ಪಶುವೈದ್ಯೆ ಅತ್ಯಾಚಾರಿಗಳ ಮೃತದೇಹಕ್ಕೆ 2ನೇ ಬಾರಿ ಮರಣೋತ್ತರ ಪರೀಕ್ಷೆ
ಹೈದ್ರಾಬಾದ್, ಡಿಸೆಂಬರ್.22: ಹೈದ್ರಾಬಾದ್ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗಳನ್ನು ನಕಲಿ ಎನ್ ಕೌಂಟರ್ ಮೂಲಕ ಹತ್ಯೆಗಯ್ಯಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ಮೃತದೇಹವನ್ನು ಎರಡನೇ ಬಾರಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಹೈಕೋರ್ಟ್ ಆದೇಶಿಸಿದೆ.
ತೆಲಂಗಾಣ ಹೈಕೋರ್ಟ್ ಆದೇಶದ ಬೆನ್ನಲ್ಲೇ ನಾಲ್ವರು ಆರೋಪಿಗಳ ಮೃತದೇಹವನ್ನು ಎರಡನೇ ಬಾರಿ ಮರಣೋತ್ತರ ಪರೀಕ್ಷೆ ನಡೆಸಲು ಏಮ್ಸ್ ಆಸ್ಪತ್ರೆಯು ತಜ್ಞವೈದ್ಯರ ತಂಡವನ್ನು ರಚಿಸಲಾಗಿದೆ. ಆಲ್ ಇಂಡಿಯಾ ಇನ್ಸ್ ಟಿಟ್ಯೂಟ್ಸ್ ಆಫ್ ಮೆಡಿಕಲ್ ಸೈನ್ಸ್ (AIIMS)ನ ವಿಧಿವಿಜ್ಞಾನ ವಿಭಾಗದ ಮೂವರು ವೈದ್ಯರು ಈ ತಂಡದಲ್ಲಿದ್ದಾರೆ.
ಹೈದರಾಬಾದ್ ಎನ್ಕೌಂಟರ್; ಮತ್ತೊಮ್ಮೆ ಮರಣೋತ್ತರ ಪರೀಕ್ಷೆಗೆ ಆದೇಶ
ಡಾ.ಸುಧೀರ್ ಗುಪ್ತಾ ನೇತೃತ್ವದ ತಂಡವು ನಾಲ್ವರು ಆರೋಪಿಗಳ ಮೃತದೇಹವನ್ನು ಎರಡನೇ ಬಾರಿ ಮರಣೋತ್ತರ ಪರೀಕ್ಷೆಗೊಳಪಡಿಸಲಿದ್ದಾರೆ. ಇನ್ನು, ಈ ತಂಡದಲ್ಲಿ ವಿಧಿವಿಜ್ಞಾನ ವಿಭಾಗದ ಡಾ.ಆದರ್ಶ್ ಕುಮಾರ್, ಡಾ.ಅಭಿಷೇಕ್ ಯಾದವ್ ಹಾಗೂ ಡಾ.ವರುಣ್ ಚಂದ್ರ ಸೇರಿದ್ದಾರೆ.
ಎರಡನೇ ಬಾರಿ ಮರಣೋತ್ತರ ಪರೀಕ್ಷೆಗೆ ತಯಾರಿ
ಎನ್ ಕೌಂಟರ್ ನಲ್ಲಿ ಪ್ರಾಣ ಬಿಟ್ಟಿರುವ ನಾಲ್ವರು ಆರೋಪಿಗಳ ಮೃತದೇಹವನ್ನು ಡಿಸೆಂಬರ್.23ರ ಸೋಮವಾರ ಮರಣೋತ್ತರ ಪರೀಕ್ಷೆಗೊಳಪಡಿಸಲು ವೈದ್ಯರ ತಂಡವು ತಯಾರಿ ನಡೆಸಿದೆ. ಹೈದ್ರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಬಾನುವಾರವೇ ಹೈದ್ರಾಬಾದ್ ಗೆ ವೈದ್ಯರ ತಂಡ ಪ್ರಯಾಣ
ಸೋಮವಾರ ನಾಲ್ವರು ಆರೋಪಿಗಳ ಮೃತದೇಹ ಮರಣೋತ್ತರ ಪರೀಕ್ಷೆ ನಡೆಸಲಿರುವ ವೈದ್ಯ ತಂಡ ಇನ್ನೇನು ಸಂಜೆ ವೇಳೆಗೆ ತೆಲಂಗಾಣಕ್ಕೆ ತೆರಳಲಿದೆ. ಡಿಸೆಂಬರ್.23ರಂದು ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ತಿಳಿದು ಬಂದಿದೆ.
