ಪಶುವೈದ್ಯೆಯಲ್ಲಿದ್ದ ತಾಯಿ ಹೃದಯ ಕಾಣಲಿಲ್ಲ ಆ ಪಶುಗಳಿಗೆ!
ಹೈದ್ರಾಬಾದ್, ಡಿಸೆಂಬರ್.03: ವ್ಯಾಘ್ರಗಳೇ ಹಾಗೆ, ಅವುಗಳಿಗೆ ಅಮಾಯಕರನ್ನು ಹೊಡೆದು ಕೊಂದು ತಿನ್ನುವುದಷ್ಟೇ ಗೊತ್ತಾ. ಹೈದ್ರಾಬಾದ್ ನಲ್ಲಿ ನವೆಂಬರ್.28ರ ಆ ರಾತ್ರಿ ನಡೆದಿದ್ದು ಕೂಡಾ ಅಂಥದ್ದೇ ಒಂದು ಕ್ರೌರ್ಯ. ಆ ಬುಧವಾರ ರಾತ್ರಿ ಪಶುವೈದ್ಯೆ ಮೇಲೆ ವ್ಯಾಘ್ರಗಳಂತೆ ಮುಗಿಬಿದ್ದ ಅತ್ಯಾಚಾರಿಗಳದ್ದೇ ಥೇಟ್ ಪಶುಗಳ ಮನಸ್ಥಿತಿ.
ದೇಶಾದ್ಯಂತ ಹೈದ್ರಾಬಾದ್ ನಲ್ಲಿ ಪಶುವೈದ್ಯೆ ಮೇಲೆ ನಡೆದ ಅತ್ಯಾಚಾರಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು ಎನ್ನುವಷ್ಟು ಕೋಪ ಉಕ್ಕಿ ಬರುತ್ತಿದೆ. ಹೆತ್ತವರ ಪಾಲಿನ ಮುದ್ದಿನ ಮಗಳು ರಕ್ಕಸರ ಕೈಗೆ ಸಿಕ್ಕು ಬಲಿಯಾಗಿದ್ದಾಳೆ.
ವೈದ್ಯೆ ಅತ್ಯಾಚಾರ: ಆರೋಪಿಗಳ ಬಗ್ಗೆ ಇನ್ನಷ್ಟು ಆತಂಕಕಾರಿ ಮಾಹಿತಿ
ಸರ್ಕಾರಿ ಕೆಲಸಕ್ಕೆ ಸೇರಿದ ಮಗಳ ಬಗ್ಗೆ ಪೋಷಕರಲ್ಲಿ ಹೆಮ್ಮೆಯಿತ್ತು. ದೂರ ಊರಿನಲ್ಲಿ ದುಡಿದರೂ ಸೂರ್ಯ ಮುಳಗುತ್ತಿದ್ದಂತೆ ಮಗಳು ಕ್ಷೇಮವಾಗಿ ಮನೆಗೆ ಬರುತ್ತಾಳೆ ಎಂದ ನಿರೀಕ್ಷೆಯಿತ್ತು. ಹೆತ್ತವರ ಮನೆ ಅಂಗಳದಲ್ಲಿ ಬೆಳೆದ ಸುಂದರ ಹೂವು, ಗ್ರಾಮದ ರೈತರ ಬದುಕಿನಲ್ಲಿ ಸುಗಂಧವನ್ನು ಹರಡುತ್ತಿತ್ತು. ಅಂತಹ ಸುಂದರ ಹೂವನ್ನೇ ರಕ್ಕಸರು ಹೊಸಕಿ ಹಾಕಿದ್ದಾರೆ.
