ಭಕ್ತನ ದೇಣಿಗೆ: ತಿರುಪತಿಗೆ 4 ಕೋಟಿ ರೂ. ಮೌಲ್ಯದ ಚಿನ್ನದ ಖಡ್ಗ!
ಹೈದ್ರಾಬಾದ್, ಜುಲೈ 20: ಭಾರತೀಯರು ತಾವು ನೆಚ್ಚಿಕೊಂಡಿರುವ ದೇವಸ್ಥಾನಗಳಿಗೆ ದೇಣಿಗೆ ನೀಡುವುದರಲ್ಲಿ ನಿಸ್ಸೀಮರು ಎನ್ನುವುದಕ್ಕೆ ಸಾಕಷ್ಟು ಉದಾಹರಣೆಗಳು ಕಣ್ಣೆದುರಿಗಿವೆ. ದಕ್ಷಿಣ ಭಾರತದಲ್ಲೇ ಪ್ರಸಿದ್ಧಿ ಪಡೆದಿರುವ ಆಂಧ್ರ ಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಕ್ಕೆ ಪ್ರತಿನಿತ್ಯ ಕೋಟಿ ಕೋಟಿ ರೂಪಾಯಿ ಮೌಲ್ಯದ ದೇಣಿಗೆ ನೀಡಲಾಗುತ್ತದೆ.
ಹೈದರಾಬಾದ್ ಮೂಲದ ದಂಪತಿ ಬಾಲಾಜಿ ವೆಂಕಟೇಶ್ವರ ಸ್ವಾಮಿಗೆ 4 ಕೋಟಿ ರೂಪಾಯಿ ಮೌಲ್ಯದ ಬಂಗಾರದ ಖಡ್ಗವನ್ನು ದೇಣಿಗೆಯಾಗಿ ನೀಡಿರುವುದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಹೈದರಾಬಾದ್ ಉದ್ಯಮಿ ಎಂ ಶ್ರೀನಿವಾಸ್ ಪ್ರಸಾದ್ ಹಾಗೂ ಅವರ ಪತ್ನಿ, ತಿರುಪತಿ ದೇವಸ್ಥಾನಕ್ಕೆ 6.5 ಕೆ.ಜಿ ತೂಕದ ಸ್ವರ್ಣ ನಂದಕ( ಬಂಗಾರದ ಖಡ್ಗ )ವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂದು ಆಜ್ ತಕ್ ವರದಿ ಮಾಡಿದೆ. ಸೋಮವಾರ ದಂಪತಿಯು ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಗೆ ಈ ಖಡ್ಗವನ್ನು ಹಸ್ತಾಂತರಿಸಿದೆ.
ಉಡುಗೊರೆ ನೀಡುವುದಕ್ಕೂ ಮೊದಲು ಪ್ರದರ್ಶನ:
ಕಳೆದ ಸೋಮವಾರ ಚಿನ್ನದ ಖಡ್ಗವನ್ನು ತಿರುಮಲ ತಿರುಪತಿ ದೇವಸ್ಥಾನಂ ಆಡಳಿತ ಮಂಡಳಿಗೆ ನೀಡುವುದಕ್ಕೂ ಮೊದಲು ಅದನ್ನು ಪ್ರದರ್ಶಿಸಲಾಗಿತ್ತು. ಭಾನುವಾರ ತಿರುಮಲದ ಅತಿಥಿ ಗೃಹದಲ್ಲಿ ಹೈದರಾಬಾದ್ ಮೂಲದ ದಂಪತಿಯು ಈ ಸ್ವರ್ಣ ನಂದಕವನ್ನು ಮಾಧ್ಯಮಗಳ ಎದುರು ಪ್ರದರ್ಶಿಸಿದರು. ಕಳೆದ ವರ್ಷವೇ ಈ ಉಡುಗೊರೆಯನ್ನು ಸ್ವಾಮಿ ಅರ್ಪಿಸುವುದಕ್ಕೆ ದಂಪತಿಯು ಅಂದುಕೊಂಡಿದ್ದರು. ಆದರೆ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನಿಂದಾಗಿ ಒಂದು ವರ್ಷ ಮುಂದೂಡಿಕೆ ಆಯಿತು ಎಂದು ತಿಳಿದು ಬಂದಿದೆ.
ದೇಣಿಗೆ ನೀಡಿದ ದಂಪತಿ ಹೇಳುವುದೇನು:
"ನಾನು ಕಳೆದ ವರ್ಷವೇ ಈ ಖಡ್ಗವನ್ನು ದೇವಸ್ಥಾನಕ್ಕೆ ನೀಡಬೇಕು ಎಂದುಕೊಂಡಿದ್ದೆವು. ಆದರೆ ಕೊರೊನಾವೈರಸ್ ಭೀತಿಯಲ್ಲಿ ದೇವಸ್ಥಾನವನ್ನು ಬಂದ್ ಮಾಡಿರುವ ಹಿನ್ನೆಲೆ ಅಂದುಕೊಂಡಂತೆ ಚಿನ್ನದ ಖಡ್ಗವನ್ನು ನೀಡಲು ಸಾಧ್ಯವಾಗಲಿಲ್ಲ," ಎಂದು ಹೈದರಾಬಾದ್ ಮೂಲದ ಭಕ್ತ ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ.
ಕೋಯಂಬತ್ತೂರಿನಲ್ಲಿ ಸಿದ್ಧಗೊಂಡ ಖಡ್ಗ:
ತಮಿಳುನಾಡಿನ ಕೋಯಂಬತ್ತೂರಿನಲ್ಲಿ ವಿಶೇಷ ಚಿನ್ನವನ್ನು ಬಳಸಿಕೊಂಡು ಈ ಸೂರ್ಯ ಕಠಾರಿಯನ್ನು ಸಿದ್ಧಪಡಿಸಲಾಗಿದೆ. ಈ ಖಡ್ಗವನ್ನು ತಯಾರಿಸುವುದಕ್ಕೆ 6 ತಿಂಗಳ ತೆಗೆದುಕೊಳ್ಳಲಾಗಿದ್ದು, 6.5 ಕೆಜಿ ತೂಕವನ್ನು ಹೊಂದಿದೆ. ಅಂದು ಈ ಸ್ವರ್ಣ ನಂದಕ ತಯಾರಿಸುವುದಕ್ಕೆ 1.8 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಇಂದು ಅದೇ ಖಡ್ಗದ ಬೆಲೆ 4 ಕೋಟಿಗೂ ಹೆಚ್ಚಾಗಿದೆ.
2018ರಲ್ಲಿ 1.75 ಕೋಟಿ ಮೌಲ್ಯದ ಖಡ್ಗ:
Recommended Video
ಕಳೆದ 2018ರಲ್ಲಿ ತಮಿಳುನಾಡು ಮೂಲದ ಬಟ್ಟೆ ಉದ್ಯಮಿ ಥಂಗಾ ದೊರೈ 1.75 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಖಡ್ಗವನ್ನು ದೇಣಿಗೆಯಾಗಿ ನೀಡಿದ್ದರು.