ಸುಪಾರಿ ಕಿಲ್ಲರ್ ಗಳಿಂದ ಪ್ರಣಯ್ ಹತ್ಯೆಗೆ ಸಂಚು ನಡೆದಿದ್ದು ಹೇಗೆ?
ಹೈದರಾಬಾದ್, ಸೆಪ್ಟೆಂಬರ್ 18 : ಹಿಂದೂ ಯುವತಿಯನ್ನು ಮದುವೆಯಾಗಿದ್ದಕ್ಕಾಗಿ ಇತರ ಜಾತಿಗೆ ಸೇರಿದ ಯುವಕನ ಹತ್ಯೆಗೆ ಸಂಬಂಧಿಸಿದಂತೆ, ಹತ್ಯೆಯ ಪ್ರಮುಖ ಆರೋಪಿ ಯುವತಿಯ ತಂದೆ ಮಾರುತಿ ರಾವ್ ಅವರನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
'ಪ್ರಣಯ್ಗೆ ನ್ಯಾಯ ದೊರಕಿಸಿ': ಫೇಸ್ಬುಕ್ನಲ್ಲಿ ಬೃಹತ್ ಅಭಿಯಾನ
ನಾಲ್ಕು ದಿನಗಳ ಹಿಂದೆ ಮಿರ್ಯಾಲಗುಡದಲ್ಲಿ ಪತ್ನಿಯೆದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಹಾಡಹಗಲೇ ಪ್ರಣಯ್ ನನ್ನ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಮಾರುತಿ ರಾವ್ ಅವರ ಸಹೋದರ ಶ್ರವಣ್ ಮತ್ತಿತರ ಐವರನ್ನು ಕೂಡ ಬಂಧಿಸಲಾಗಿದೆ.
ಈ ಸುಂದರ ಜೋಡಿಯ ಮದುವೆಯನ್ನು ಎರಡೂ ಕುಟುಂಬಗಳು ವಿರೋಧಿಸಿದ್ದವು. ನಂತರದ ದಿನಗಳಲ್ಲಿ ಪ್ರಣಯ್ ಮನೆಯವರು ಮದುವೆಯನ್ನು ಒಪ್ಪಿಕೊಂಡಿದ್ದರೆ, ಅಮೃತಾಳ ಮನೆಯವರು ಕಡೆಗೂ ಈ ಮದುವೆಯನ್ನು ಒಪ್ಪಿಕೊಂಡಿರಲಿಲ್ಲ. ಅಲ್ಲದೆ, ಪ್ರಣಯ್ ನನ್ನು ಕೊಲ್ಲಿಸುವುದಾಗಿ ಧಮ್ಕಿ ಹಾಕುತ್ತಲೇ ಇದ್ದರು.
ಪ್ರಣಯ್ ಹತ್ಯೆ ಭೇದಿಸಿದ ಪೊಲೀಸ್! ಕೊಲೆಗಾರನಿಗೆ 1 ಕೋಟಿ ರು. ಸುಪಾರಿ!
ಅಮೃತಾ ಗರ್ಭಿಣಿಯಾಗಿದ್ದು ಮಾರುತಿ ರಾವ್ ಅವರಿಗೆ ಸಹಿಸಲಸಾಧ್ಯವಾಗಿತ್ತು. ಹುಟ್ಟಲಿರುವ ಮಗುವನ್ನು ತೆಗೆಸಬೇಕೆಂದು ಅವರು ಒತ್ತಾಯ ಹೇರುತ್ತಲೇ ಇದ್ದರು. ಇದಕ್ಕೆ ಅಮೃತಾ ಒಪ್ಪದಿದ್ದಾಗ, 1 ಕೋಟಿ ರುಪಾಯಿ ಸುಪಾರಿ ಕೊಟ್ಟು ಪ್ರಣಯ್ ನನ್ನು ಕೊಲ್ಲಿಸಲಾಗಿದೆ. ಸುಪಾರಿ ಪಡೆದಿದ್ದ ಆರೋಪಿಯನ್ನು ಬಂಧಿಸಲಾಗಿದೆ.
