ಮದುವೆ ವಿಳಂಬದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾದ ಟೆಕ್ಕಿ
ಹೈದರಾಬಾದ್, ಫೆಬ್ರವರಿ 13: ಉತ್ತಮ ಕೆಲ್ಸ, ಕೈ ತುಂಬಾ ಸಂಬಳ, ಅಪ್ಪ- ಅಮ್ಮನ ಪ್ರೀತಿ ಎಲ್ಲವನ್ನು ಹೊಂದಿದ್ದ ಯುವ ಸಾಫ್ಟ್ ವೇರ್ ಇಂಜಿನಿಯರ್ ಗೆ ಇನ್ನೂ 24ರ ಹರೆಯ. ಆದರೆ, ನೇಣಿಗೆ ಶರಣಾಗಿದ್ದಾನೆ. ಮದುವೆ ವಿಳಂಬವಾಗಿದ್ದೇ ಕಾರಣ ಎಂದು ತಿಳಿದು ಬಂದಿದೆ.
ಉಪ್ಪಳ್ ನಲ್ಲಿರುವ ಮನೆಯಲ್ಲಿ ಪಿ ನಿಖಿಲ್ ಗೌಡ್ ನೇಣಿಗೆ ಶರಣಾಗಿದ್ದಾರೆ. ರಾಮನಾಥ ಪುರ ಮನೆಯ ಬಳಿಯೇ ಇದ್ದ ಸಾಫ್ಟ್ ವೇರ್ ಸಂಸ್ಥೆಯಲ್ಲಿ ನಿಖಿಲ್ ಕಾರ್ಯ ನಿರ್ವಹಿಸುತ್ತಿದ್ದ.
ಎರಡು ವರ್ಷಗಳ ಹಿಂದೆ ನಿಖಿಲ್ ಹಿರಿಯಕ್ಕನ ಮದುವೆಯಾಗಿತ್ತು. ನಂತರ ಮದುವೆ ಮಾಡಿಸುವಂತೆ ತಂದೆ -ತಾಯಿಯನ್ನು ಕೇಳಿದ್ದ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ನಿಖಿಲ್ ತಂದೆ ರಾಮಮೋಹನ್ ಗೌಡ್, ನಿನಗಿನ್ನೂ ಚಿಕ್ಕ ವಯಸ್ಸು ಇನ್ನೊಂದೆರಡು ವರ್ಷ ಹೋಗಲಿ, ಮೊದಲು ವೃತ್ತಿ ಬದುಕಿನತ್ತ ಗಮನಹರಿಸು ಎಂದು ಬುದ್ಧಿವಾದ ಹೇಳಿದ್ದಾರೆ. ಆದರೆ, ಇದಕ್ಕೊಪ್ಪದ ನಿಖಿಲ್, ಪದೇ ಪದೇ ಮದುವೆ ಬಗ್ಗೆ ಮಾತುಕತೆ ಮಾಡಿ ವಿಫಲನಾಗಿದ್ದರಿಂದ ಖಿನ್ನತೆಗೊಳಗಾಗಿದ್ದ.
ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ ರೂಮಿನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಪ್ಪಳ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿದಾಗ, ಮದುವೆಯಾಗದಿರುವುದಕ್ಕೆ ನಿಖಿಲ್ ಚಿಂತೆಗೊಳಗಾಗಿದ್ದ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಯಾವುದೇ ಸೂಸೈಡ್ ನೋಟ್ ಸಿಕ್ಕಿಲ್ಲ, ಆತನ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು, ವಿಧಿ ವಿಜ್ಞಾನ ಸಂಸ್ಥೆಗೆ ಕಳಿಸಲಾಗಿದೆ. ಮರಣೋತ್ತರ ಪರೀಕ್ಷೆ ನಂತರ ಹೆಚ್ಚಿನ ವಿಷಯ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.