ಹೈದರಾಬಾದ್ ಉಗ್ರರ ಸ್ವರ್ಗ: ಹೊಸ ಸಚಿವರ ವಿವಾದಾತ್ಮಕ ಹೇಳಿಕೆ
ಹೈದರಾಬಾದ್, ಜೂನ್ 01: ಹೈದರಾಬಾದ್ ಪಟ್ಟಣವು ಭಯೋತ್ಪಾದಕರ ನೆಚ್ಚಿನ ಅಡಗುತಾಣವಾಗಿದೆ ಎಂದು ಹೊಸದಾಗಿ ಅಧಿಕಾರ ಸ್ವೀಕರಿಸಿರುವ ಕೇಂದ್ರದ ರಾಜ್ಯ ಖಾತೆ ಮಂತ್ರಿಯೊಬ್ಬರು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ಗೃಹ ಖಾತೆಯ ರಾಜ್ಯ ಮಂತ್ರಿ ಜಿ.ಕಿಶನ್ ರೆಡ್ಡಿ ಅವರು, ಹೈದರಾಬಾದ್ ಉಗ್ರರ ಅಡಗುತಾಣವಾಗಿ ಪರಿಣಮಿಸಿದೆ ಎಂದಿದ್ದಾರೆ. ಇದು ವಿವಾದ ಹುಟ್ಟುಹಾಕಿದ್ದು, ಸಚಿವರ ಹೇಳಿಕೆಗೆ ಹೈದರಾಬಾದ್ನ ಹಲವು ಮುಖಂಡರು ವಿರೋಧ ವ್ಯಕ್ತಪಡಿಸಿದ್ದಾರೆ.
ಆದರೆ ತಮ್ಮ ಹೇಳಿಕೆಯನ್ನು ಇಂದು ಸಮರ್ಥಿಸಿಕೊಂಡಿರುವ ಕಿಶನ್ ರೆಡ್ಡಿ, ದೇಶದ ಕೆಲವು ಭಾಗಗಳಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರು ಅಥವಾ ಭೋಪಾಲ್ ನಲ್ಲಿ ಬಾಂಬ್ ಸ್ಫೋಟವಾದರೆ ಅದರ ಬೇರು ಹೈದರಾಬಾದ್ನಲ್ಲಿ ಪತ್ತೆಯಾಗುತ್ತದೆ. ರಾಜ್ಯ ಪೊಲೀಸರು ಮತ್ತು ಎನ್ಐಎ ಎರಡು-ಮೂರು ತಿಂಗಳಿಗೊಮ್ಮೆ ಉಗ್ರರನ್ನು ಬಂಧಿಸುತ್ತಲೇ ಇರುತ್ತಾರೆ ಎಂದಿರುವ ಅವರು ನಾನೇನು ತಪ್ಪು ಹೇಳಿಲ್ಲ ಎಂದಿದ್ದಾರೆ.
ತೆಲಂಗಾಣದವರಾಗಿರುವ ಕಿಶನ್ ರೆಡ್ಡಿ ಇದೇ ಮೊದಲ ಬಾರಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ತೆಲಂಗಾಣದವರಾಗಿ ತಮ್ಮದೇ ರಾಜ್ಯದ ನಗರದ ಬಗ್ಗೆ ಹೀಗೆ ಮಾತನಾಡಿದ್ದಾರೆ ಎಂದು ವಿರೋಧ ಪಕ್ಷಗಳು ಆಕ್ಷೇಪವ್ಯಕ್ತಪಡಿಸಿವೆ.
ಕಿಶನ್ ರೆಡ್ಡಿ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ, ಕಳೆದ ಐದು ವರ್ಷಗಳಿಂದ ಇಲ್ಲಿ ಶಾಂತಿ ನೆಲೆಸಿದೆ. ಇಲ್ಲಿ ಯಾವುದೇ ಕೋಮು ಗಲಭೆಗಳಾಗಲಿ, ಬೇರೆ ಯಾವುದೇ ಗಲಭೆಗಳು ನಡೆದಿಲ್ಲ. ಆದರೆ ಅವರು ಉದ್ದೇಶಪೂರ್ವಕವಾಗಿ ನಗರದ ಖ್ಯಾತಿಗೆ ಧಕ್ಕೆ ತರಲು ಈ ರೀತಿ ಹೇಳುತ್ತಿದ್ದಾರೆ ಎಂದು ಹೇಳಿದರು.
ಕಳೆದ ಐದು ವರ್ಷದಲ್ಲಿ ಎಷ್ಟು ಬಾರಿ ರಾಜ್ಯ ಪೊಲೀಸರಾಗಲಿ, ಎನ್ಐಎ ಆಗಲಿ ಹೈದರಾಬಾದ್ನಲ್ಲಿ ಉಗ್ರರನ್ನು ಎಷ್ಟು ಬಾರಿ ಬಂಧಿಸಿದೆ ಅವರು ಲೆಕ್ಕ ನೀಡಲಿ ಎಂದು ಅಸಾದುದ್ಧೀನ್ ಒವೈಸಿ ಪ್ರಶ್ನಿಸಿದರು.
ಹೈದರಾಬಾದ್ ಭಯೋತ್ಪಾದಕರ ಸ್ವರ್ಗವೆಂದು ರಾ ಅಥವಾ ಗುಪ್ತಚರ ಇಲಾಖೆಯಾಗಲಿ ಅಧಿಕೃತ ಹೇಳಿಕೆಯನ್ನೇನಾದರೂ ನೀಡಿದೆಯೇ ಎಂದು ಒವೈಸಿ ಪ್ರಶ್ನೆ ಮಾಡಿದ್ದಾರೆ.
ಗೃಹ ಮಂತ್ರಿಯಾಗಿ ಅಮಿತ್ ಶಾ ಅವರು ಅಧಿಕಾರ ವಹಿಸಿಕೊಂಡಿದ್ದು, ಅವರ ಸಹಯೋಗದಲ್ಲಿಯೇ ಜಿ.ಕಿಶನ್ ರೆಡ್ಡಿ ಅವರು ಕಾರ್ಯನಿರ್ವಹಿಸಬೇಕಿದೆ.