'ವಂಶ ರಾಜಕೀಯ ಕೊನೆಗೊಳಿಸಲು ಇದು ಸಮಯ'- ಪ್ರಧಾನಿ ನರೇಂದ್ರ ಮೋದಿ
ಹೈದರಾಬಾದ್ ಮೇ 26: ತೆಲಂಗಾಣ ಜನರು ವಂಶಾಡಳಿತ ರಾಜಕಾರಣವನ್ನು ತೊಡೆದುಹಾಕಲು ಸಮಯ ಬಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್)ಯನ್ನು ಗುರಿಯಾಗಿಸಿಕೊಂಡ ಅವರು ಜನರಿಗಾಗಿ ಕೆಲಸ ಮಾಡುವ ಸರ್ಕಾರವನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ಹೈದರಾಬಾದ್ನ ಬೇಗಂಪೇಟ್ ವಿಮಾನ ನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಮುಂಬರುವ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಬಿಜೆಪಿ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ ಎಂದಿದ್ದಾರೆ.
ಮೋದಿ ಭೇಟಿ ವೇಳೆ ಎರಡನೇ ಬಾರಿ ಗೈರಾಗಲಿರುವ ಕೆಸಿಆರ್
"ಕುಟುಂಬ ರಾಜಕಾರಣವು ಉತ್ಸಾಹಿ ಯುವಕರನ್ನು ರಾಜಕೀಯಕ್ಕೆ ಬರಲು ಬಿಡುವುದಿಲ್ಲ. ಅವರು ಅವಕಾಶಗಳಿಂದ ವಂಚಿತರಾಗಿದ್ದಾರೆ. ಇದು 21ನೇ ಶತಮಾನವಾಗಿದ್ದು, ತೆಲಂಗಾಣದಲ್ಲೂ ವಂಶಾಡಳಿತ ರಾಜಕಾರಣವನ್ನು ತೊಲಗಿಸಬೇಕು. ಎಲ್ಲೆಲ್ಲಿ ವಂಶಾಡಳಿತ ರಾಜಕಾರಣ ಅಳಿದು ಹೋಗಿದೆಯೋ ಅಲ್ಲೆಲ್ಲ ಅಭಿವೃದ್ಧಿ ಮತ್ತು ಬೆಳವಣಿಗೆ ಆಗಿದೆ. ಕುಟುಂಬ ರಾಜಕಾರಣ ಪ್ರಜಾಪ್ರಭುತ್ವಕ್ಕೆ ಅಪಾಯವಾಗಿದ್ದು, 'ಪರಿವಾರಿ ಪಕ್ಷ' ಅಧಿಕಾರಕ್ಕೆ ಬಂದ ತಕ್ಷಣ ಭ್ರಷ್ಟರಾಗುತ್ತಾರೆ. ಕುಟುಂಬವು ಸಾಧ್ಯವಾದಷ್ಟು ಕಾಲ ಅಧಿಕಾರವನ್ನು ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುತ್ತದೆ, "ಎಂದು ಹೇಳಿದ ಮೋದಿ ಮಾತು ಅವರನ್ನು ಸ್ವಾಗತಿಸಲು ನೆರೆದಿದ್ದ ಪಕ್ಷದ ನೂರಾರು ಕಾರ್ಯಕರ್ತರ ಘರ್ಜನೆಗೆ ಸಾಕ್ಷಿಯಾಯಿತು.
ತೆಲಂಗಾಣದ ಜನತೆಗಾಗಿ ಸ್ವಾಭಿಮಾನದ ಯುದ್ಧ-ಮೋದಿ
ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್' (ISB) 20 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಹೈದರಾಬಾದ್ನಲ್ಲಿದ್ದಾರೆ. 'ಬಿಜೆಪಿ ಮತ್ತೊಂದು ಯುದ್ಧವನ್ನು ನಡೆಸುತ್ತಿದೆ. ಇದು ತೆಲಂಗಾಣ ಜನತೆಗಾಗಿ, ಅವರ ಸ್ವಾಭಿಮಾನ ಮತ್ತು ಅವರ ಗುರುತಿಗಾಗಿ ನಡೆಯುವ ಯುದ್ಧವಾಗಿದೆ. ನಾನು ಇದೀಗ ವಿಮಾನ ನಿಲ್ದಾಣದಿಂದ ಹೊರಬಂದಾಗ, ಗಾಳಿಯಲ್ಲಿ ಬದಲಾವಣೆ ಕಂಡುಬಂದಿದೆ' ಎಂದು ಅವರು ಹೇಳಿದರು.
