ಹೈದರಾಬಾದ್ ಆಪಲ್ ಟೆಕ್ಕಿ 9 ದಿನಗಳಿಂದ ನಾಪತ್ತೆ: ಸಾರ್ವಜನಿಕರ ಸಹಾಯ ಕೋರಿದ ಪೋಷಕರು
ಹೈದರಾಬಾದ್, ಜನವರಿ 3: ಆಪಲ್ ಇಂಡಿಯಾದ ಉದ್ಯೋಗಿಯಾಗಿರುವ 34 ವರ್ಷದ ರೋಹಿತಾ ಕುತ್ತೂರು ಹೈದರಾಬಾದ್ನಿಂದ ಡಿ.26ರಿಂದ ನಾಪತ್ತೆಯಾಗಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ಸತತ ವಿಚಾರಣೆ ಮತ್ತು ಹುಡುಕಾಟ ನಡೆಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಕಂಗಾಲಾಗಿರುವ ಪೋಷಕರು ಆಕೆಯ ಪತ್ತೆಗೆ ಸಹಾಯ ಮಾಡುವಂತೆ ಸಾರ್ವಜನಿಕರನ್ನು ಕೋರಿದ್ದಾರೆ.
ಡಿ. 26ರಂದು ಅವರು ಸೈಬರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಗಚಿಬೌಲಿಯಲ್ಲಿ ವಿಪ್ರೋ ವೃತ್ತದಲ್ಲಿ ಮಧ್ಯಾಹ್ನ 3.15ರ ಸುಮಾರಿಗೆ ಆಟೋ ರಿಕ್ಷಾವನ್ನು ಹತ್ತಿದ್ದನ್ನು ಕಂಡಿದ್ದೇ ಕೊನೆ. ಅಲ್ಲಿಂದ ಜ.3ರವರೆಗೆ ಒಂಬತ್ತು ದಿನ ಕಳೆದರೂ ರೋಹಿತಾ ಎಲ್ಲಿದ್ದಾರೆ, ಎಲ್ಲಿಗೆ ತೆರಳಿದ್ದಾರೆ ಎಂಬ ಯಾವ ಮಾಹಿತಿಯೂ ಸಿಕ್ಕಿಲ್ಲ.
ಬೆಂಗಳೂರಲ್ಲಿ ಪತ್ನಿಯ ಕಿರುಕುಳದಿಂದ ಬೇಸತ್ತು ಟೆಕ್ಕಿ ಆತ್ಮಹತ್ಯೆ
ನಾನಾಕ್ರಮ್ಗುಡ ನಿವಾಸಿಯಾಗಿರುವ ರೋಹಿತಾ ಮಂತ್ರಿ ಸೆಲೆಸ್ಟಾ ಅಪಾರ್ಟ್ಮೆಂಟ್ನಲ್ಲಿ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ನೆಲೆಸಿದ್ದರು. ಆಕೆಯ ಸ್ನೇಹಿತೆಯರಿಗೂ ರೋಹಿತಾ ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ.
ಎಲ್ಲಿಗೆ ಹೋಗಿದ್ದಾಳೋ ಗೊತ್ತಾಗುತ್ತಿಲ್ಲ
'ಪೊಲೀಸರು ತಾವು ಶಕ್ತಿಮೀರಿ ಎಲ್ಲ ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದ್ದಾರೆ. ಅವರು ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಮತ್ತು ಸಹಾಯ ಮಾಡುತ್ತಿದ್ದಾರೆ. ರೋಹಿತಾ ಅಪಾರ್ಟ್ಮೆಂಟ್ ಕಟ್ಟಡದಿಂದ ಹೊರಬಂದು ಆಟೋರಿಕ್ಷಾ ಹತ್ತಿ ಮುಂದಿನ ಜಂಕ್ಷನ್ನಲ್ಲಿ ಇಳಿದು ಹೊರಟಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಆದರೆ ಅಲ್ಲಿಂದ ಮುಂದೆ ಸಿಸಿಟಿವಿ ಕ್ಯಾಮೆರಾಗಳಿಲ್ಲ. ಅಲ್ಲಿಂದ ಆಕೆ ಎಲ್ಲಿಗೆ ಹೊರಟಳು ಎಂಬುದು ಸ್ಪಷ್ಟವಾಗಿಲ್ಲ' ಎಂದು ಆಕೆಯ ಸಹೋದರ ಕೆ. ಪರೀಕ್ಷಿತ್ ಹೇಳಿದ್ದಾರೆ.
