ಪತ್ನಿಯ ಹತ್ಯೆ ಮಾಡಿದ್ದ ಟೆಕ್ಕಿ- ತಂದೆ ತಾಯಿ ಅರೆಸ್ಟ್
ನಗರದ ಚಿಕ್ಕಡಪಲ್ಲಿಯಲ್ಲಿರುವ ಬೃಂದಾವನ್ ಕಾಲನಿಯ ಶಾಂತಿ ನಿಲಯ ಅಪಾರ್ಟ್ ಮೆಂಟ್ ನಿವಾಸಿ ಬಾಲಕೃಷ್ಣ ಪ್ರತಿಷ್ಠಿತ ಬಂಜಾರಾ ಹಿಲ್ಸ್ ನಲ್ಲಿರುವ Karvy Consultancyಯಲ್ಲಿ ಟೆಕ್ಕಿಯಾಗಿದ್ದಾನೆ. ಶನಿವಾರ ಬೆಳಗ್ಗೆ ಬಾಲಕೃಷ್ಣ ತನ್ನ ಪತ್ನಿ 35 ವರ್ಷದ ರಜನಿಯನ್ನು ಚಾಕುವಿನಿಂದ ತಿವಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಆರೋಪಿಸಿದ್ದಾರೆ.
ಪ್ರಕರಣದ ಸಂಬಂಧ ಟೆಕ್ಕಿ ಬಾಲಕೃಷ್ಣ ಸೇರಿದಂತೆ ಒಟ್ಟು 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ದಿಕ್ಕು ತಪ್ಪಿಸಲು ಮಾಟ-ಮಂತ್ರದ ಹೆಸರಿನಲ್ಲಿ ರಜನಿಯನ್ನು ಸಾಯಿಸಲಾಗಿದೆ ಎಂದು ಬಿಂಬಿಸುವಂತೆ ಆಕೆಯ ಶವದ ಪಕ್ಕದಲ್ಲಿ ಹರಿಶಿನ-ಕುಂಕುಮ ಚೆಲ್ಲಲಾಗಿತ್ತು. ಆದರೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರು ರಜನಿ ಪತಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದಾಗ ಟೆಕ್ಕಿ ಬಾಲಕೃಷ್ಣ ಪ್ರೇಮ ಪ್ರಸಂಗ ಬಯಲಿಗೆ ಬಂದಿದೆ.
'ಸಹೋದ್ಯೋಗಿಯ ಜತೆ ನನಗೆ ಅಕ್ರಮ ಸಂಬಂಧವಿತ್ತು. ಅದು ಪತ್ನಿ ರಜನಿಗೆ ಗೊತ್ತಾಯಿತು. ಅವಳಿಂದ ದೂರವಾಗಿವಂತೆ ರಜನಿ ನನಗೆ ಬುದ್ಧಿವಾದ ಹೇಳತೊಡಗಿದಳು. ಆಗ ಮನೆಯವರೊಂದಿಗೆ ವ್ಯವಸ್ಥಿವಾಗಿ ಪ್ಲಾನ್ ಮಾಡಿ ಹತ್ಯೆ ಮಾಡಿದೆವು. ರಜನಿ ಹೆಚ್ಚು ವರದಕ್ಷಿಣೆ ತಂದಿರಲಿಲ್ಲವೆಂದು ನನ್ನ ಮನೆಯವರೂ ಅವಳ ಬಗ್ಗೆ ಅಸಮಾಧಾನಗೊಂಡಿದ್ದರು' ಎಂದು ವಿಚಾರಣೆ ವೇಳೆ ಟೆಕ್ಕಿ ಬಾಲಕೃಷ್ಣ ಬಾಯ್ಬಿಟ್ಟಿದ್ದಾನೆ.
'ಪೂರ್ವಯೋಜನೆಯಂತೆ ಶುಕ್ರವಾರ ರಾತ್ರಿಯೇ ರಜನಿ ಹತ್ಯೆಗೆ ಮಹೂರ್ತವಿಡಲಾಗಿತ್ತು. ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಹಾಕಿ ಅವಳಿಗೆ ನೀಡಲಾಗಿತ್ತು. ಅವಳು ಪ್ರಜ್ಞೆ ತಪ್ಪುತ್ತಿದ್ದಂತೆ ಪತಿರಾಯ ಟೆಕ್ಕಿ ಬಾಲಕೃಷ್ಣನೇ ತನ್ನ ಪತ್ನಿಯನ್ನು ಕತ್ತು ಸೀಳಿ, ಬೆನ್ನು-ಹೊಟ್ಟೆಗೆ ತಿವಿದು ಸಾಯಿಸಿದ್ದಾನೆ. ಇದಕ್ಕೆ ಮನೆಯವರೂ ಸಹಕಾರ ನೀಡಿದ್ದಾರೆ. ಪ್ರಕರಣದ ದಿಕ್ಕು ತಪ್ಪಿಸಲು ಮಾಟ-ಮಂತ್ರ ಪ್ರಯೋಗ ಮಾಡಿದ್ದಾರೆ' ಎಂದು ಚಿಕ್ಕಡಪಲ್ಲಿ ಇನ್ಸ್ ಪೆಕ್ಟರ್ ಪಿ ಶ್ರೀಧರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.