ಆದರೆ, ಈ ಹತ್ಯೆಗೆ ಸಂಚು ನಡೆದಿದ್ದು ಹೇಗೆ? ಸುಪಾರಿ ಹಂತಕರೊಂದಿಗೆ ಕೋಟಿ ರುಪಾಯಿಗೆ ಡೀಲ್ ನಡೆದಿದ್ದು ಹೇಗೆ? ಯಾವ ತಿಂಗಳಿನಿಂದಲೇ ಸಂಚು ನಡೆಸಲಾಗಿತ್ತು? ಕಡೆಗೆ ಮಾರುತಿ ರಾವ್ ತನ್ನ ಒಣ ಪ್ರತಿಷ್ಠೆಗಾಗಿ ಮಗಳ ಸುಖವನ್ನೇ ಹೇಗೆ ಬಲಿಕೊಟ್ಟ ಎಂಬ ವಿವರಗಳು ಮುಂದಿವೆ.
ಹತ್ಯೆಯಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ
ಬೆಚ್ಚಿಬೀಳಿಸುವ ಮಾಹಿತಿ ಹೊರಹಾಕುತ್ತಿರುವ ಈ ಹೈಪ್ರೊಫೈಲ್ ಮರ್ಡರ್ ನಲ್ಲಿ ಪ್ರಮುಖ ರಾಜಕಾರಣಿಗಳ ಕೈವಾಡವೂ ಇರುವುದು ಇಡೀ ತೆಲಂಗಾಣ ರಾಜ್ಯವನ್ನು ತಲ್ಲಣಗೊಳಿಸಿದೆ. ಈ ಪ್ರಕರಣದಲ್ಲಿ, ಮಾರುತಿ ರಾವ್, ಅವರ ಸಹೋದರ ಶ್ರವಣ್ ಜೊತೆಗೆ ಅಸ್ಗರ್ ಅಲಿ, ಮೊಹಮ್ಮದ್ ಬಾರಿ, ಕಾಂಗ್ರೆಸ್ ನಾಯಕ ಅಬ್ದುಲ್ ಕರೀಂ, ಮಾರುತಿ ಕಾರಿನ ಡ್ರೈವರ್ ಶಿವ ಮತ್ತು ಬಿಹಾರದಲ್ಲಿ ಸುಪಾರಿ ಕಿಲ್ಲರ್ ಸುಭಾಶ್ ಶರ್ಮಾನನ್ನು ಕೂಡ ಬಂಧಿಸಲಾಗಿದೆ. ವಶಪಡಿಸಿಕೊಂಡಿರುವ ಸಿಸಿಟಿವಿ ಆಧಾರದ ಮೇಲೆ ಸುಪಾರಿ ಹಂತಕ ಸುಭಾಶ್ ಶರ್ಮಾನನ್ನು ಬಿಹಾರದಲ್ಲಿ ಬಂಧಿಸಲಾಗಿದೆ.
ನನ್ನ ಗಂಡನನ್ನು ಅಪ್ಪ ಮಾತ್ರ ಕೊಲ್ಲಿಸಲು ಸಾಧ್ಯ: ಗರ್ಭಿಣಿ ಅಮೃತಾ ಮಾತು
ಅಮೃತಾಳ ತಂದೆ ಮಾರುತಿ ಆರೋಪಿ ನಂ.1
ಅಮೃತಾಳ ತಂದೆ ಮಾರುತಿ ರಾವ್ ಆರೋಪಿ ನಂಬರ್ 1 ಆಗಿದ್ದರೆ, ಸುಪಾರಿ ಹಂತಕ ಸುಭಾಶ್ ಶರ್ಮಾ ಆರೋಪಿ ನಂಬರ್ 2. ಆರೋಪಿ ನಂಬರ್ 3 ಅಸ್ಗರ್ ಅಲಿ ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿದ್ದ, ನಂತರ ಬಿಡುಗಡೆಯಾಗಿದ್ದ. ಹೈದರಾಬಾದ್ ನ ಮಲಕಪೇಟ್ ನಿವಾಸಿ ಮೊಹಮ್ಮದ್ ಬಾರಿಯನ್ನು ಮಾರುತಿ ರಾವ್ 2011ರಿಂದಲೇ ಬಲ್ಲರು. ಮಾರುತಿ ರಾವ್ ಅವರ ಕಾರಿನ ಡ್ರೈವರ್ ಶಿವ ಈ ಹತ್ಯೆಯ ಸಂಚಿನಲ್ಲಿ ಭಾಗಿಯಾಗಿದ್ದಾನೆ. ಮೊದಲನೇ ಆರೋಪಿ ಮಾರುತಿ ರಾವ್ ಕೂಡ ಭೂಕಬಳಿಕೆ ಸೇರಿದಂತೆ ಹಲವಾರು ಪ್ರಕರಣಗಳಲ್ಲಿ ಭಾಗಿಯಾದ್ದ ಎಂದು ನಲಗೊಂಡ ಎಸ್ಪಿ ಮಾಹಿತಿ ನೀಡಿದ್ದಾರೆ.
