ಹೈದರಾಬಾದ್ನಲ್ಲಿ ಮಳೆ ಆರ್ಭಟ, ವಿಮಾನಗಳ ಮಾರ್ಗ ಬದಲಾವಣೆ
ಹೈದರಾಬಾದ್, ಏಪ್ರಿಲ್ 22 : ಹೈದರಾಬಾದ್ನಲ್ಲಿ ಗುರುವಾರ ಸಂಜೆ ಗುಡುಗು ಸಮೇತ ಭಾರೀ ಮಳೆಯಾದ ಹಿನ್ನಲೆ ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ದೆಹಲಿ, ಮುಂಬೈ, ಬೆಂಗಳೂರು ಮತ್ತು ವಿಶಾಖಪಟ್ಟಣದ ವಿಮಾನಗಳನ್ನು ಬೇರೆ ಮಾರ್ಗಗಳಿಗೆ ಬದಲಾವಣೆ ಮಾಡಲಾಗಿದ್ದು, ಬೆಂಗಳೂರು, ವಿಜಯವಾಡ ಮತ್ತು ನಾಗ್ಪುರದ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್ ಮಾಡಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಐಎಎನ್ಎಸ್ ವರದಿ ಮಾಡಿದೆ. ಹೈದರಾಬಾದ್ ಸುತ್ತಮುತ್ತಾ ಭಾರಿ ಮಳೆ ಮುನ್ಸೂಚನೆ ಇರುವುದರಿಂದ ಇನ್ನು ಕೆಲದಿನಗಳ ವಿಮಾನಯಾನ ಸೇವೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ.
ಹೈದರಾಬಾದ್ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದೆ. ಬಿಸಿಲಿನ ಬೇಗೆಯಿಂದ ಬಳಲುತ್ತಿದ್ದ ಜನರಿಗೆ ಮಳೆಯಾಗಿರುವುದು, ಕೊಂಚ ನೆಮ್ಮದಿ ತಂದರೂ, ಭಾರೀ ಮಳೆಯಾದ್ದರಿಂದ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ, ಬಿರುಗಾಳಿ ಸಮೇತ ಮಳೆ ಪರಿಣಾಮ ನಗರದ ಹಲವು ಕಡೆ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅಲ್ಲದೆ ಕೆಲ ಕಡೆ ವಾಹನ ಸಂಚಾರ ನಡೆಸಲು ಆಗದೇ ಸವಾರರು ಪರದಾಡಿದ ಪರಿಸ್ಥಿತಿ ಉಂಟಾಗಿದೆ.
ಕರ್ನಾಟಕದಲ್ಲಿ ಮತ್ತೆ ನಾಲ್ಕು ದಿನ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಿದ್ದ ವಿಮಾನಗಳನ್ನು ಮಳೆಯಾದ ಕಾರಣ ಬೆಂಗಳೂರು, ವಿಜಯವಾಡ ಮತ್ತು ನಾಗ್ಪುರದ ವಿಮಾನ ನಿಲ್ದಾಣಗಳಲ್ಲಿ ಇಳಿಸಲಾಗಿದೆ ಅಂತ ವಿಮಾನದ ವಕ್ತಾರರು ಮಾಹಿತಿ ನೀಡಿದ್ದಾರೆ. ದೆಹಲಿ-ಹೈದರಾಬಾದ್ ವಿಮಾನವನ್ನು ಬೆಂಗಳೂರಿಗೆ, ಬೆಂಗಳೂರು-ಹೈದರಾಬಾದ್ ವಿಮಾನವನ್ನು ನಾಗ್ಪುರಕ್ಕೆ ಹಾಗೂ ಮುಂಬೈ-ಹೈದರಬಾದ್ ಮತ್ತು ವಿಶಾಖಪಟ್ಟಣ-ಹೈದರಾಬಾದ್ ವಿಮಾನಗಳನ್ನು ವಿಜಯವಾಡ ವಿಮಾನ ನಿಲ್ದಾಣಗಳಲ್ಲಿ ಲ್ಯಾಂಡ್ ಮಾಡಿಸಲಾಗಿದೆ.
ನಿನ್ನೆ ಹೈದರಾಬಾದ್ನಲ್ಲಿ ಭಾರೀ ಮಳೆಯಾಗಿದ್ದು, ಕೊಂಡಾಪುರ್, ಕುತ್ಬುಲ್ಲಾಪುರ, ಜೇಡಿಮೆಟ್ಲಾ, ದಿಲ್ಕುನಗರ, ಚೈತನ್ಯಪುರಿ, ಅಬ್ದುಲ್ಪುರ್ಮೆಟ್, ಕೊತ್ತಾಪೆಟ್ ಮತ್ತು ಇನ್ನಿತರ ಪ್ರದೇಶಗಳಲ್ಲಿ ಸಾಧರಣ ಮಳೆಯಾಗಿದೆ. ಉಳಿದಂತೆ ಕುಕಟ್ಪಾಳ್ಯ, ಹೈದರ್ನಗರ್, ನಿಜಾಮ್ಪೇಟ್ ಮತ್ತು ಮಲಕಾಪೇಟ್ನಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆ ಸುರಿದಿದೆ. ಸದ್ಯ ಮಳೆಯಿಂದಾಗಿ ನಗರದ ಹಲವು ಕಡೆ ಟ್ರಾಫಿಕ್ ಸಮಸ್ಯೆ ಉಂಟಾಗಿತ್ತು. ರಸ್ತೆ ಮೇಲೆಲ್ಲಾ ನೀರು ತುಂಬಿಕೊಂಡು ಸಂಚಾರ ನಡೆಸಲಾಗದೇ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಭಾರತೀಯ ಹವಮಾನ ಇಲಾಖೆ (IMD)ಮಾಹಿತಿ ಪ್ರಕಾರ, ಮುಂದಿನ ಐದು ದಿನಗಳು ತಮಿಳುನಾಡು, ಹೈದರಾಬಾದ್, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಲಿದ್ದು, ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸೂಚನೆ ನೀಡಿದೆ. ಸದ್ಯಕ್ಕೆ ಕರ್ನಾಟಕದಲ್ಲಿ ಕಳೆದ ಎರಡು ಮೂರು ದಿನದಿಂದ ಮಳೆ ಕೊಂಚ ರಿಲೀಫ್ ಕೊಟ್ಟಿದ್ದು, ಮತ್ತೆ ಆರಂಭವಾಗುವ ಸಾಧ್ಯತೆ ಇದೆ.