'ಮೂಢನಂಬಿಕೆಯ ತೆಲಂಗಾಣ ಸಿಎಂ'
ಟಿಆರ್ಎಸ್ ಸರ್ಕಾರವು ಕೇಂದ್ರದ ಯೋಜನೆಗಳನ್ನು ಮರುನಾಮಕರಣ ಮಾಡಿ ಅವುಗಳನ್ನು ತಮ್ಮದೇ ಎಂದು ಪ್ರಸ್ತುತಪಡಿಸುತ್ತಿದೆ ಎಂದು ಪ್ರಧಾನಿ ಆರೋಪಿಸಿದರು. ಜೊತೆಗೆ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರನ್ನು ಹೆಸರಿಸದೆ ತರಾಟೆಗೆ ತೆಗೆದುಕೊಂಡರು. ಕೆಲವರು ಮೂಢನಂಬಿಕೆಗಳನ್ನು ನಂಬುತ್ತಾರೆ ಮತ್ತು ಕೆಲವು ಸ್ಥಳಗಳಿಗೆ ಹೋಗುವುದಿಲ್ಲ ಎಂದು ಹೇಳಿದ ಅವರು, ರಾವ್ ಅವರು ಸೆಕ್ರೆಟರಿಯೇಟ್ಗೆ ಹೋಗುವುದನ್ನು ತಪ್ಪಿಸಿದ ಸಮಯದಲ್ಲಿ ವಾಸ್ತು ಕೆಟ್ಟದಾಗಿದೆ ಎಂದು ಭಾವಿಸಿದರು. ಅದಕ್ಕಾಗಿ ಹಳೆಯ ಕಟ್ಟಡವನ್ನು ಕೆಡವಿ ಹೊಸ ಸೆಕ್ರೆಟರಿಯೇಟ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.
'ಯೋಗಿ ಸರಳ ಸನ್ಯಾಸಿ'
ನನಗೂ ಕೆಲವು ಸ್ಥಳಗಳು ಮತ್ತು ನಗರಗಳನ್ನು ಭೇಟಿ ನೀಡುವುದನ್ನು ತಪ್ಪಿಸಲು ನನಗೆ ಸಲಹೆ ನೀಡಲಾಯಿತು ಎಂದು ಮೋದಿ ಹೇಳಿದರು. "ಆದರೆ ನಾನು ಆ ಸ್ಥಳಗಳಿಗೆ ಸಾಧ್ಯವಾದಷ್ಟು ಬಾರಿ ಭೇಟಿ ನೀಡುತ್ತೇನೆ. ನಾನು ವಿಜ್ಞಾನವನ್ನು ನಂಬುತ್ತೇನೆ, ತಂತ್ರಜ್ಞಾನವನ್ನು ನಂಬುತ್ತೇನೆ. ಮೂಢನಂಬಿಕೆಯನ್ನಲ್ಲ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನಾನು ಇಲ್ಲಿ ಉಲ್ಲೇಖಿಸಲು ಬಯಸುತ್ತೇನೆ. ಅವರು ಸರಳವಾಗಿ ಬದುಕುತ್ತಾರೆ ಮತ್ತು ಸನ್ಯಾಸಿಯಾಗಿದ್ದಾರೆ ಮತ್ತು ಕೇಸರಿ ವಸ್ತ್ರಗಳನ್ನು ಧರಿಸುತ್ತಾರೆ. ಅವರು ಅತ್ಯಂತ ಮೂಢನಂಬಿಕೆಯನ್ನು ಹೊಂದಿರಬೇಕು ಎಂದು ಯೋಚಿಸುವುದು ಸುಲಭ ಆದರೆ ನಾನು ನಿಮಗೆ ಹೇಳುತ್ತೇನೆ, ಅವರು ಸಹ ಈ ಮೂಢನಂಬಿಕೆಗಳನ್ನು ತಳ್ಳಿಹಾಕುತ್ತಾರೆ'' ಎಂದು ಹೇಳಿದರು.
ಟಿಆರ್ಎಸ್ನಿಂದ 'ಗೋ ಬ್ಯಾಕ್ ಮೋದಿ' ಪೋಸ್ಟ್
21ನೇ ಶತಮಾನದಲ್ಲಿ ಭಾರತವು ಆತ್ಮನಿರ್ಭರ್ ಭಾರತ್ ಮತ್ತು ಮೇಕ್ ಇನ್ ಇಂಡಿಯಾದ ಕನಸಿನೊಂದಿಗೆ ಮುನ್ನುಗ್ಗುತ್ತಿದೆ ಎಂದು ಪ್ರಧಾನಿ ಹೇಳಿದರು. "ಭಾರತದ ಸ್ಟಾರ್ಟ್ಅಪ್ಗಳು ಜಗತ್ತನ್ನು ಆಕರ್ಷಿಸುತ್ತಿವೆ ಮತ್ತು ಇಂದು ನಾವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾಗಿದ್ದೇವೆ. ದೇಶದ 100 ನೇ ಯುನಿಕಾರ್ನ್ ಅನ್ನು ನೋಂದಾಯಿಸಲಾಗಿದೆ" ಎಂದು ಮೋದಿ ಹೇಳಿದರು. ಆದರೆ ಟಿಆರ್ಎಸ್ ಹೈದರಾಬಾದ್ನಾದ್ಯಂತ ಪೋಸ್ಟರ್ಗಳನ್ನು ಹಾಕಿದ್ದು, ಪ್ರಧಾನಿ ಅವರ ವಿಫಲ ಭರವಸೆಗಳ ಬಗ್ಗೆ ಪ್ರಶ್ನೆಗಳನ್ನು ಹಾಕಿದೆ. ಜೊತೆಗೆ 'ಗೋ ಬ್ಯಾಕ್ ಪೋಸ್ಟ್' ಹಾಕಲಾಗಿದೆ.