ಹೈದರಾಬಾದ್; ಆರೋಪಿಗಳ ಶವ ಕುಟುಂಬಕ್ಕೆ ಹಸ್ತಾಂತರ
ಹೈದರಾಬಾದ್, ಡಿಸೆಂಬರ್ 23 : ಹೈದರಾಬಾದ್ನಲ್ಲಿ ಪೊಲೀಸ್ ಎನ್ ಕೌಂಟರ್ನಲ್ಲಿ ಮೃತಪಟ್ಟ ಆರೋಪಿಗಳ ಶವಗಳನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ. ಡಿಸೆಂಬರ್ 6ರಂದು ನಾಲ್ವರು ಆರೋಪಿಗಳು ಮೃತಪಟ್ಟಿದ್ದರು.
ತೆಲಂಗಾಣ ಹೈಕೋರ್ಟ್ ಆದೇಶದಂತೆ ದೆಹಲಿಯ ಏಮ್ಸ್ ವೈದ್ಯರ ತಂಡ ಸೋಮವಾರ ಶವಗಳ ಮರು ಮರಣೋತ್ತರ ಪರೀಕ್ಷೆ ನಡೆಸಿತು. ಬಳಿಕ ಶವಗಳನ್ನು ಪೊಲೀಸರ ಸಮ್ಮುಖದಲ್ಲಿ ಕುಟುಂಬದವರಿಗೆ ಹಸ್ತಾಂತರ ಮಾಡಲಾಯಿತು.
ಹೈದರಾಬಾದ್ ಎನ್ ಕೌಂಟರ್; ಪೊಲೀಸರಿಗೆ ಹೊಸ ಸಂಕಷ್ಟ!
27 ವರ್ಷದ ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಜೀವಂತವಾಗಿ ಸುಟ್ಟು ಹಾಕಲಾಗಿತ್ತು. ಈ ಪ್ರಕರಣದ ಆರೋಪಿಗಳಾದ ಮೊಹಮ್ಮದ್ ಆರಿಫ್, ಜೊಲ್ಲಾ ನವೀನ್, ಜೊಲ್ಲಾ ಶಿವ, ಚಿಂತಾಕುಂಟಾ ಕೇಶವಲು ಡಿಸೆಂಬರ್ 6 ರಂದು ಪೊಲೀಸ್ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದರು.
ಪಶುವೈದ್ಯೆ ಮೇಲೆ ಅತ್ಯಾಚಾರ, ಕೊಲೆ; ಎನ್ ಕೌಂಟರ್ ನಡೆದಿದ್ದು ಹೇಗೆ?
ಸುಪ್ರೀಂಕೋರ್ಟ್ ಮತ್ತು ತೆಲಂಗಾಣ ಹೈಕೋರ್ಟ್ ಶವಗಳನ್ನು ಸಂರಕ್ಷಿಸಿ ಇಡುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿತ್ತು. ಈ ಎನ್ಕೌಂಟರ್ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಸುಪ್ರೀಂಕೋರ್ಟ್ ಈ ಬಗ್ಗೆ ತನಿಖೆ ನಿವೃತ್ತ ನ್ಯಾಯಮೂರ್ತಿಗಳ ಸ್ವತಂತ್ರ ತನಿಖೆಗೆ ನಿರ್ದೇಶನ ನೀಡಿತ್ತು.
ಅತ್ಯಾಚಾರ ಆರೋಪಿಗಳ ಎನ್ಕೌಂಟರ್: ಸುಪ್ರೀಂಕೋರ್ಟ್ ಮಹತ್ವದ ನಿರ್ಧಾರ
ತೆಲಂಗಾಣ ಹೈಕೋರ್ಟ್ ಶವಗಳ ಮರು ಮರಣೋತ್ತರ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿತ್ತು. ದೆಹಲಿಯ ಏಮ್ಸ್ ವೈದ್ಯರ ತಂಡ ಸೋಮವಾರ ಮರಣೋತ್ತರ ಪರೀಕ್ಷೆ ಮುಗಿಸಿದ್ದು, ಶವಗಳನ್ನು ಕುಟುಂಬಕ್ಕೆ ನೀಡಲಾಗಿದೆ.
ನವೆಂಬರ್ 27ರಂದು ಪಶುವೈದ್ಯೆಯನ್ನು ಅಪಹರಣ ಮಾಡಿದ್ದ ಆರೋಪಿಗಳು ಸಾಮೂಹಿಕ ಅತ್ಯಾಚಾರ ನಡೆಸಿ ಜೀವಂತವಾಗಿ ಸುಟ್ಟು ಹಾಕಿದ್ದರು.ನವೆಂಬರ್ 28ರಂದು ಆಕೆಯ ಶವ ಪತ್ತೆಯಾಗಿತ್ತು. ನವೆಂಬರ್ 29ರಂದು ಆರೋಪಿಗಳನ್ನು ಬಂಧಿಸಲಾಗಿತ್ತು.
ಡಿಸೆಂಬರ್ 6ರಂದು ಸ್ಥಳದ ಮಹಜರು ಮಾಡಲು ಆರೋಪಿಗಳನ್ನು ಕರೆದುಕೊಂಡು ಹೋಗಲಾಗಿತ್ತು. ಆಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಲು ಪ್ರಯತ್ನ ನಡೆಸಿದ್ದರು. ಪೊಲೀಸರು ಗುಂಡಿನ ದಾಳಿ ನಡೆಸಿದಾಗ ನಾಲ್ವರು ಸಹ ಸ್ಥಳದಲ್ಲಿಯೇ ಮೃತಪಟ್ಟಿದ್ದರು.