ಸಾಮೂಹಿಕ ವಜಾ, ಟೆಕ್ ಮಹೀಂದ್ರಕ್ಕೆ ಹೈದರಾಬಾದ್ ಹೈ ಕೋರ್ಟ್ ನೋಟಿಸ್
ಹೈದರಾಬಾದ್, ಜುಲೈ 11: ಸಾಮೂಹಿಕವಾಗಿ ಕೆಲಸದಿಂದ ತೆಗೆಯುತ್ತಿರುವ ವಿಚಾರವಾಗಿ ಹೈದರಾಬಾದ್ ಹೈ ಕೋರ್ಟ್ ಮಂಗಳವಾರ ಐಟಿ ದಿಗ್ಗಜ ಟೆಕ್ ಮಹೀಂದ್ರ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಕಾನೂನು ವಿರುದ್ಧವಾಗಿ ಸಾಮೂಹಿಕವಾಗಿ ಕೆಲಸದಿಂದ ತೆಗೆದು ಹಾಕಿದ ವಿಚಾರವಾಗಿ ಟೆಕ್ ಮಹೀಂದ್ರ ನೌಕರರು ಸಲ್ಲಿಸಿದ ಅರ್ಜಿಗೆ ಉತ್ತರ ನೀಡುವಂತೆ ಮೂರು ವಾರದ ಗಡುವು ನೀಡಲಾಗಿದೆ.
ಉದ್ಯೋಗಿಗೆ ಪಿಂಕ್ ಸ್ಲಿಪ್, ವೈರಲ್ ಆಗಿದೆ ಆಡಿಯೋ ತುಣುಕು
ಸುಧಾಕರ್ ಸುದ್ದಾಲ ಮತ್ತು ಇತರ ಮೂವರು ಕೆಲಸದಿಂದ ತೆಗೆದುಹಾಕಿದ ಟೆಕ್ ಮಹೀಂದ್ರ ನೌಕರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಎಂ.ಎಸ್.ರಾಮಚಂದ್ರರಾವ್ ಕೈಗೆತ್ತಿಕೊಂಡರು.
ಐಟಿ ವಲಯದಲ್ಲಿ ಸಾಮೂಹಿಕವಾಗಿ ಉದ್ಯೋಗಿಗಳನ್ನು ತೆಗೆದುಹಾಕುತ್ತಿರುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈ ಸನ್ನಿವೇಶದ ಮೌಲ್ಯಮಾಪನ ಆಗಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಈಚೆಗೆ ಟೆಕ್ ಮಹೀಂದ್ರ ಉದ್ಯೋಗಿ ಜತೆಗೆ ಅಲ್ಲಿನ ಎಚ್ ಆರ್ ಮತ್ತು ಉದ್ಯೋಗಿ ಮಧ್ಯೆ ನಡೆದ ಸಂಭಾಷಣೆಯ ಆಡಿಯೋ ಎಲ್ಲೆಡೆ ವೈರಲ್ ಆಗಿತ್ತು. ವೆಚ್ಚ ಕಡಿಮೆ ಮಾಡುವ ಪ್ರಕ್ರಿಯೆ ಇಡೀ ದೇಶದಲ್ಲಿ ನಡೀತಿದೆ. ನಿಮ್ಮ ರಾಜೀನಾಮೆ ನೀಡಿದರೆ ಅದು ಮಾಮೂಲಿ ಕೆಲಸ ಬಿಡುವಂತೆಯೇ ಆಗುತ್ತದೆ.
ಕಾಂಗ್ನಿಜೆಂಟ್ ವಿರುದ್ಧ ಕೋರ್ಟ್ ಮೆಟ್ಟಿಲೇರಲು ಮುಂದಾದ ಟೆಕ್ಕಿಗಳು
ಇಲ್ಲದಿದ್ದರೆ ನಾವು ಕೆಲಸದಿಂದ ತೆಗೆದುಹಾಕಿದ ಪತ್ರ ಕಳಿಸುತ್ತೇವೆ. ಆಗ ಕಂಪೆನಿಯಿಂದ ನಿಮ್ಮ ವೇತನ ಅಥವಾ ಅನುಭವದ ಪತ್ರ ಸಿಗಲ್ಲ ಎಂದು ಹೇಳಿದ್ದರು. ಆ ಆಡಿಯೋ ಎಲ್ಲೆಡೆ ಹರಿದಾಡಿತ್ತು.
ಕಂಪೆನಿಯ ಎಚ್ ಆರ್ ವಿಭಾಗದವರು ಕೆಲಸ ಬಿಡುವಂತೆ ಉದ್ಯೋಗಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ. ತೆಲಂಗಾಣ ಕಾರ್ಮಿಕ ಇಲಾಖೆಯ ಬಳಿ ಪರಿಹಾರಕ್ಕಾಗಿ ತೆರಳಿದರೂ ಯಾವುದೇ ಸಹಾಯ ಸಿಕ್ಕಿರಲಿಲ್ಲ.