ಕೊಲ್ಲೂರಿನ ಮಂದಿ ಕಣ್ಣೀರಿನಲ್ಲಿ ಪಶುವೈದ್ಯೆ ನೆನಪು
ಪಶುವೈದ್ಯಯ ದುರಂತ ಅಂತ್ಯ ಕಂಡು ತೆಲಂಗಾಣದ ಕೊಲ್ಲೂರು ಗ್ರಾಮದ ಜನರೆಲ್ಲ ಕಣ್ಣೀರು ಹಾಕುತ್ತಿದ್ದಾರೆ. ಕೊಲ್ಲೂರಿನ ಸರ್ಪಂಚ್ ಆಗಿರುವ ರಾಜು ಎಂಬುವವರು ಡಿಸೆಂಬರ್.28ರಂದು ನಡೆದ ಘಟನೆಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಪ್ರತಿದಿನ ನಾನೇ ಪಶುವೈದ್ಯಯನ್ನು ಗ್ರಾಮದ ಬಸ್ ನಿಲ್ದಾಣದಿಂದ ಪಿಕ್ ಅಪ್ ಮಾಡುತ್ತಿದ್ದೆ. ಸಂಜೆ ಕರ್ತವ್ಯ ಮುಗಿಸಿದ ಬಳಿಕ ಅವರನ್ನು ವಾಪಸ್ ಬಸ್ ನಿಲ್ದಾಣದವರೆಗೂ ಡ್ರಾಪ್ ಮಾಡುತ್ತಿದ್ದೆ. ಅಲ್ಲಿಂದ ಬಸ್ ನಲ್ಲಿ ಅವರು ಟೋಲ್ ಗೇಟ್ ಪ್ಲಾಜಾಗೆ ತೆರಳಿ, ನಂತರ ತಾವು ಪಾರ್ಕ್ ಮಾಡಿದ್ದ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದರು ಎಂದು ಕೊಲ್ಲೂರಿನ ಸರ್ಪಂಚ್ ರಾಜು ತಿಳಿಸಿದ್ದಾರೆ.
ಅವರೇ ನಮ್ಮೂರಿನ ಮೊದಲ ಪಶುವೈದ್ಯೆ
ಅತ್ಯಾಚಾರಕ್ಕೆ ಬಲಿಯಾದ ಯುವತಿಯೇ ಕೊಲ್ಲೂರು ಗ್ರಾಮದ ಮೊದಲ ಪಶುವೈದ್ಯೆಯಾಗಿದ್ದರು. ಏಕೆಂದರೆ, ಕಳೆದ ಹತ್ತು ವರ್ಷಗಳಿಂದ ತೆಲಂಗಾಣದ ಕೊಲ್ಲೂರಿನಲ್ಲಿ ಪಶುವೈದ್ಯರೇ ಇರಲಿಲ್ಲ. ಇದರಿಂದ ತಮ್ಮ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದ ಪಶುವೈದ್ಯೆ ಕುರಿತು ಗ್ರಾಮಸ್ಥರಲ್ಲೂ ವಿಶೇಷ ಗೌರವವಿತ್ತು.
ಪಂಕ್ಚರ್ ಆಯಿತೆಂದು ಗಾಡಿ ನಿಲ್ಲಿಸಿದ ಪಶುವೈದ್ಯೆ, ಸಿಕ್ಕಿದ್ದು ಸುಟ್ಟ ಶವವಾಗಿ
ತಾಯಿ ಹೃದಯಿ ಆಗಿದ್ದ ಪಶುವೈದ್ಯೆ
ಕೊಲ್ಲೂರಿನಲ್ಲಿ ಪಶುವೈದ್ಯೆ ಜೊತೆ ಅಟೆಂಡರ್ ಆಗಿದ್ದ ಬಾಲಯ್ಯ ಕೂಡಾ ಯುವತಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಅಲ್ಲದೇ ಪಶುವೈದ್ಯೆಯ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಗ್ರಾಮದ ರೈತರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಪಶುವೈದ್ಯೆ, ಎಲ್ಲರಲ್ಲೂ ಆತ್ಮಸ್ಥೈರ್ಯ ತುಂಬುತ್ತಿದ್ದರು ಎಂದು ಬಾಲಯ್ಯ ತಿಳಿಸಿದ್ದಾರೆ.
2017ರಲ್ಲಿ ಪಶುವೈದ್ಯೆಯಾಗಿ ಸೇವೆ ಆರಂಭ
2017 ಜನವರಿಯಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಸಹಾಯಕ ಪಶುವೈದ್ಯೆಯಾಗಿ ಸೇವೆ ಆರಂಭಿಸಿದ್ದ ಯುವತಿ, ನಂತರದಲ್ಲಿ ಕೊಲ್ಲೂರಿನಲ್ಲಿ ಪಶುವೈದ್ಯೆಯಾಗಿ ಸೇವೆಗೆ ಸೇರ್ಪಡೆಗೊಂಡರು. ಹೈದ್ರಾಬಾದ್ ನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಕೊಲ್ಲೂರು ಗ್ರಾಮಕ್ಕೆ ಶಡ್ನಗರ್ ನಿಂದ ನಿತ್ಯ ಓಡಾಡುತ್ತಿದ್ದರು. ಅಷ್ಟು ದೂರದಿಂದ ಗ್ರಾಮಕ್ಕೆ ಬಂದು ಸೇವೆ ಸಲ್ಲಿಸುತ್ತಿದ್ದ ಪಶುವೈದ್ಯಯ ಕಾರ್ಯವೈಖರಿ ಬಗ್ಗೆ ಮಂಡಲ ಪರಿಷತ್ ಅಧಿಕಾರಿಗಳು ಕೂಡಾ ಮೆಚ್ಚುಗೆಯ ಮಾತನಾಡಿದ್ದಾರೆ.