10 ಗಂಟೆ ಸ್ಪಾಟ್ ನಲ್ಲಿ ಬಿದ್ದಿದ್ದವು ಅತ್ಯಾಚಾರಿಗಳ ಮೃತದೇಹ!
ಡಿಸೆಂಬರ್.23ರೊಳಗೆ ವರದಿಗೆ ಹೈಕೋರ್ಟ್ ಸೂಚನೆ
ಹೈದ್ರಾಬಾದ್ ಪೊಲೀಸರು ನಕಲಿ ಎನ್ ಕೌಂಟರ್ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಈ ಸಂಬಂಧ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಡಿಸೆಂಬರ್.6ರಂದೇ ಮೊದಲ ಬಾರಿಗೆ ನಾಲ್ವರು ಆರೋಪಿಗಳ ಮೃತದೇಹವನ್ನು ಮೆಹಬೂಬ್ ನಗರ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಯಿತು. ಇತ್ತೀಚಿಗೆ ಮತ್ತೆ ವಿಚಾರಣೆ ನಡೆಸಿದ ಹೈಕೋರ್ಟ್, ಡಿಸೆಂಬರ್.23ರ ಸಂಜೆ 5 ಗಂಟೆಯೊಳಗೆ ಮರಣೋತ್ತರ ಪರೀಕ್ಷೆ ನಡೆಸಿ, ವರದಿಯನ್ನು ಹೈಕೋರ್ಟ್ ರಿಜಿಸ್ಟರ್ ಜನರಲ್ ಗೆ ನೀಡುವಂತೆ ಕೋರ್ಟ್ ಸೂಚನೆ ನೀಡಿದೆ.
ಎನ್ ಕೌಂಟರ್ ನಲ್ಲಿ ನಾಲ್ವರು ಆರೋಪಿಗಳು ಸಾವು
ಕಳೆದ ಡಿಸೆಂಬರ್.05ರ ಗುರುವಾರ ವಿಚಾರಣೆ ನಡೆಸಲೆಂದು ಪೊಲೀಸರು ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದರು. ಪ್ರಕರಣದ ತನಿಖೆ ನಡೆಸುತ್ತಿದ್ದ ವಿಶ್ವನಾಥ್ ಸಜ್ಜನರ್ ನೇತೃತ್ವದ ಅಧಿಕಾರಿಗಳ ತಂಡ ವಿಚಾರಣೆ ಬಳಿಕ ಆರೋಪಿ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ ಮತ್ತು ಚಿಂತಕುಂಟಾ ಚನ್ನಕೇಶವುಲುವನ್ನು ಸ್ಥಳ ಪರಿಶೀಲನೆಗೆ ಕರೆದುಕೊಂಡು ಹೋಗಿತ್ತು. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ಆರೋಪಿಗಳು ಪರಾರಿಯಾಗಲು ಯತ್ನಿಸಿದರು. ಬೆಳಗ್ಗೆ 3.30ರ ವೇಳೆಗೆ ಹೈದರಾಬಾದ್ ಹೊರವಲಯದ ಚಟಾನ್ ಪಲ್ಲಿ ಬ್ರಿಡ್ಜ್ ಬಳಿ ಪೊಲೀಸರು ನಡೆಸಿದ ಎನ್ ಕೌಂಟರ್ನಲ್ಲಿ ನಾಲ್ವರು ಆರೋಪಿಗಳು ಬಲಿಯಾಗಿದ್ದರು.
ಇಲ್ಲಿ ತೆಲಂಗಾಣ ಪೊಲೀಸರು ನಡೆಸಿದ್ದು ನಕಲಿ ಎನ್ ಕೌಂಟರ್ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ತೆಲಂಗಾಣ ಹೈಕೋರ್ಟ್ ನಾಲ್ವರು ಆರೋಪಿಗಳ ಮೃತದೇಹವನ್ನು ಎರಡನೇ ಬಾರಿ ಮರಣೋತ್ತರ ಪರೀಕ್ಷೆಗೊಳಪಡಿಸಿ ನಂತರದಲ್ಲಿ ಅವುಗಳನ್ನು ಸಂಬಂಧಿಕರಿಗೆ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.