ತೆಲಂಗಾಣದ ಬರ್ಬರ ಹತ್ಯೆ, ಮೊದಲೇ ಎಚ್ಚರಿಕೆ ನೀಡಿದ್ದ ಪೊಲೀಸರು!
ಹತ್ಯೆಗೆ ಸಂಚು ನಡೆದಿದ್ದು ಜೂನ್ ಜುಲೈನಲ್ಲಿ
ಈ ಹತ್ಯೆಗೆ ಸಂಚು ನಡೆದಿದ್ದು ಈಗಲ್ಲ, ಜೂನ್ ಜುಲೈನಲ್ಲಿ. ಬಾಲ್ಯದ ಸ್ನೇಹಿತರಾದ ಅಸ್ಗರ್ ಮತ್ತು ಬಾರಿ, ಅಮೃತಾಳ ತಂದೆಯಾದ ಮಾರುತಿ ರಾವ್ ಮತ್ತು ಕರೀಂನನ್ನು ಭೇಟಿಯಾಗಿದ್ದಾರೆ. ಈ ಸಂಚಿನಲ್ಲಿ ಮಾರುತಿ ರಾವ್ ಅವರ ಸಹೋದರ ಶ್ರವಣ್ ಕೂಡ ಭಾಗಿಯಾಗಿದ್ದಾರೆ. ಕಾರಿನಲ್ಲಿಯೇ ಕುಳಿತು ಕೊಲೆಗೆ ಡೀಲ್ ಆರಂಭವಾಗಿದೆ. ಎರಡೂವರೆ ಕೋಟಿ ರುಪಾಯಿನಿಂದ ಆರಂಭವಾದ ಸುಪಾರಿ ಡೀಲ್ ನಂತರ 1 ಕೋಟಿಗೆ ಇತ್ಯರ್ಥವಾಗಿದೆ. ಮೊದಲಿಗೆ 50 ಲಕ್ಷ ರುಪಾಯಿ ಅಡ್ವಾನ್ಸ್ ಗೆ ಕೊಲೆಗಡುಕರು ದುಂಬಾಲು ಬಿದ್ದರೂ ನಂತರ 15 ಲಕ್ಷ ರುಪಾಯಿ ಮುಂಗಡವಾಗಿ ಇಸಿದುಕೊಂಡಿದ್ದಾರೆ. ಅವತ್ತಿನ ದಿನವೇ ಪ್ರಣಯ್ ನ ಮನೆಯನ್ನು ಗುರುತು ಮಾಡಿಕೊಂಡಿದ್ದಾರೆ.
ಪತಿಯನ್ನು ಕೊಂದಿದ್ದು ಜಾತಿಪದ್ಧತಿ: ಗರ್ಭಿಣಿ ಪತ್ನಿಯ ಭಾವುಕ ನುಡಿ
ಆರತಕ್ಷತೆಯಿಂದ ಭಾರೀ ಕೆರಳಿದ್ದ ಮಾರುತಿ
ಎಲ್ಲರ ವಿರೋಧವನ್ನು ಧಿಕ್ಕರಿಸಿ ಪರಿಶಿಷ್ಟ ಜಾತಿಯ ಮಾಲಾ ಸಮುದಾಯಕ್ಕೆ ಸೇರಿದ ಪ್ರಣಯ್ ಮತ್ತು ಕೋಮತಿ ಸಮುದಾಯ(ವೈಶ್ಯ)ಕ್ಕೆ ಸೇರಿದ ಅಮೃತಾ ಮದುವೆಯಾಗಿದ್ದು ಮತ್ತು ಸ್ವಲ್ಪ ಅದ್ದೂರಿಯಾಗಿ ಆರತಕ್ಷತೆ ಮಾಡಿಕೊಂಡಿದ್ದು ಮಾರುತಿ ರಾವ್ ರನ್ನು ಭಾರೀ ಕೆರಳಿಸಿದೆ. ಇದರಿಂದ ರೊಚ್ಚಿಗೆದ್ದ ಅವರು