ಬಾಂಬ್ ಸ್ಫೋಟ: ಅಸಾದುಲ್ಲಾ ಹೈದರಾಬಾದಿಗೆ ಶಿಫ್ಟ್
ನವದೆಹಲಿ, ಸೆ. 14: ಫೆಬ್ರವರಿ 21ರಂದು ಸಂಭವಿಸಿದ ಹೈದರಾಬಾದ್ ಅವಳಿ ಸ್ಫೋಟದಲ್ಲಿ ಬಾಂಬ್ ಇಟ್ಟಿದ್ದು ಇಂಡಿಯನ್ ಮುಜಾಹಿದ್ದೀನ್ (IM) ಭಯೋತ್ಪಾದಕ ಸಂಘಟನೆಯ ನಾಯಕ ಯಾಸಿನ್ ಭಟ್ಕಳನೇ ಎಂದು ರಾಷ್ಟ್ರೀಯ ತನಿಖಾ ದಳವು (NIA) ಘಟನೆ ನಡೆದ ಎರಡೇ ತಿಂಗಳಲ್ಲಿ ನಿಖರವಾಗಿ ಅಂದಾಜಿಸಿತ್ತು.
ಅದು ಇತ್ತೀಚೆಗೆ ಯಾಸಿನ್ ಭಟ್ಕಳ ಮತ್ತು ಅವನ ಪರಮಾಪ್ತ ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿನನ್ನು ಇತ್ತೀಚೆಗೆ (ಆಗಸ್ಟ್ 28ರಂದು) ಬಂಧಿಸಿರುವ NIA, ತನ್ನ ತರ್ಕದಲ್ಲಿ ಹುರುಳಿದೆ ಎಂಬುದನ್ನು ಸಾಬೀತುಪಡಿಸಿದೆ. ಏಕೆಂದರೆ ಈ ಇಬ್ಬರೂ ಹೈದರಾಬಾದ್ ಅವಳಿ ಸ್ಫೋಟ ಕೃತ್ಯ ತಮ್ಮದೇ ಎಂದು ಒಪ್ಪಿಕೊಂಡಿದ್ದಾರೆ. (ಇದನ್ನೂ ಓದಿ)
ಹಾಗಾಗಿಯೇ ಅಸಾದುಲ್ಲಾ ಅಖ್ತರನನ್ನು ಇಂದು ಶನಿವಾರ ರಾಷ್ಟ್ರೀಯ ತನಿಖಾ ದಳದ ಉನ್ನತಾಧಿಕಾರಿಗಳು ಸ್ಫೋಟದ ಸ್ಥಳಕ್ಕೆ ಕರೆದೊಯ್ದು ಬೆಂಡೆತ್ತುತ್ತಿದ್ದಾರೆ. ಕುಳ ಮತ್ತಷ್ಟು ಸ್ಫೋಟಕ ಮಾಹಿತಿಗಳ ಬಗ್ಗೆ ಬಾಯ್ಬಿಡುತ್ತಿದೆ.
ಅಂದಹಾಗೆ ಅವಳಿ ಸ್ಫೋಟದಲ್ಲಿ ಬಾಂಬ್ ಇಟ್ಟವರ ಪೈಕಿ ಒಬ್ಬ ಕರ್ನಾಟಕದ ಸಯ್ಯದ್ ಅಹಮದ್ ಝರಾರ್ ಸಿದ್ದಿಬಪ್ಪಾ ಅಲಿಯಾಸ್ ಯಾಸಿನ್ ಭಟ್ಕಳನೇ ಎಂದು CCTV ದೃಶ್ಯಾವಳಿಗಳನ್ನು ಆಧರಿಸಿ NIA ತಿಳಿಸಿತ್ತು.
ದಿಲ್ ಸುಖ್ ನಗರದ ಬಸ್ ಸ್ಟಾಂಡಿನಲ್ಲಿ ಅಂದು ಏನಾಯಿತೆಂದರೆ ವ್ಯಕ್ತಿಯೊಬ್ಬ ಬಾಂಬ್ ತುಂಬಿರುವ ಚೀಲವನ್ನು ಕೈಯಲ್ಲಿ ಹಿಡಿದುರುವುದು CCTVಯಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ. ಮತ್ತು ಅವನು ಯಾಸಿನ್ ಭಟ್ಕಳನೇ ಹೌದು ಎಂದು ಪೊಲೀಸರು ಖಚಿತವಾಗಿ ತರ್ಕಿಸಿದ್ದರು. (ಇದನ್ನೂ ಓದಿ)
ಇನ್ನು ಮತ್ತೊಂದು ಸ್ಫೋಟದಲ್ಲಿ ಸೈಕಲಿನಲ್ಲಿ ಬಾಂಬ್ ಸಾಗಿಸಿಟ್ಟವನು ಅಸಾದುಲ್ಲಾ ಅಖ್ತರ್ ಅಲಿಯಾಸ್ ಹಡ್ಡಿ ಎಂದೂ ಹೇಳಿದ್ದರು. ಅಸಾದುಲ್ಲಾ ಅಖ್ತರ್ ಅಜಂನಗರದ ನಿವಾಸಿ. 2008 ರಲ್ಲಿ ಇವನು ಪರಾರಿಯಾಗಿದ್ದ.
ಹೈದರಾಬಾದಿನ ದಿಲ್ ಸುಖ್ ನಗರ್ ಮಾರುಕಟ್ಟೆ ಪ್ರದೇಶದಲ್ಲಿ ನಡೆದ ಅವಳಿ ಸ್ಫೋಟದಲ್ಲಿ 18 ಮಂದಿಯನ್ನು ಬಲಿಯಾಗಿದ್ದರು. ಅದನ್ನು ನಡೆಸಿದ್ದು ಇಂಡಿಯನ್ ಮುಜಾಹಿದ್ದೀನ್. ಈ ಬಗ್ಗೆ ನಮ್ಮ ಬಳಿ ಬಲವಾದ ಸಾಕ್ಷ್ಯ ಆಧಾರಗಳು ಇವೆ. ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಆದರೆ ಶೀಘ್ರವೇ ಬಂಧಿಸಲಾಗುವುದು. ಇದಕ್ಕೆ ರಿಯಾಜ್ ಭಟ್ಕಳ ಮತ್ತು ಇಕ್ಬಾಲ್ ಭಟ್ಕಳ ನೆರವಾಗಿದ್ದಾರೆ ಎಂದು ಗೃಹ ಸಚಿವಾಲಯಕ್ಕೆ NIA ಏಪ್ರಿಲ್ಲಿನಲ್ಲೇ ತಿಳಿಸಿತ್ತು ಎಂಬುದು ಗಮನಾರ್ಹ.