ಮನೆಯಲ್ಲಿಯೇ ಫೋನ್ ಬಿಟ್ಟಿದ್ದಾರೆ
ರೋಹಿತಾ ತಮ್ಮ ಮೊಬೈಲ್ ಫೋನ್ಅನ್ನು ಅಪಾರ್ಟ್ಮೆಂಟ್ನಲ್ಲಿಯೇ ಬಿಟ್ಟುಹೋಗಿದ್ದರು. ಸತತ ಮೂರು ದಿನ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲವಾದ ಬಳಿಕ ಆಕೆಯ ಕುಟುಂಬದ ಸದಸ್ಯರು ಡಿ. 29ರಂದು ಪೊಲೀಸರಿಗೆ ದೂರು ನೀಡಿದ್ದರು. ಅವರ ಜತೆ ಸೆಲ್ಫೋನ್ ಇಲ್ಲದ ಕಾರಣ ಅವರ ಪತ್ತೆ ಕಾರ್ಯಕ್ಕೆ ಹಿನ್ನಡೆಯಾಗಿದೆ. ಆಕೆ ನಮ್ಮೊಂದಿಗೆ ಡಿ. 24ರಂದು ಕೊನೆಯ ಬಾರಿ ಮಾತನಾಡಿದ್ದಳು ಎಂದು ಪರೀಕ್ಷಿತ್ ತಿಳಿಸಿದ್ದಾರೆ.
ಬೆಲೆಬಾಳುವ ಶೂ ಕಳೆದುಕೊಂಡ ಟೆಕ್ಕಿ ಮಾಡಿದ್ದೇನು?
ಸಿಕ್ಕಿರುವುದು ಒಂದೇ ದೃಶ್ಯ
'ರೋಹಿತಾ ಅವರ ಪತ್ತೆಗೆ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ. ಆಕೆ ತನ್ನೊಂದಿಗೆ ಫೋನ್ ಕೊಂಡೊಯ್ಯದೆ ಇರುವುದರಿಂದ ಆಕೆಯನ್ನು ಪತ್ತೆಹಚ್ಚುವುದು ಕಷ್ಟವಾಗಿದೆ. ಅವರು ಆಟೋದಿಂದ ಇಳಿದು ರಸ್ತೆ ದಾಟುವುದು ಸಿಸಿಟಿವಿ ದೃಶ್ಯದಲ್ಲಿ ದಾಖಲಾಗಿದೆ. ಇಷ್ಟನ್ನು ಹೊರತುಪಡಿಸಿ ಅವರ ಬಗ್ಗೆ ಯಾವುದೇ ಸುಳಿವು ದೊರಕಿಲ್ಲ' ಎಂದು ತನಿಖಾಧಿಕಾರಿ ಸುರೇಂದ್ರ ರೆಡ್ಡಿ ತಿಳಿಸಿದ್ದಾರೆ.
ಪಿಜ್ಜಾ ತಿನ್ನಲು ಹೋಗಿ 'ಇಂಗು' ತಿಂದ ಬೆಂಗಳೂರು ಟೆಕ್ಕಿ!
ದಯವಿಟ್ಟು ಸಹಾಯ ಮಾಡಿ
'ಮನೆಯಲ್ಲಿ ಅಪ್ಪ ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ. ನನ್ನ ಅಮ್ಮ ಹೇಗೋ ದುಃಖ ತಡೆದುಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ನಾನು ಗಟ್ಟಿಯಾಗಿ ನಿಲ್ಲಬೇಕಿದೆ. ಆದರೆ ಏನು ಮಾಡುವುದೋ ತಿಳಿಯುತ್ತಿಲ್ಲ. ಆಕೆ ಎಲ್ಲಿದ್ದಾಳೆ ಎಂಬುದು ಯಾರಿಗಾದರೂ ತಿಳಿದರೆ ದಯವಿಟ್ಟು ನನ್ನನ್ನು ಸಂಪರ್ಕಿಸಿ' ಎಂದು ಪರೀಕ್ಷಿತ್ ಜನರಲ್ಲಿ ಮನವಿ ಮಾಡಿದ್ದಾರೆ.