ತಕ್ಷಣವೇ ಪ್ರಣಯ್ ನನ್ನು ಯಮಲೋಕಕ್ಕೆ ಅಟ್ಟಬೇಕೆಂದು ನಿರ್ಧರಿಸಿದ್ದಾರೆ. ಆಗಲೇ ಪ್ರಣಯ್ ನನ್ನು ಮುಗಿಸಬೇಕೆಂದು ಸ್ಕೆಚ್ ಹಾಕಿದ್ದರು. ಇದರ ಸುಳಿವನ್ನು ಅಮೃತಾಳಿಗೆ ನೀಡುತ್ತಲೇ ಇದ್ದರು. ಇದೇ ಅವರಿಗೆ ಈಗ ಮುಳುವಾಗಿದೆ. ಅಮೃತಾ ತನ್ನ ತಂದೆಯ ವಿರುದ್ಧವೇ ನೇರವಾಗಿ ಆರೋಪ ಮಾಡಿದ್ದಾಳೆ. ತನ್ನ ಚಿಕ್ಕಪ್ಪ ಕೂಡ ತನ್ನ ಮೇಲೆ ದೈಹಿಕ ಹಲ್ಲೆ ಮಾಡಿದ್ದ ಎಂದು ಅಮೃತಾ ದೂರು ನೀಡಿದ್ದಳು.
'ಗರ್ಭಪಾತಕ್ಕೆ ಅಪ್ಪ ಒತ್ತಾಯಿಸಿದ್ದು ಯಾಕೆ ಅಂತ ಈಗ ತಿಳಿಯುತ್ತಿದೆ!'
ಅಮೃತಾಳ ಎದುರೇ ಗಂಡನ ಬರ್ಬರ ಹತ್ಯೆ
ಐದು ತಿಂಗಳ ಗರ್ಭಿಣಿಯಾದ ಅಮೃತಾ ಮತ್ತು ಗಂಡ ಪ್ರಣಯ್ ಮಿರ್ಯಾಲಗುಡದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಪ್ರಸೂತಿತಜ್ಞೆಯನ್ನು ಭೇಟಿಯಾಗಿ ತಪಾಸಣೆ ಮುಗಿಸಿಕೊಂಡು ಬರುತ್ತಿರುವಾಗ, ಅವರನ್ನು ಹಿಂಬಾಲಿಸಿಕೊಂಡು ಬರುತ್ತಿದ್ದ ಅಪರಿತ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಪ್ರಣಯ್ ಮೇಲೆ ಹರಿದ ಆಯುಧದಿಂದ ಹಲ್ಲೆ ಮಾಡಿದ್ದಾನೆ. ಅದನ್ನು ಅಮೃತಾ ತಡೆಯಲು ಯತ್ನಿಸಿದರೂ ಬಿಡದ ಹಂತಕ ಪ್ರಣಯ್ ನ ತಲೆ ಮತ್ತು ಕತ್ತಿನ ಮೇಲೆ ಬಲವಾಗಿ ಹಲ್ಲೆ ಮಾಡಿದ್ದಾನೆ. ಇದೆಲ್ಲ ಸಿಸಿಟಿವಿಯಲ್ಲಿ ದಾಖಲಾಗಿದೆ. ಆ ಹೊಡೆತ ಯಾವ ಪರಿಯಿತ್ತೆಂದರೆ ಪ್ರಣಯ್ ಹೆಚ್ಚೂ ಕಡಿಮೆ ಸ್ಥಳದಲ್ಲಿಯೇ ಪ್ರಾಣ ಬಿಟ್ಟಿದ್ದ.
