿರುಪತಿ ದೇಗುಲಕ್ಕೆ ಮುಂಜಾನೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಅವರ ಜೊತೆಗೆ ಸಚಿವರು ಹಾಗೂ ಅಧಿಕಾರಿಗಳು ಕಂಡು ಬಂದರು.
ತಿಮ್ಮಪ್ಪನ ದರ್ಶನದ ನಂತರ ಗ್ರೂಪ್ ಫೋಟೋ
ತಿಮ್ಮಪ್ಪನ ದರ್ಶನದ ನಂತರ ಗ್ರೂಪ್ ಫೋಟೋಗೆ ಸಿಎಂ ಸಿದ್ದರಾಮಯ್ಯ ಅವರು ಪೋಸ್ ನೀಡಿದ್ದು ಹೀಗೆ. ಸಿದ್ದರಾಮಯ್ಯ ಅವರ ಜೊತೆಗೆ ಸಚಿವ ಮಹದೇವ ಪ್ರಸಾದ್ ಹಾಗೂ ಟಿಟಿಡಿ ಹಿರಿಯ ಅಧಿಕಾರಿಗಳಿದ್ದರು.
ಟಿಟಿಡಿ ವತಿಯಿಂದ ಸಿಎಂ ಸಿದ್ದುಗೆ ಸ್ಮರಣಿಕೆ
ಟಿಟಿಡಿ ವತಿಯಿಂದ ಸಿಎಂ ಸಿದ್ದರಾಮಯ್ಯ ಅವರಿಗೆ ಸ್ಮರಣಿಕೆ, ಆಶೀರ್ವಾದ ರೂಪದಲ್ಲಿ ಅವರ ಪತ್ನಿಗೆ ಕುಂಕುಮ, ಅರಿಶಿನ, ಶ್ರೀವಾರಿ ಪ್ರಸಾದ, ಕ್ಯಾಲೆಂಡರ್, ವಸ್ತ್ರ, ವೇದ ಮಂತ್ರಗಳಿರುವ ಪುಸ್ತಕವನ್ನು ನೀಡಲಾಯಿತು.
ಕನ್ನಡಿಗ ಪ್ರವಾಸಿಗರ ಬಗ್ಗೆ ಸಿಎಂ ಸಿದ್ದು
ತಿರುಮಲ ತಿರುಪತಿಗೆ ಆಗಮಿಸುವ ಕನ್ನಡಿಗ ಪ್ರವಾಸಿಗರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಟಿಟಿಡಿ ಅಧಿಕಾರಿಗಳ ಬಳಿ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು. ಬಸ್ ಸೌಕರ್ಯ, ವಸತಿ ವ್ಯವಸ್ಥೆಯ ವಿವರ ಪಡೆದುಕೊಂಡರು.
ಟಿಟಿಡಿ ಅಧಿಕಾರಿಗಳ ಉಪಸ್ಥಿತಿ, ಕಾಳಜಿ
ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಂದು ಹೋಗುವ ತನಕ ಟಿಟಿಡಿ ಹಿರಿಯ ಅಧಿಕಾರಿಗಳು ಅವರ ಜೊತೆಯಲ್ಲಿದ್ದರು. ದಾಮೋದರನ್, ಉಪ ಕಾರ್ಯಕಾರಿ ಅಧಿಕಾರಿ ರಾಮರಾವ್, ಸೆಲ್ವಂ ಮುಂತಾದವರು ಸಿದ್ದರಾಮಯ್ಯ ಅವರ ಯೋಗಕ್ಷೇಮ ನೋಡಿಕೊಂಡರು.