ಪಶುವೈದ್ಯೆ ಮೇಲೆ ಅತ್ಯಾಚಾರ; ಆರೋಪಿಗಳು ಸಿಕ್ಕಿಬಿದ್ದಿದ್ದು ಹೇಗೆ?
ಕ್ಷಮಾದಾನ ನೀಡಲು ಎಷ್ಟೊಂದು ಅವಕಾಶ!
ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಪಶುಗಳಂತೆ ವರ್ತಿಸಿದ ಕಾಮುಕರನ್ನು ಬಹಿರಂಗವಾಗಿ ಗಲ್ಲಿಗೇರಿಸಬೇಕು ಎಂಬ ಆಗ್ರಹ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಇತ್ತೀಚಿಗೆ ರಾಜ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪವಾಯಿತು. ಸ್ವತಃ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರೇ, ಭಾರತದ ಕಾನೂನಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ನಮ್ಮ ದೇಶದಲ್ಲಿ ಅತ್ಯಾಚಾರಿಗಳಿಗೆ ತಪ್ಪಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ರಾಜ್ಯ ಸರ್ಕಾರಕ್ಕೊಮ್ಮೆ, ಅಲ್ಲಿಂದ ಕೇಂದ್ರ ಸರ್ಕಾರ, ಗೃಹ ಸಚಿವಾಲಯ, ಅಂತಿಮವಾಗಿ ರಾಷ್ಟ್ರಪತಿ ಹೀಗೆ ವಿವಿಧ ಹಂತಗಳಲ್ಲಿ ಕ್ಷಮಾದಾನ ಕೋರಲು ಅವಕಾಶಗಳಿದೆ. ಈ ಬಗ್ಗೆ ಮತ್ತೊಮ್ಮೆ ಪರಾಮರ್ಶೆ ಮಾಡಬೇಕಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದರು.
ಹೈದರಾಬಾದ್ ಗ್ಯಾಂಗ್ ರೇಪ್: ಉಪರಾಷ್ಟ್ರಪತಿಗಳ ತೂಕದ ಈ ಮಾತು, ನಮ್ಮ ವ್ಯವಸ್ಥೆಗೆ ಹಿಡಿದ ಕನ್ನಡಿ
ಪಶುಗಳ ಮಧ್ಯೆ ಸಿಲುಕಿ ಪ್ರಾಣ ಬಿಟ್ಟ ಪಶುವೈದ್ಯೆ
ನವೆಂಬರ್.28ರಂದು ರಾತ್ರಿ 9.15ರ ವೇಳೆಗೆ ಟೋಲ್ ಪ್ಲಾಜಾ ಬಳಿ ಆಗಮಿಸಿದ ಪಶುವೈದ್ಯಯ ಸ್ಕೂಟಿ ಪಂಕ್ಚರ್ ಆಗಿತ್ತು. ಸಹೋದರಿಗೆ ಕರೆ ಮಾಡಿದ್ದ ಪಶುವೈದ್ಯೆ ಈ ಬಗ್ಗೆ ಮಾಹಿತಿ ನೀಡಿ, ಕೆಲವು ಮಂದಿ ತಮಗೆ ಸಹಾಯ ಮಾಡಲು ಬಂದಿದ್ದಾರೆ. ಸ್ಕೂಚಿಗೆ ಪಂಕ್ಚರ್ ಹಾಕಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದರು. ನೆರವು ನೀಡುವ ನೆಪದಲ್ಲಿ ಬಂದ ನಾಲ್ವರು ಲಾರಿ ಚಾಲಕರು, ಪಶುವೈದ್ಯೆ ಮೇಲೆ ಅತ್ಯಾಚಾರ ನಡೆಸಿ, ಕೊಲೆಗೈದು ನಂತರ ಬೆಡ್ ಶೀಟ್ ನಲ್ಲಿ ಆಕೆಯನ್ನು ಸುತ್ತಿದ್ದಾರೆ. ಅಲ್ಲಿಂದ 30 ಕಿಲೋ ಮೀಟರ್ ದೂರದಲ್ಲಿದ್ದ ಫ್ಲೈ ಓವರ್ ಕೆಳಗೆ ಪೆಟ್ರೋಲ್ ಸುರಿದು ಯುವತಿಯನ್ನು ಸುಟ್ಟು ಹಾಕಿದ್ದರು.