ನಲಗೊಂಡದಲ್ಲಿ ಮಾರುತಿ ಪ್ರಭಾವಿ ವ್ಯಕ್ತಿ
ವೃತ್ತಿಯಿಂದ ರಿಯಲ್ ಎಸ್ಟೇಟ್ ವ್ಯಾಪಾರಿಯಾಗಿರುವ ಮಾರುತಿ ರಾವ್ ನಲಗೊಂಡ ಜಿಲ್ಲೆಯಲ್ಲಿ ಪ್ರಭಾವಿ ವ್ಯಕ್ತಿ. ಆತನಿಗೆ ಸ್ಥಳೀಯ ರಾಜಕಾರಣಿಗಳ ಬೆಂಬಲವೂ ಇದೆ. ಅಕ್ರಮ ಭೂಕಬಳಿಕೆ ಸೇರಿದಂತೆ ಮಾರುತಿ ರಾವ್ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ಕೂಡ ದಾಖಲಾಗಿವೆ. ಹತ್ಯೆ ನಡೆಯುತ್ತಿದ್ದಂತೆ ದಲಿತ ಸಂಘಟನೆಗಳಿಂದ ಭಾರೀ ಪ್ರತಿಭಟನೆಗಳು ಶುರುವಾದವು. ಮಾರುತಿ ರಾವ್ ಮತ್ತು ಆತನ ಸಹೋದರನನ್ನು ಕೂಡಲೆ ಬಂಧಿಸಬೇಕೆಂದು ದಲಿತ ವಿದ್ಯಾರ್ಥಿ ಸಂಘಟನೆಗಳು ಪೊಲೀಸರ ಮೇಲೆ ಒತ್ತಡ ಹೇರಲು ಆರಂಭಿಸಿದವು. ಈ ಹಿನ್ನೆಲೆಯಲ್ಲಿ ಗಲಭೆಗಳಾಗಿ ಜನರಿಂದ ಹಲ್ಲೆಗಳಾಗಬಹುದೆಂದು ಮಾರುತಿ ರಾವ್ ಮತ್ತು ಪ್ರಣಯ್ ಕುಟುಂಬಕ್ಕೆ ಪೊಲೀಸ್ ರಕ್ಷಣೆಯನ್ನೂ ನೀಡಲಾಗಿತ್ತು.
ಮಗಳ ಸುಖಕ್ಕಿಂತ ಪ್ರತಿಷ್ಠೆ, ಮರ್ಯಾದೆ ಹೆಚ್ಚು
ಹೈದರಾಬಾದ್ ನಲ್ಲಿ ಓದುತ್ತಿದ್ದ ಪ್ರಣಯ್ ಮತ್ತು ಅಮೃತಾ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬಗಳ ವಿರೋಧವನ್ನು ಧಿಕ್ಕರಿಸಿ 2018ರ ಜನವರಿಯಲ್ಲಿಯೇ ಹೈದರಾಬಾದ್ ನ ಆರ್ಯ ಸಮಾಜದಲ್ಲಿ ಸರಳವಾಗಿ ಮದುವೆಯಾಗಿದ್ದರು. ಮಾರುತಿ ರಾವ್ ಕುಟುಂಬದಿಂದ ಬೆದರಿಕೆಗಳು ಬರುತ್ತಿದ್ದರಿಂದ ಮದುವೆ ನೋಂದಾವಣಿ ಮಾಡಿಸಿಕೊಂಡ ಮೇಲೆ ಪೊಲೀಸ್ ರಕ್ಷಣೆಯನ್ನೂ ದಂಪತಿಗಳು ಕೇಳಿದ್ದರು. ನಂತರ, ತಾನು ಪ್ರಣಯ್ ಮೇಲೆ ಯಾವುದೇ ಹಲ್ಲೆ ಮಾಡುವುದಿಲ್ಲವೆಂದು ಮಾರುತಿ ರಾವ್ ಮುಚ್ಚಳಿಕೆ ಬರೆದುಕೊಟ್ಟಿದ್ದ. ಆದರೆ, ತನ್ನ ಮಗಳ ಸುಖ ಸಂತೋಷಗಳಿಗಿಂತ ತನ್ನ ಮರ್ಯಾದೆ ಮತ್ತು ಪ್ರತಿಷ್ಠೆಯೇ ಮೇಲಾಗಿದ್ದರಿಂದ ಹತ್ಯೆ ಮಾಡಬೇಕಾಯಿತೆಂದು ಪೊಲೀಸರಿಗೆ ಮಾರುತಿ ರಾವ್ ತಿಳಿಸಿದ್ದಾನೆ. ಕಡೆಗೂ ಒಂದು ಸುಂದರ ಜೋಡಿಯನ್ನು ಸುಪಾರಿ ಕೊಟ್ಟು ಪರ್ಮನೆಂಟಾಗಿ ಬೇರ್ಪಡಿಸಿಬಿಟ್ಟಿದ್ದಾನೆ.